ಬೆಂಗಳೂರು
ಮುಂದೆ ಹೋಗುತ್ತಿದ್ದ ಲಾರಿಯನ್ನು ಹಿಂದಿಕ್ಕಲು ಹೋಗಿ 108 ಆ್ಯಂಬುಲೆನ್ಸ್ ರಸ್ತೆ ವಿಭಜಕ ದಾಟಿ ಪಕ್ಕದ ರಸ್ತೆಗೆ ಬಂದು ವ್ಯಾಗನಾರ್ ಕಾರಿಗೆ ಡಿಕ್ಕಿ ಹೊಡೆದು ಮೂವರು ಮಹಿಳೆಯರು ಸೇರಿ ಒಂದೇ ಐವರು ಮೃತಪಟ್ಟಿರುವ ದಾರುಣ ಘಟನೆ ಯಲಹಂಕ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ಮಧ್ಯರಾತ್ರಿ ನಡೆದಿದೆ.
ಪಶ್ಚಿಮಬಂಗಾಳ ಮೂಲದ ಜಯಂತಿ(65) ಅವರ ಪುತ್ರಿಯರಾದ ಸ್ವಾಗತಾ ಚೌಧರಿ (42),ಸುಜಯಾ (45) ಸ್ವಾಗತಾ ಚೌಧರಿ ಅವರ ಪತಿ ದೀಪಂಕರ್ ಡೇ(46) ಹಾಗೂ ಅವರ ಪುತ್ರ ಧೃವ್ ಡೇ(14) ಎಂದು ಮೃತಪಟ್ಟವರನ್ನು ಗುರುತಿಸಲಾಗಿದೆ.
ಆ್ಯಂಬುಲೆನ್ಸ್ ಚಾಲಕನಿಗೆ ಗಾಯವಾಗಿದ್ದು ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.ಆರ್ಟಿ ನಗರದ ಬಳಿ ವಾಸಿಸುತ್ತಿದ್ದ ಇಡೀ ಕುಟುಂಬದವರು ಚೆನ್ನೈನ ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸುಜಯಾ ಅವರನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಿಟ್ಟು ಬರಲು ಮೃತ ಚಾಲಕ ದೀಪಂಕರ್ ಡೇ ವ್ಯಾಗನ್-ಆರ್ ಕಾರಿನಲ್ಲಿ ರಾತ್ರಿ ಜಯಂತಿ,ಧೃವ್ ಡೇ,ಸ್ವಾಗತಾ ಚೌಧರಿ ಅವರ ಜೊತೆ ಹೋಗಿದ್ದರು.
ಚೆನ್ನೈ ತೆರಳುವ ವಿಮಾನ ತಡವಾಗಿ ಬೆಳಿಗ್ಗೆ ಇದ್ದರಿಂದ ಮತ್ತೆ ಆರ್ಟಿನಗರಕ್ಕೆ ರಾತ್ರಿ 1ರವೇಳೆ ವಾಪಸಾಗುತ್ತಿದ್ದಾಗ ಮಾರ್ಗ ಮಧ್ಯೆ ಯಲಹಂಕದ ಕೋಗಿಲು ಕ್ರಾಸ್ ಮೇಲುಸೇತುವೆ ರಸ್ತೆಯಲ್ಲಿ ಬೆಂಗಳೂರು ಕಡೆಗೆ ಅತಿವೇಗವಾಗಿ ಬರುತ್ತಿದ್ದ 108 ಆ್ಯಂಬುಲೆನ್ಸ್ ಮುಂದೆ ಹೋಗುತ್ತಿದ್ದ ಲಾರಿಯನ್ನು ಹಿಂದಿಕ್ಕುವ ಭರದಲ್ಲಿ ರಸ್ತೆ ವಿಭಜಕ ದಾಟಿ ಪಕ್ಕದ ರಸ್ತೆಗೆ ಬಂದು ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ ಐವರು ಮೃತಪಟ್ಟರೆ ಆ್ಯಂಬುಲೆನ್ಸ್ ಹಾಗೂ ಕಾರು ನಜ್ಜುಗುಜ್ಜಾಗಿವೆ ಆ್ಯಂಬುಲೆನ್ಸ್ನಲ್ಲಿ ರೋಗಿ ಇರಲಿಲ್ಲ ಆದರೂ ಚಾಲಕ ಅತಿವೇಗವಾಗಿ ಚಲಾಯಿಸಿ ಈ ಅಪಘಾತಕ್ಕೆ ಕಾರಣನಾಗಿ ಗಾಯಗೊಂಡಿದ್ದಾನೆ ಆ್ಯಂಬುಲೆನ್ಸ್ ನಲ್ಲಿದ್ದ ಓರ್ವ ವೈದ್ಯಕೀಯ ಸಿಬ್ಬಂದಿ ಯಾವುದೇ ಆಪಾಯವಿಲ್ಲದೇ ಪಾರಾಗಿದ್ದಾರೆ.
ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಯಲಹಂಕ ಸಂಚಾರ ಪೊಲೀಸರು ಮೃತದೇಹಗಳನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಅಪಘಾತಗೊಂಡ ವಾಹನಗಳನ್ನು ತೆರವುಗೊಳಿಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಸಾರಾ ಫಾತಿಮಾ ತಿಳಿಸಿದ್ದಾರೆ.ಮೃತ ದೀಪಂಕರ್ ಡೇ ಅವರು ಮಲ್ಟಿ ಮೀಡಿಯಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ ಸ್ವಾಗತಾ ಚೌಧರಿ ಜೈನ್ ಇಂಟರ್ ನ್ಯಾಷಿನಲ್ ಸ್ಕೂಲ್ನ ಉದ್ಯೋಗಿಯಾಗಿದ್ದರು ಧೃವ್ ಡೇ 9ನೇ ತರಗತಿ ಓದುತ್ತಿದ್ದ ಎಂಂದು ತಿಳಿದುಬಂದಿದೆ.
ಚೆನ್ನೈಗೆ ನಗರದಿಂದ ತೆರಳುವ ವಿಮಾನ ತಡವಾಗಿದ್ದಕ್ಕೆ ಒಂದೇ ಕುಟುಂಬದ ಐವರು ದಾರುಣ ಸಾವಿಗೆ ಕಾರಣವಾಗಿದೆ.ಚೆನ್ನೈನ ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸುಜಯಾ ಅವರನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಿಟ್ಟು ಬರಲು ನಾಲ್ವರು ಹೋಗುತ್ತಿದ್ದರು ಆದರೆ ವಿಮಾನ ತಡವಾಗಿ ಬೆಳಿಗ್ಗೆ 6.30ಕ್ಕೆ ಇದ್ದರಿಂದ ಎಲ್ಲರೂ ಮನೆಗೆ ವಾಪಸಾಗಿ ಮುಂಜಾನೆ ವಿಮಾನ ನಿಲ್ದಾಣಕ್ಕೆ ಹೋಗಲು ನಿರ್ಧರಿಸಿ ವಾಪಾಸಾಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
