ದಾವಣಗೆರೆ:
ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠ ಪಂಚ ದಾಸೋಹ ನಡೆಸುವ ಮೂಲಕ, ವಿಶ್ವದ ಜನರನ್ನು ತನ್ನತ್ತ ಸೆಳೆಯುತ್ತಿದೆ ಎಂದು ಪೀಠದ ಜಗದ್ಗುರು ಶ್ರೀವಚನಾನಂದ ಸ್ವಾಮೀಜಿ ತಿಳಿಸಿದರು.
ನಗರದ ಶಾಮನೂರು ರಸ್ತೆಯ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಸೋಮವಾರ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ ಏರ್ಪಡಿಸಿದ್ದ 16ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ತುಮಕೂರಿನ ಸಿದ್ದಗಂಗಾ ಮಠವು ತ್ರಿವಿಧ ದಾಸೋಹ ನಡೆಸುತ್ತಿದೆ. ಆದರೆ, ನಮ್ಮ ಪೀಠವು ಅಕ್ಷರ, ಅನ್ನ, ಅಶ್ರಯ, ಆರೋಗ್ಯ ಹಾಗು ಆಧ್ಯಾತ್ಮ ಎಂಬ ಪಂಚ ವಿಧದ ದಾಸೋಹ ನಡೆಸುವ ಮೂಲಕ ವಿಶ್ವದ ಜನತೆಯನ್ನು ತನ್ನತ ಸೆಳೆಯುತ್ತಿದ್ದು, ಆದ್ದರಿಂದ ಸಮಾಜ ಬಾಂಧವರು ತನು, ಮನ, ಧನಗಳನ್ನು ಮನಸ್ಪೂರ್ವಕವಾಗಿ ನೀಡುವ ಮೂಲಕ ಪೀಠದಿಂದ ನಡೆಸುತ್ತಿರುವ ಸಮಾಜ ಮುಖಿ ಕಾರ್ಯಗಳಿಗೆ ಕೈಜೋಡಿಸಬೇಕೆಂದು ಕರೆ ನೀಡಿದರು.
ಪೀಠಕ್ಕಾಗಿ ಕೊಡುವ ಮನಸ್ಸುಗಳು ನಮ್ಮಲ್ಲಿ ಸಾಕಷ್ಟಿವೆ. ಆದರೆ, ತೆಗೆದುಕೊಳ್ಳುವ ಕೈ ಪರಿಶುದ್ಧವಾಗಿರಬೇಕು. ಕೇವಲ ಪ್ರವಚನದಿಂದ ಮಾತ್ರ ಸಮಾಜದ ಉದ್ಧಾರ ಸಾಧ್ಯವಿಲ್ಲ. ಮೊದಲು ನಾವು ಅಂದುಕೊಂಡತಹ ಕೆಲಸ ಮಾಡಿ, ಭಕ್ತರಿಗೆ ತೋರಿಸಬೇಕೆಂಬ ಸಂಕಲ್ಪದೊಂದಿಗೆ ಪೀಠವನ್ನು ಎತ್ತರಕ್ಕೆ ಕೊಂಡೊಯ್ಯುವ ಕಾರ್ಯ ಮಾಡಲಾಗುವುದು ಎಂದರು.
ಕೇವಲ ಹತ್ತು-ಹನ್ನೊಂದು ವರ್ಷಗಳನ್ನು ಪೂರೈಸುವ ಪೀಠಕ್ಕೆ ವಿದೇಶಿಗರು ಆಗಮಿಸುತ್ತಿದ್ದು, ವಿದೇಶಿಗರು ಪೀಠಕ್ಕೆ ಪ್ರವಾಸಕ್ಕಾಗಿ ಬರುತ್ತಿಲ್ಲ. ಬದಲಿಗೆ ಇಷ್ಟಲಿಂಗ ಪೂಜೆ, ಧ್ಯಾನ, ಯೋಗ ಕಲಿಯಲು ಬರುತ್ತಿದ್ದಾರೆ. ಇಂತಹ ಸಮಾಜಮುಖಿ ಕಾರ್ಯಗಳನ್ನು ನಡೆಸುವ ಮೂಲಕ ಪೀಠ ಎತ್ತರಕ್ಕೆ ಬೆಳೆಯಬೇಕಾದರೆ, ಭಕ್ತರ ಸಹಕಾರ ಅತ್ಯವಶ್ಯವಾಗಿದೆ ಎಂದು ನುಡಿದರು.
ನಮ್ಮ ಪೀಠವು ಕೆಲವೇ ವರ್ಷಗಳಲ್ಲಿ, ಅನೇಕ ಏಳು-ಬಿಳು ಕಂಡಿದ್ದು, ಕಲ್ಲು, ಮುಳ್ಳುಗಳ ಹಾದಿಯಲ್ಲಿ ಹೂವಾಗಿ ಅರಳಿ ನಿಂತಿದೆ. ಆದ್ದರಿಂದ ಸಮಾಜ ಬಾಂಧವರು ಇದು ನಮ್ಮ ಪೀಠ ಎಂಬ ಹೆಮ್ಮೆ ಪಡಬೇಕು. ಸಾಮಾಜಿಕ, ರಾಜಕೀಯ ಮತ್ತು ಶೈಕ್ಷಣಿಕವಾಗಿ ತುಳಿತಕ್ಕೆ ಒಳಗಾದ ಸಂದರ್ಭದಲ್ಲಿ ಪೀಠ ನಿಮ್ಮ ಜೊತೆಗೆ ಸದಾ ಇರುತ್ತೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.
ಈ ಸಾಮೂಹಿಕ ವಿವಾಹದಲ್ಲಿ 22 ಜೋಡಿ ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಇದೇ ವೇಳೆಯಲ್ಲಿ ಸಮಾಜದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ.ಕೆ.ವಿಕಾಸ್, ಜಿ.ಎನ್.ಗಿರೀಶ್ ಸೇರಿದಂತೆ ಹಲವರನ್ನು ಸನ್ಮಾನಿಸಿ ಗೌರವಿಸಲಾಯಿತು. ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಹಗರಿಬೊಮ್ಮನಹಳ್ಳಿ ಶಾಖಾ ಮಠದ ಪೀಠಾಧ್ಯಕ್ಷ ಶ್ರೀಮಹಾಂತ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಪೀಠದ ಪ್ರದಾನ ಕಾರ್ಯದರ್ಶಿ ಬಿ.ಸಿ. ಉಮಾಪತಿ, ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಮಾಜಿ ಅಧ್ಯಕ್ಷ ಬಾವಿ ಬೆಟ್ಟಪ್ಪ, ನಿಕಟಪೂರ್ವ ಅಧ್ಯಕ್ಷ ಬಸವರಾಜ್ ದಿಂಡೂರು, ರಾಜ್ಯ ಉಪಾಧ್ಯಕ್ಷ ಜಿ.ಪಿ.ಪಾಟೀಲ್, ರಾಜ್ಯ ಪ್ರಧಾನ ಕಾರ್ಯಕದರ್ಶಿ ಹನಸಿ ಸಿದ್ದೇಶ್, ರಾಜ್ಯ ಖಜಾಂಚಿ ಮಲ್ಲಣ್ಣ ಬೊಮ್ಮಸಾಗರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹದಡಿ ನಟರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
