ತಾಲ್ಲೂಕಿನ ಅಭಿವೃದ್ಧಿಗೆ 425 ಕೋಟಿ ರೂ ಮಂಜೂರು : ಜೆ.ಸಿ.ಮಾಧುಸ್ವಾಮಿ.

ಚಿಕ್ಕನಾಯಕನಹಳ್ಳಿ
 
    ತಾಲ್ಲೂಕಿನ ಅಭಿವೃದ್ಧಿಗೆ 425 ಕೋಟಿಗೂ ಹೆಚ್ಚು ಹಣ ಮಂಜೂರಾಗಿದೆ. ರಾಜ್ಯದಲ್ಲಿ 8 ಅಂಬೇಡ್ಕರ್ ಹಾಗೂ ಇಂದಿರಾಗಾಂಧಿ ವಸತಿ ಶಾಲೆಗೆ 118 ಕೋಟಿ ಬಿಡುಗಡೆಯಾಗಿದ್ದು, ಇದರಲ್ಲಿ ತಾಲ್ಲೂಕಿನ ಎರಡು ವಸತಿ ಶಾಲೆಗಳಿಗೆ 55ಕೋಟಿ ರೂ ಬಿಡುಗಡೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
    ತಾಲ್ಲೂಕಿನ ಜೆ.ಸಿ.ಪುರದಲ್ಲಿ ಬುಧವಾರ ನಡೆದ 66ನೇ ಅಖಿಲ ಭಾರತ ಸಹಕಾರ ಸಪ್ತಾಹದ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದರು.ಪಟ್ಟಣದ ಒಳಚರಂಡಿಗೆ 55 ಕೋಟಿ ರೂ,  ಹೇಮಾವತಿ ನಾಲಾ ಕಾಮಗಾರಿಗೆ 46 ಕೋಟಿ ರೂ, ತಾಲ್ಲೂಕಿನ 112 ಕೆರೆಗಳಿಗೆ ನೀರು ಹರಿಸಲು 260 ಕೋಟಿ ರೂ, ತಾಲ್ಲೂಕಿನ ಎರಡು ಅಂಬೇಡ್ಕರ್ ಹಾಗೂ ಇಂದಿರಾಗಾಂಧಿ ವಸತಿ ಶಾಲೆಗೆ 55 ಕೋಟಿ ರೂ. ಹಾಗೂ ಕೆ.ಬಿ.ಕ್ರಾಸ್-ಹುಳಿಯಾರು ರಸ್ತೆ ಅಭಿವೃದ್ಧಿ ಕಾರ್ಯಗಳಿಗೂ ಹಣ ಮಂಜೂರಾಗಿದೆ ಎಂದರು.
     ಸಹಕಾರ ಕ್ಷೇತ್ರ ಗಾಂಧೀಜಿಯವರಿಗೆ ಬಹು ಇಷ್ಟವಾದ ಕ್ಷೇತ್ರವಾಗಿತ್ತು. ಸಣ್ಣಪುಟ್ಟ ಹಣಕಾಸಿನ ವ್ಯವಸ್ಥೆ ಸ್ಥಳೀಯವಾಗಿ ವ್ಯವಸ್ಥೆ ಮಾಡಲು ಆಗದೆ ಇದ್ದುದನ್ನು ಸಹಕಾರ ಸಂಸ್ಥೆಗಳ ಮೂಲಕ ಆರ್ಥಿಕವಾಗಿ ಬೆಳೆಯಲು ಕಾರಣವಾಗಿದೆ. ಸರ್ಕಾರಗಳು ಸಣ್ಣಪುಟ್ಟ ರೈತ ಕಾರ್ಮಿಕರಿಗೆ ಕೃಷಿ ಕ್ಷೇತ್ರದಲ್ಲಿ ಬೀಜ, ರಸಗೊಬ್ಬರ, ವಿದ್ಯುತ್ ಹಾಗೂ ಕೃಷಿ ಕ್ಷೇತ್ರದಲ್ಲಿ ಸಬ್ಸಿಡಿ ನೀಡುವ ಮೂಲಕ ರೈತರು ಬೇರೆಯವರ ಮುಂದೆ ನಿಂತುಕೊಳ್ಳಬಾರದು ಎಂದು ಸಹಕಾರ ಸಂಘಗಳ ಮೂಲಕ ಬಳೆ ಸಾಲ ನೀಡುತ್ತಿದೆ.
 
    ರೈತರು ನಮ್ಮ ಜೀವನವನ್ನು ಸಾಲದ ಮೇಲೆ ಜೀವನ ರೂಪಿಸಿಕೊಳ್ಳಬಾರದು, ನಾವು ದುಡಿದ ಹಣದಲ್ಲಿ ಉಳಿತಾಯ ಮಾಡಿಕೊಂಡು ಜೀವನ ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದ ಅವರು, ನಾನು ಜಿಲ್ಲೆಯಲ್ಲಿ ಕೆ.ಎಮ್.ಎಫ್ ಅಧ್ಯಕ್ಷನಾಗಿದ್ದಾಗ 15 ರಿಂದ 20 ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತಿತ್ತು, ಈಗ ದಿನ ನಿತ್ಯ 75 ಸಾವಿರ ಲೀಟರ್‍ಗೂ ಹೆಚ್ಚು ಹಾಲು ಉತ್ಪಾದನೆಯಾಗುತ್ತಿದೆ. ರಾಜ್ಯದಲ್ಲಿ 75 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ ಎಂದರು.
 
    ಸರ್ಕಾರಗಳು ರೈತರಿಗೆ ನೆರವು ನೀಡುವ ಪರಿಸರ ರಕ್ಷಣೆಗೆ ಬೇವು, ನೇರಳೆ, ಹಲಸು ಗಿಡಗಳನ್ನು ನೀಡಿ ರೈತರು ಆರ್ಥಿಕ ಬೆಳವಣಿಗೆಗೆ ಸಹಾಯ ನೀಡುತ್ತಿದೆ. ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಸರಿಯಾಗಿಲ್ಲದ ಕಾರಣ ಉತ್ಪಾದನೆ ಮಾಡಿರುವ ವಸ್ತುಗಳನ್ನು ಕೊಳ್ಳಲು ರೈತರಿಗೆ ಹಣವಿಲ್ಲದ ಕಾರಣ ಆರ್ಥಿಕ ಪರಿಸ್ಥಿತಿ ಕುಸಿದಿದೆ ಎಂದ ಅವರು, ಜಿಲ್ಲಾ ಕೇಂದ್ರ ಬ್ಯಾಂಕಿನಲ್ಲಿ ತೆಗೆದುಕೊಂಡ ಸಾಲವನ್ನು ಸರಿಯಾಗಿ ಮರುಪಾವತಿಸಿ ಆರ್ಥಿಕವಾಗಿ ಬೆಳವಣಿಗೆಯಾಗಿ ಎಂದ ಅವರು, ಸಹಕಾರ ಸಂಘಗಳಲ್ಲಿ ರಾಜಕೀಯ ತರಬಾರದು.
    ಹುಳಿಯಾರಿನ ವೃತ್ತಕ್ಕೆ ಕನಕದಾಸರ ಹೆಸರನ್ನು ಇಡುವ ಅಧಿಕಾರ ಗ್ರಾಮ ಪಂಚಾಯ್ತಿಗೆ ಇದೆ ಹೊರತು ನಮಗಿಲ್ಲ. ಗ್ರಾಮ ಪಂಚಾಯ್ತಿ ನಡವಳಿಕೆ ಮಾಡಿ ಜಿಲ್ಲಾಧಿಕಾರಿಗಳಿಗೆ ಕಳಿಸಿ ಅನುಮತಿ ಪಡೆದು ನಾಮಕರಣ ಮಾಡಿ ಎಂದು ಹೇಳಿದ್ದೇನೆ ಹೊರತು ಬೇರೆ ಯಾವ ಮಾತನ್ನೂ ಸಹ ಆಡಿಲ್ಲ. ನಮ್ಮ ಮಾತನ್ನು ತಿರುಚಿ, ರಾಜಕೀಯ ಮಾಡಲು ಹೊರಟಿದ್ದಾರೆ ಎಂದರು.
     ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜ್‍ಕುಮಾರ್ ಮಾತನಾಡಿ, ಜೆ.ಸಿ.ಮಾಧುಸ್ವಾಮಿರವರು ನಡೆದಾಡುವ ಸಹಕಾರಿ ಭಂಡಾರದಂತೆ. ಅವರು ಸಹಕಾರಿ ಕ್ಷೇತ್ರಕ್ಕೆ ನೀಡಿರುವ ಹಾಗೂ ನೀಡುತ್ತಿರುವ ಸೇವೆ ಅನನ್ಯವಾದುದು,  ಅವರು, ರೈತರ, ಬಡವರ, ಸ್ತ್ರೀಯರ ಪರವಾಗಿಯೇ ಮಾತನಾಡುತ್ತಾರೆ. ತಾಲ್ಲೂಕಿನ ನೀರಾವರಿಗಾಗಿಯೇ ಸಚಿವರು 260ಕೋಟಿ ಹಣ ಬಿಡುಗಡೆ ಮಾಡಿಸಿ ತಾಲ್ಲೂಕಿನ ಜನತೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದ ಅವರು, ಶಿಕ್ಷಣ, ರಾಜಕೀಯ, ಸಹಕಾರಿ ಇನ್ನಿತರ ಕ್ಷೇತ್ರದಲ್ಲಿ ಮಾಧುಸ್ವಾಮಿಯವರ ಮಾರ್ಗದರ್ಶನ ಪಡೆದವರು ಉನ್ನತವಾಗಿ ಬೆಳೆಯುತ್ತಾರೆ ಎಂದರು.
     ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ.ಜಿ.ವೆಂಕಟೇಗೌಡ, ತುಮಕೂರು ಸಹಕಾರಿ ಹಾಲು ಒಕ್ಕೂಟದ ನಿರ್ದೇಶಕ ಹಳೆಮನೆ ಶಿವನಂಜಪ್ಪ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಹೆಚ್.ಆರ್.ಶಶಿಧರ್, ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಎನ್.ಎನ್. ಶ್ರೀಧರ್, ಹಾಲಿನ ಉತ್ಪಾದಕರ ಸಹಕಾರ ಸಂಘದ ನಂದಿಹಳ್ಳಿಶಿವಣ್ಣ, ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ನಾಗರಾಜು, ಮಾಜಿ ಜಿ.ಪಂ.ಸದಸ್ಯೆ ಲೋಹಿತಾಬಾಯಿ, ತಾ.ಪಂ.ಸದಸ್ಯರಾದ ಕೇಶವಮೂರ್ತಿ, ಇಂದಿರಮ್ಮ, ಡಿಸಿಸಿ ಬ್ಯಾಂಕ್ ಸಿಇಓ ಬಿ.ಎಸ್.ಕುಬೇಂದ್ರನಾಯಕ್, ಮೇಲ್ವಿಚಾರಕ ಎಸ್.ಆರ್.ರಂಗಸ್ವಾಮಿ, ಮ್ಯಾನೇಜರ್ ಕುಮಾರಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link