ಬೆಂಗಳೂರು
ಕಳೆ ಕಸದಿಂದ ಗಬ್ಬು ನಾರುತ್ತಿದ್ದ ಹಲಸೂರು ಕೆರೆಯನ್ನು 70 ಎಂಇಜಿ ಸ್ಯಾಪರ್ಸ್ ಕೇಂದ್ರದ ಯೋಧರು ಬಿಬಿಎಂಪಿ ನೌಕರರ ನೆರವಿನಿಂದ ಸತತ ನಾಲ್ಕು ದಿನಗಳ ಕಾಲ ಶ್ರಮಿಸಿ ಸ್ವಚ್ಛಗೊಳಿಸಿದ್ದಾರೆ.ಬಿಬಿಎಂಪಿ ಸಿಬ್ಬಂದಿ, ಮಾರ್ಷಲ್ಗಳು, ಎಂ.ಇ.ಜಿ(ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್) ಸೈನಿಕರ ಸಹಯೋಗದಲ್ಲಿ ಕಳೆದ 4 ದಿನಗಳಿಂದ ಹಲಸೂರು ಕೆರೆಯ ಸ್ವಚ್ಛತಾ ಕಾರ್ಯ ಕೈಗೊಂಡಿದ್ದಾರೆ.
ಸುಮಾರು 113 ಎಕರೆ ಪ್ರದೇಶದ ಹಲಸೂರು ಕೆರೆಯನ್ನು 30 ಮಾರ್ಷಲ್ಗಳು ಹಾಗೂ 70 ಎಂಇಜಿ ಸೆಂಟರ್ ಸೈನಿಕರು ಕಳೆದ ನಾಲ್ಕು ದಿನಗಳಿಂದ 6 ಬೋಟ್ಗಳ ಸಹಯೋಗದಲ್ಲಿ ಕೆರೆಯಲ್ಲಿ ಬೆಳೆದಿರುವ ಕಳೆ, ಪ್ಲಾಸ್ಟಿಕ್, ಥರ್ಮಕೋಲ್ ಶೀಟ್ ಸೇರಿದಂತೆ 25 ಲೋಡ್ ತ್ಯಾಜ್ಯವನ್ನು ಸ್ವಚ್ಛಗೊಳಿಸಿ, ಗಮನ ಸೆಳೆದಿದ್ದಾರೆ.
ತೀರ್ವ ಸ್ವಚ್ಛತಾ ಅಭಿಯಾನದಡಿ ಎಂಇಜಿ ಸೈನಿಕರು, ಮಾರ್ಷಲ್ಗಳು ಹಾಗೂ ಪೂರ್ವ ವಲಯದ 6 ವಿಭಾಗದ 150 ಪಾಲಿಕೆ ಸಿಬ್ಬಂದಿಗಳು, ಲಾರಿ, ಟ್ರ್ಯಾಕ್ಟರ್ ಗಳು ಹಾಗೂ ಅವಶ್ಯಕ ಸಲಕರಣೆಗಳೊಂದಿಗೆ ಸಾಮೂಹಿಕ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡು ಸಂಪೂರ್ಣ ಕೆರೆಯ ಸ್ವಚ್ಛತಾ ಕಾರ್ಯ ನಡೆಸಿದರು.
ಸ್ವಚ್ಛತಾ ಕಾರ್ಯದ ಕೊನೆ ದಿನವಾದ ಶುಕ್ರವಾರ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ತಪಾಸಣೆ ನಡೆಸಿ ಕೆರೆಯ ಅಂಗಳದ ಸುತ್ತ ಬೆಳೆದಿರುವ ಗಿಡ, ಕಳೆ ಸಾರ್ವಜನಿಕರ ಸುಗಮ ವಾಯುವಿಹಾರಕ್ಕೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ. ಕೆರೆಯನ್ನು ಸುಂದವಾಗಿಸಿರುವ ಎಂಇಜಿ ಸೈನಿಕರು ಹಾಗೂ ಮಾರ್ಷಲ್ ಗಳ ಕ್ರಮ ಪ್ರಶಂಸನೀಯ ಎಂದರು.
70 ಲೋಡ್ ಕಳೆ..!
ಬಿಬಿಎಂಪಿಯ ನೌಕರರೊಂದಿಗೆ ಕೈಜೋಡಿಸಿದ ಕೇಂದ್ರದ ಯೋಧರು 10 ಬೋಟ್ಗಳ ನೆರವಿನಿಂದ ಡಿ.23ರಿಂದ ಐದು ದಿನಗಳ ಕಾಲ ಕೆರೆಯ ಹೂಳೆತ್ತಿದರು. ಅಲ್ಲದೆ, ಜೆಸಿಬಿ ನೆರವಿನಿಂದಲೂ ಹೂಳು ಎತ್ತಲಾಯಿತು. ಕೆರೆಯ ಸುತ್ತ ಬಿದ್ದಿದ್ದ ಒಣ ಕಸವನ್ನೂ ಎತ್ತಲಾಯಿತು ಎಂದು ಕೆರೆ ವಿಭಾಗದ ಮುಖ್ಯ ಅಭಿಯಂತರ ಮೋಹನ್ ಕೃಷ್ಣ ತಿಳಿಸಿದರು.
ಸದಾ ಕಾಲ ನೀರು ಇರುವುದರಿಂದ ಹಲಸೂರು ಕೆರೆಯನ್ನು ಸೈನಿಕರ ತರಬೇತಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆದರೆ ನಗರದ ಕೊಳಚೆ ನೀರು ಪ್ರತಿ ದಿನ ಕೆರೆಗೆ ಸೇರ್ಪಡೆಯಾಗುತ್ತಿರುವುದರಿಂದ ಕೆರೆಯಲ್ಲಿ ಕಳೆ, ಹುಲ್ಲು ಬೆಳೆದು ದುರ್ವಾಸನೆ ಬರುತ್ತಿತ್ತು. ಹೀಗಾಗಿ ಸೇನೆಯು ಕೆರೆಯನ್ನು ಸ್ವಚ್ಛಗೊಳಿಸಿದ್ದಾರೆ.
ಹತ್ತಾರು ಮಂದಿ ಸೈನಿಕರು ದೋಣಿಗಳನ್ನು ಬಳಸಿ ಕೆರೆಯಲ್ಲಿರುವ ಕಳೆಯನ್ನು ಸ್ವಚ್ಛ ಮಾಡಿದ್ದು, ಕೆರೆಯ ಬದಿಗೆ ಸುರಿಯಲಾದ ಕಟ್ಟಡ ತ್ಯಾಜ್ಯ, ಗೃಹ ತ್ಯಾಜ್ಯ, ಅಪಾಯಕಾರಿ ಆಸ್ಪತ್ರೆ ತ್ಯಾಜ್ಯ ಮತ್ತು ಪ್ಲಾಸ್ಟಿಕ್ ತ್ಯಾಜ್ಯದಿಂದ ಕೆರೆಯಿಂದ ಕೊಳೆತ ವಾಸನೆ ಬರುತ್ತಿದ್ದು, ಸಾಂಕ್ರಾಮಿಕ ರೋಗ ಭೀತಿ ಎದುರಾಗಿತ್ತು.ಇದನ್ನ ಸಹ ಸೈನಿಕರು ಸ್ವಚ್ಛಗೊಳಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








