ತುಮಕೂರು
ಟಾರ್ಪಾಲ್, ಪ್ಲಾಸ್ಟಿಕ್ ಚೀಲ ಮತ್ತಿತರ ಉತ್ಪನ್ನಗಳನ್ನು ತಯಾರು ಮಾಡುತ್ತಿದ್ದ ಯಂತ್ರಗಳು ಬೆಂಕಿಗಾಹುತಿಯಾಗಿರುವ ಘಟನೆ ತುಮಕೂರು ಹೊರವಲಯದ ಸಿದ್ಧಾರ್ಥ ಡೆಂಟಲ್ ಕಾಲೇಜು ಎದುರು ನಡೆದಿದೆ. ಶುಕ್ರವಾರ ಮಧ್ಯಾಹ್ನ ಈ ಶೆಡ್ಗೆ ಆಕಸ್ಮಿಕ ಬೆಂಕಿ ಸಂಭವಿಸಿ ಅದರೊಳಗಿದ್ದ ಎಲ್ಲ ವಸ್ತುಗಳು ಸುಟ್ಟು ಭಸ್ಮವಾಗಿವೆ. ಯಂತ್ರಗಳು ಕೆಲಸಕ್ಕೆ ಬಾರದ ರೀತಿಯಲ್ಲಿ ಹಾಳಾಗಿವೆ. ಬಿ.ಎಚ್ರಸ್ತೆಯ ಪಕ್ಕದಲ್ಲೇ ಹೆಗ್ಗೆರೆಯ ರಾಮಣ್ಣ ಎಂಬುವರು ಒಂದು ಶೆಡ್ ನಿರ್ಮಿಸಿ ಅದಕ್ಕೆ ಬಾಡಿಗೆ ಪಾವತಿಸಿ ಕೆಲವು ಚೀಲಗಳನ್ನು ತಯಾರಿಸುವ ಯಂತ್ರಗಳನ್ನು ಅಳವಡಿಸಿದ್ದರು. ಅಲ್ಲದೆ, ಟಾರ್ಪಾಲ್ ಸೇರಿದಂತೆ ಅಕ್ಕಿಚೀಲಗಳನ್ನು ಸಹ ಅಲ್ಲಿ ಮಾರಾಟಕ್ಕೆ ಇಡಲಾಗಿತ್ತು.
ರಾಮಣ್ಣ ಅವರು ತಮ್ಮ ಖಾಸಗಿ ಕಾರ್ಯಕ್ರಮದ ನಿಮಿತ್ತ ಶಿವಮೊಗ್ಗಕ್ಕೆ ತೆರಳಿದ್ದರು. ಶೆಡ್ ನೋಡಿಕೊಳ್ಳುತ್ತಿದ್ದವರು ಅಲ್ಲಿ ಇಲ್ಲದ ಸಮಯದಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ಸುತ್ತಮುತ್ತ ಇದ್ದವರು ಕೂಡಲೇ ಮಾಹಿತಿ ನೀಡಿದ್ದಾರೆ. ಕೆಲವೇ ನಿಮಿಷಗಳಲ್ಲಿ ಬೆಂಕಿ ಹೊತ್ತಿಕೊಂಡು ಅದರೊಳಗಿದ್ದ ಟಾರ್ಪಾಲ್, ಅಕ್ಕಿಚೀಲ ಸೇರಿದಂತೆ ಇನ್ನಿತರೆ ವಸ್ತುಗಳು ಸುಟ್ಟುಹೋಗಿವೆ. ಸುಮಾರು 40 ಲಕ್ಷ ರೂ ಮೌಲ್ಯದ ಯಂತ್ರೋಪಕರಣಗಳು, 15 ಲಕ್ಷ ರೂ ಮೌಲ್ಯದ ಕಚ್ಛಾ ಸಾಮಗ್ರಿಗಳು ಹಾಗೂ ಒಂದು ಬೈಕ್ ಬೆಂಕಿಗೆ ಆಹುತಿಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕದಳ ತೆರಳಿ ಬೆಂಕಿ ನಂದಿಸುವ ವೇಳೆಗೆ ಸಾಕಷ್ಟು ಹಾನಿಯಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ