ಚಳ್ಳಕೆರೆ
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಹ ಅತಿ ಸುಲಭವಾಗಿ ಯಾವುದೇ ರೀತಿಯ ಆರ್ಥಿಕ ಹೊರೆಯಾಗದಂತೆ ಇಂಜಿನಿಯರಿಂಗ್ ಪದವಿಯನ್ನು ಪಡೆದು ಉತ್ತಮ ಬದುಕನ್ನು ರೂಪಿಸಿಕೊಳ್ಳು ಅಂದಾಜು 58 ಕೋಟಿವೆಚ್ಚದಲ್ಲಿ ಇಂಜಿನಿಯರಿಂಗ್ ಕಾಲೇಜು ನೂತನ ತಂತ್ರಜ್ಞಾನದೊಂದಿಗೆ ನಿರ್ಮಾಣವಾಗುತ್ತಿದ್ದು, ಶೇ.90ರಷ್ಟು ಕಾಮಗಾರಿ ಸಂಪೂರ್ಣವಾಗಿದ್ದು, ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿ ಮುಕ್ತಾಯವಾಗಲಿದ್ದು, ಉದ್ಘಾಟನೆಗಾಗಿ ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಿಎಲ್ಪಿ ಪಕ್ಷದ ನಾಯಕ, ನಿರ್ಗಮನ ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯ ಹಾಗೂ ಸಂಬಂಧಪಟ್ಟ ಸಚಿವರನ್ನು ಆಹ್ವಾನಿಸಲಾಗುವುದು ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.
ಅವರು, ಬುಧವಾರ ಮಧ್ಯಾಹ್ನ ಇಂಜಿನಿಯರಿಂಗ್ ಕಟ್ಟಡದ ಕಾಮಗಾರಿ ವೀಕ್ಷಣೆಗೆ ತೆರಳಿದ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿ, ಜಿಟಿಟಿಸಿ ತರಬೇತಿ ಪಡೆದ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಪದವಿ ಪೂರೈಸಲು ಅವಕಾಶವಿದೆ. ಕಟ್ಟಡ ಕಾಮಗಾರಿ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಈಗಾಗಲೇ ಮುಕ್ತಾಯ ಹಂತದಲ್ಲಿದ್ದು 200 ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುವ ಅವಕಾಶವಿದೆ. ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಹಾಸ್ಟಲ್ ಕಟ್ಟಡವೂ ಸಹ ನಿರ್ಮಾಣವಾಗಿದೆ. ವರ್ಕ್ಶಾಪ್, ಲ್ಯಾಬ್, ಆಡಿಟೋರಿಯಂ ಇನ್ನಿತರ ಕಟ್ಟಡಗಳ ನಿರ್ಮಾಣ ಚುರುಕುಗೊಂಡಿದ್ದು, ವರ್ಕ್ಶಾಪ್, ಲ್ಯಾಬ್ ಇನ್ನಿತರ ಕಡೆಗಳಲ್ಲಿ ಅವಶ್ಯಕವಾಗಿ ಬೇಕಾಗಿರುವ ಪೀಠೋಪಕರಣಗಳಿಗೆ ಟೆಂಡರ್ ಸಲ್ಲಿಸಲು ಸೂಚನೆ ನೀಡಲಾಗಿದೆ ಎಂದರು. ಇಂಜಿನಿಯರಿಂಗ್ ಕಟ್ಟಡ ಕಾವiಗಾರಿ ನಿಗಧಿತ ಅವಧಿಯೊಳಗೆ ಪೂರ್ಣಗೊಳ್ಳಲಿದೆ ಎಂಬ ವಿಶ್ವಾಸವನ್ನು ವ್ಯಕ್ತ ಪಡಿಸಿದರು.
ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಕಾರ್ಯಪಾಲಕ ಅಭಿಯಂತರ ಎಚ್.ವಿ.ಜಯಪ್ರಕಾಶ್ ಮಾಹಿತಿ ನೀಡಿ, ಒಟ್ಟು 58 ಕೋಟಿ ವೆಚ್ಚದ ಯೋಜನೆ ಇದಾಗಿದ್ದು, ಈಗಾಗಲೇ 50 ಕೋಟಿ ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಸರ್ಕಾರ ಈಗಾಗಲೇ 40 ಕೋಟಿ ಹಣವನ್ನು ಬಿಡುಗಡೆಗೊಳಿಸಿದ್ದು, ಉಳಿದ ಅಲ್ಪಸ್ವಲ್ಪ ಕಾಮಗಾರಿಯನ್ನು ಸಹ ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು. ಪ್ರಸ್ತುತ ವರ್ಕ್ಶಾಪ್ ಕಟ್ಟಡ ಪೂರ್ಣಗೊಂಡಿದ್ದು, ಅಲ್ಲಿ ಪೀಠೋಪಕರಣಗಳ ವ್ಯವಸ್ಥೆ ಮಾಡಬೇಕಿದೆ. ಸರ್ಕಾರದಿಂದ ಈಗಾಗಲೇ 40 ಕೋಟಿಹಣ ಬಿಡುಗಡೆಯಾಗಿ ಅದನ್ನು ಅನುಷ್ಠಾನಗೊಳಿಸಲಾಗಿದೆ. ಬೆಂಗಳೂರಿನ ರಾಮ್ಕ್ರಿಶಿ ಇನ್ ಫ್ರಾಸ್ಟ್ರಕ್ಟರ್ ಪ್ರೈ.ಲಿನವರು ಗುತ್ತಿಗೆದಾರರಾಗಿದ್ದು, ಉಡುಪಿಯ ಎ.ಜಿ.ಅಸೋಸಿಯೇಟ್ಸ್ ಯೋಜನೆಯ ರೂಪಿಸಿದೆ ಎಂದರು.
ಈ ಸಂದರ್ಭದಲ್ಲಿ ಕೆಎಚ್ಬಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ಎಸ್.ಎಂ.ರವೀಂದ್ರ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎನ್.ರವಿಕುಮಾರ್, ಜೆಇ ಸುನೀಲ್ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ