ತುಮಕೂರು:
ನಗರದ ಮರಳೇನಹಳ್ಳಿ ರಸ್ತೆ ಡಿ.ಎಂ ಪಾಳ್ಯದಲ್ಲಿ ಆ.21ರಂದು ರಾತ್ರಿ ಯುವತಿಯೊಬ್ಬಳನ್ನು ಹಣದಾಸೆಗೆ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ನಗರ ವೃತ್ತ ಪೊಲೀಸರು ಸೆರೆ ಹಿಡಿದಿದ್ದಾರೆ.
ಡಿ.ಎಂ. ಪಾಳ್ಯದ ಉದಯಕುಮಾರ್ ಅವರ ಮನೆಯಲ್ಲಿ ವಾಸವಿದ್ದ ಲೋಕೇಶಯ್ಯ ಅವರ ಮಗಳು ಅಂಜಲಿ(23) ಎಂಬಾಕೆಯನ್ನು ಮಾರಕಾಸ್ತ್ರಗಳಿಂದ ಆ.21ರಂದು ರಾತ್ರಿ 8.45ರ ಸಮಯದಲ್ಲಿ ಕೊಲೆಮಾಡಲಾಗಿತ್ತು. ಈ ಸಂಬಂಧ ಮನೆ ಮಾಲೀಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಆಖಲಿಸಿಕೊಂಡ ನಗರ ಠಾಣೆ ಪೊಲೀಸರು, ಆರೋಪಿಗಳ ಪತ್ತೆಗೆ ನಗರ ವೃತ್ತ ನಿರೀಕ್ಷಕ ನವೀನ್ ಬಿ. ನೇತೃತ್ವದಲ್ಲಿ ನಗರಠಾಣೆ ಎಸ್ಸೈ ಮಂಜುನಾಥ್ ಹಾಗೂ ಸಿಬ್ಬಂದಿಯನ್ನೊಳಗೊಂಡ ತಂಡವನ್ನು ಡಿವೈಎಸ್ಪಿ ತಿಪ್ಪೇಸ್ವಾಮಿ ಮಾರ್ಗದರ್ಶನದಲ್ಲಿ ಎಎಸ್ಪಿ ಉದೇಶ್ ಅವರು ರಚಿಸಿದ್ದಾರೆ.
ತನಿಖೆ ಕೈಗೊಂಡ ತಂಡವು ಆ.30ರಂದು ಆರೋಪಿಗಳಾದ ಮಧುಗಿರಿ ತಾಲೂಕು ಕಳ್ಳಿಗುಟ್ಟೆಯ ಮಾರುತಿ (25), ಯಲ್ಲಾಪುರದ ಧನರಾಜ್ ನಾಯ್ಕ (22)., ಕೊರಟಗೆರೆಯ ಬರಕ ಗ್ರಾಮದ ರಾಜೇಶ್(22), ಭದ್ರಾವತಿ ಮೂಲದ ಮನು(22) ಹಾಗೂ ಹಳೇ ಗುಬ್ಬಿ ಮೂಲದ ಧನು(21) ಎಂಬುವರನ್ನು ಬಂಧಿಸಿದ್ದು, ಆಕೆಯ ಬಳಿಯಿದ್ದ ಹಣ, ಒಡವೆ ದೋಚಲು ಕೊಲೆ ಮಾಡಿದ್ದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಕೆಎ-43 6083 ಸಂಖ್ಯೆಯ ಕಾರು, ಕಬ್ಬಿಣದ 2 ರಾಡು, 7 ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳನ್ನು ಸೆರೆಹಿಡಿಯುವಲ್ಲಿ, ನಗರ ಠಾಣೆ ಸಿಬ್ಬಂದಿಗಳಾದ ಎಎಸ್ಸೈ ರಮೇಶ್, ಮಂಜುನಾಥ್, ನಾಗರಾಜ, ಪ್ರಸನ್ನಕುಮಾರ್, ಜಗದೀಶ್,ಈರಣ್ಣ, ಸೈಯದ್ ಮುಕ್ತಿಯಾರ್, ರಾಮಚಂದ್ರಯ್ಯ, ನವೀನ್ಕುಮಾರ್, ಜೈಪ್ರಕಾಶ್, ಸಿದ್ದೇಶ್ವರ, ದೇವರಾಜು, ಜಿಲ್ಲಾ ಪೊಲೀಸ್ ಕಚೇರಿಯ ರಮೇಶ್, ನರಸಿಂಹರಾಜು ಅವರು ಶ್ರಮಿಸಿದ್ದು, ಆರೋಪಿಗಳ ಪತ್ತೆಗೆ ಶ್ರಮಿಸಿದ ಸಿಪಿಐ ನೇತೃತ್ವದ ತಂಡವನ್ನು ಎಸ್ಪಿ ಡಾ.ಕೆ.ವಂಸಿಕೃಷ್ಣ ಅಭಿನಂದಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/08/dw.gif)