ಬೆಂಗಳೂರು
ವಾಹನಕಳವು ಹಸು ಕಳವು ಮನೆಗಳವು,ಸುಲಿಗೆ ಸೇರಿ ಹಲವು ಅಪರಾಧ ಕೃತ್ಯಗಳನ್ನು ಬೇಧಿಸಿ ಭರ್ಜರಿ ಬೇಟೆಯಾಡಿರುವ ವೈಟ್ಫೀಲ್ಡ್ ವಿಭಾಗದ ಪೊಲೀಸರು 42 ಮಂದಿಯನ್ನು ಬಂಧಿಸಿರುವ 1 ಕೋಟಿ 17 ಲಕ್ಷ 38 ಸಾವಿರ ಮೌಲ್ಯದ ಚಿನ್ನ, ಬೆಳ್ಳಿ, ದ್ವಿಚಕ್ರ ವಾಹನಗಳು, ಇನ್ನಿತರ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.
ಕಳೆದ 2018ರ ಡಿಸೆಂಬರ್ 1ರಿಂದ ಫೆ.28ರವರಗೆ ಮೂರು ತಿಂಗಳ ಅವಧಿಯಲ್ಲಿ 42 ಮಂದಿ ಆರೋಪಿಗಳನ್ನು ಬಂಧಿಸಿ ವಿವಿಧ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಿದ ಮಾಹಿತಿ ನೀಡಿದ ವೈಟ್ಫೀಲ್ಡ್ ಡಿಸಿಪಿ ಅಬ್ದುಲ್ ಅಹದ್ ಅವರು ಅಪರಾಧಿಗಳನ್ನು ಬಂಧಿಸಿದ 26 ಮಂದಿ ಸಿಬ್ಬಂದಿಗೆ ತಲಾ 10 ಸಾವಿರ ನಗದು ಕುಟುಂಬದೊಂದಿಗೆ ಪ್ರವಾಸ ಹೋಗಲು 4 ದಿನಗಳ ಸಂಬಳ ಸಹಿತ ರಜೆ ನೀಡುವುದಾಗಿ ತಿಳಿಸಿದ್ದಾರೆ.
ಢಕಾಯಿತಿ ಪ್ರಕರಣದಲ್ಲಿ ಕೆಆರ್ ಪುರಂ ಪೊಲೀಸರು ಬಾಂಗ್ಲಾ ಮೂಲದ ಅಸ್ಲಂ ಅಲಿಯಾಸ್ ಕೊಕನ್ನ್ನು ಬಂಧಿಸಿ 6 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ
ಮನೆ ಮುಂದೆ ಕಟ್ಟಿ ಹಾಕಿದ್ದ ಸೀಮೆ ಹಸುಗಳನ್ನು ಕಳವು ಮಾಡಿದ್ದ ಗಾಂಧಿ ನಗರದ ಸಯೈದ್ ಇಮ್ರಾನ್ (23), ನಾರಾಯಣ್ ಪುರದ ಪ್ರಭು ಅಲಿಯಾಸ್ ಭಂಗ (20), ನಾಗವಾರದ ಆಸೀಫ್ (22), ಅಪ್ಪು (26), ಶನೀಷ್ (24) ಎಂಬುವರನ್ನು ಬಂಧಿಸಿ 16 ಸೀಮೆಹಸುಗಳನ್ನು ಮಹದೇವಪುರ ಪೆÇಲೀಸರು ವಶಪಡಿಸಿಕೊಂಡಿದ್ದಾರೆ ಎಂದು ವಿವರಿಸಿದರು.
ಕೆಆರ್ ಪುರಂ ಪೊಲೀಸರು ದೇವಸಂದ್ರದ ಕುಟ್ಟಿ (31), ಶೀಗೆಹಳ್ಳಿಯ ವಿಶ್ವನಾಥ (23), ಪಾನಿಪುರಿ ಪ್ರಕಾಶ್ (31)ನ್ನು ಬಂಧಿಸಿ 3 ಮೊಬೈಲ್, ಆಟೊ, ಬೈಕ್ನ್ನು ವಶಪಡಿಸಿಕೊಂಡಿದ್ದಾರೆ. ಕಾಡುಗೋಡಿ ಪೊಲೀಸರು ಮನೆಗಳ್ಳತನ ಮಾಡಿದ್ದ ಸಾದರಮಂಗಲದ ಮನೀಶ್ ಕುಮಾರ್ (24)ನ್ನು ಬಂಧಿಸಿ, 1 ಲಕ್ಷ 20 ಸಾವಿರ ನಗದು ಸೇರಿ 2 ಲಕ್ಷ 20 ಸಾವಿರ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ. ಕೆಆರ್ ಪುರಂ ಪೊಲೀಸರು ಮನೆಗಳ್ಳ ರಮೇಶ್ (38)ನನ್ನು ಬಂಧಿಸಿ, ಆತನಿಂದ ಕಳವು ಮಾಲುಗಳನ್ನು ಖರೀದಿಸುತ್ತಿದ್ದ ರಾಂ ಎಂಬ ಮತ್ತೊಬ್ಬನನ್ನು ಸೆರೆ ಹಿಡಿದು 13,83,000 ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬೆಳ್ಳಂದೂರು ಪೊಲೀಸರು ಕೋಲಾರದ ಪ್ರಕಾಶ್ನನ್ನು ಬಂಧಿಸಿ 6 ಲಕ್ಷ 25 ಸಾವಿರ ಮೌಲ್ಯದ 204 ಗ್ರಾಂ ಚಿನ್ನ, 720 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ವೈಟ್ಫೀಲ್ಡ್ ಪೊಲೀಸರು ಮನೆಗಳ್ಳ ಕಾಡುಗೋಡಿಯ ದೇವರಾಜರೆಡ್ಡಿ (32)ನನ್ನು ಬಂಧಿಸಿ 6 ಲಕ್ಷ 35 ಸಾವಿರ ಮೌಲ್ಯದ 200 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಮಹದೇವಪುರ ಪೊಲೀಸರು ಪರಪ್ಪನ ಅಗ್ರಹಾರದ ಮನೆಗಳ್ಳಿ ರಾಧ (32), ಆವನಹಳ್ಳಿಯ ಅಂಜಿನಮ್ಮ (44)ಳನ್ನು ಬಂಧಿಸಿ 9 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೇಳಿದರು.
ರಕ್ತಚಂದನ ಮರ ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿ 30 ಲಕ್ಷ ಮೌಲ್ಯದ 33 ರಕ್ತಚಂದನ ಮರದ ತುಂಡುಗಳನ್ನು ಮಹದೇವಪುರ ಹಾಗೂ ಹೆಚ್ಎಎಲ್ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಆಂಧ್ರದಿಂದ ತಮಿಳುನಾಡಿಗೆ ರಕ್ತಚಂದನ ಮರದ ತುಂಡುಗಳನ್ನು ಲಾರಿಯಲ್ಲಿ ಸಾಗಿಸುತ್ತಿದ್ದಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.
ಮಾದಕವಸ್ತು ಮಾರಾಟ ಮಾಡುತ್ತಿದ್ದ 5 ಮಂದಿಯನ್ನು ಬಂಧಿಸಿ 750 ಗ್ರಾಂ ಅಫೀಮು, 7 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ರಾಜಸ್ತಾನ್ ಮೂಲದ ಶ್ಯಾಮ್ಲಾಲ್ (40), ಬೈರಸಂದ್ರದ ಆಸೀಪ್ ಪಾಷಾ (25), ಅನ್ನಸಂದ್ರ ಪಾಳ್ಯದ ಸೈಯದ್ ಇರ್ಫಾನ್ (20), ಕಾವಲ್ಬೈರಸಂದ್ರದ ಜಿಲ್ಲೂರು (26), ಕಟ್ಟಿಗೇನಹಳ್ಳಿಯ ಶ್ಯಾನ್ ಅವಾಸ್ (25)ನನ್ನು ಬಂಧಿಸಲಾಗಿದೆ.
ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ 17 ಮಂದಿಯನ್ನು ಬಂಧಿಸಿ 31 ಲಕ್ಷ 95 ಸಾವಿರ ಮೌಲ್ಯದ 61 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ವೈಟ್ಫೀಲ್ಡ್ ಪೊಲೀಸರು ಅತ್ತಿಬೆಲೆಯ ಸಾದಿಕ್ ಪಾಷ, ಬುಲೆಟ್ ಖಾನ್, ಸಂತೋಷ್ನನ್ನು ಬಂಧಿಸಿದರೆ, ಮಹದೇವಪುರ ಪೊಲೀಸರು ಈಜಿಪುರದ ಸೈಯದ್ ಆರೀಫ್ನನ್ನು ಬಂಧಿಸಿದ್ದಾರೆ.
ಮನೆಗಳವು ಮಾಡುತ್ತಿದ್ದ 9 ಮಂದಿಯನ್ನು ಬಂಧಿಸಿ 44 ಲಕ್ಷ 13 ಸಾವಿರ ಮೌಲ್ಯದ 1 ಕೆಜಿ 350 ಗ್ರಾಂ ಚಿನ್ನ, 700 ಗ್ರಾಂ ಬೆಳ್ಳಿ, 9 ಎಲ್ಇಡಿ ಟಿವಿಗಳು, 2 ಕ್ಯಾಮರಾ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಕಾಡುಗೋಡಿ ಪೊಲೀಸರು ವೈಟ್ಫೀಲ್ಡ್ನ ಗೌತಮ್ (23) ಬಂಧಿಸಿದ್ದರೆ, ಹೆಚ್ಎಎಲ್ ಪೊಲೀಸರು ಶಿವಾಜಿನಗರದ ವೇಲು (43), ಇಸ್ಲಾಂಪುರದ ಶಬ್ಬೀರ್ (30)ನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.
ಇದಲ್ಲದೆ ಕಾಡುಗೋಡಿ ಪೊಲೀಸರು ವಿಲಿಯಂ (23), ಕಾಡುಗೋಡಿಯ ಆನಂದ್ ರಾಜು, ನದೀಮ್ ಪಾಷಾ (23), ವಿನೀಶ (23)ನನ್ನು ಬಂಧಿಸಿದ್ದಾರೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
