ಬೆಂಗಳೂರು:
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದು 76 ವಸಂತಗಳನ್ನು ಪೂರೈಸಿ 77 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.
ಆದರೆ ಈಗಾಗಲೇ ಪ್ರಕಟಿಸಿದ್ದಂತೆ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ನಿಧನ ಹಾಗೂ ಪುಲ್ವಾಮಾ ಉಗ್ರ ದಾಳಿಯಲ್ಲಿ ಭಾರತೀಯ ಯೋಧರು ಹುತಾತ್ಮರಾದ ಹಿನ್ನೆಲೆಯಲ್ಲಿ ಅವರು ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿಲ್ಲ.
ಈ ಹಿಂದೆಯೇ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ಯಡಿಯೂರಪ್ಪ ಈ ಕುರಿತು ಮನವಿ ಮಾಡಿದ್ದರು.ಯಾರೂ ಕೂಡ ಹಾರ,ತುರಾಯಿ,ಸಿಹಿಯೊಂದಿಗೆ ತಮ್ಮ ನಿವಾಸಕ್ಕೆ ಆಗಮಿಸಬೇಡಿ, ಸಂಭ್ರಮಾಚರಣೆ ಮಾಡಬೇಡಿ.ಶ್ರೀಗಳು ಹಾಗೂ ಯೋಧರ ನಿಧನದಿಂದ ಈ ಬಾರಿ ಹುಟ್ಟುಹಬ್ಬದ ಆಚರಣೆ ಮಾಡಿಕೊಳ್ಳುತ್ತಿಲ್ಲ ಎಂದಿದ್ದರು .
ಅದರಂತೆ ಇಂದು ಯಾವುದೇ ಆಚರಣೆ ಇಲ್ಲದೇ ತಮ್ಮ ಎಂದಿನ ಕಾರ್ಯಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಈ ಸಂಬಂಧ ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿ ಮಾತನಾಡಿದ ಯಡಿಯೂರಪ್ಪ,ಶಿವಮೊಗ್ಗದಲ್ಲಿ ಅರಣ್ಯ ಒತ್ತುವರಿ ಮಾಡಿ ಕೊಂಡು ಕೃಷಿ ಮಾಡುತ್ತಿರುವ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ.ಇದರಿಂದ ಅಲ್ಲಿಯ ರೈತರಿಗೆ ಸಂಕಷ್ಟ ಶುರುವಾಗಿದೆ.
ಈ ವಿಚಾರವಾಗಿ ಶಿವಮೊಗ್ಗದಲ್ಲಿ ಸುಮಾರು 10 ಸಾವಿರ ಜನ ಸೇರಿ ಒಂದು ಕಾರ್ಯಕ್ರಮ ಮಾಡುತ್ತಿದ್ದಾರೆ. ಶಿವಮೊಗ್ಗಕ್ಕೆ ತೆರಳಿ ಆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ. ನಂತರ ಚಿತ್ರದುರ್ಗದಲ್ಲಿ ಒಂದು ಕಾರ್ಯಕ್ರಮ ಇದೆ ಅಲ್ಲಿ ಭಾಗವಹಿಸುತ್ತೇನೆ ಎಂದರು.ಇವತ್ತು ನಿಮ್ಮ ಹುಟ್ಟಿದ ಹಬ್ಬ ಎಂದಿದ್ದಕ್ಕೆ ಎಲ್ಲರಿಗೂ ಒಳ್ಳೆಯದಾಗಲಿ ಎನ್ನುತ್ತಾ ಹೆಚ್ಚು ಮಾತನಾಡದೇ ಯಡಿಯೂರಪ್ಪ ನಿರ್ಗಮಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2018/08/news-24-bsy-yeddyurappa.gif)