ಬೆಂಗಳೂರು
ಆಹಾರ ಪೂರೈಕೆ(ಪುಡ್ ಡೆಲಿವರಿ) ಆಪ್ನಿಂದ ಆರ್ಡರ್ ಮಾಡಿದ ಪಿಜ್ಜಾ ರದ್ದು ಮಾಡಿ ಹಣ ವಾಪಸ್ ಪಡೆಯಲು ಹೋಗಿ 65 ಸಾವಿರ ಕಳೆದುಕೊಂಡ ಸಾಫ್ಟ್ವೇರ್ ಎಂಜಿನಿಯರೊಬ್ಬರು ಕಂಗಲಾಗಿ ಮಡಿವಾಳ ಪೊಲೀಸರಿಗೆ ದೂರು ನೀಡಿದ್ದಾರೆ.ಒಂದು ತಿಂಗಳ ಸಂಬಳದ ಹಣ ಪೂರ್ತಿ ಕಳೆದುಕೊಂಡ ಸಾಫ್ಟ್ವೇರ್ ಉದ್ಯೋಗಿ ಶೈಕ್ ಅವರು ನೀಡಿರುವ ದೂರು ದಾಖಲಿಸಿಕೊಂಡಿರುವ ಮಡಿವಾಳ ಪೊಲೀಸರು ಸೈಬರ್ ಪೊಲೀಸರ ನೆರವಿನೊಂದಿಗೆ ದುಷ್ಕರ್ಮಿಗಳ ಪತ್ತೆಗೆ ಶೋಧ ನಡೆಸಿದ್ದಾರೆ
ಕಳೆದ ಡಿ.1ರ ಮಧ್ಯಾಹ್ನ 3.30ಕ್ಕೆ ಸಾಫ್ಟ್ವೇರ್ ಉದ್ಯೋಗಿ ಶೈಕ್ ಫುಡ್ ಡೆಲಿವರಿ ಆಪ್ನಿಂದ ಪಿಜ್ಜಾ ಆರ್ಡರ್ ಮಾಡಿದ್ದು ಒಂದು ಗಂಟೆ ಕಳೆದರೂ ಪಿಜ್ಜಾ ಬಾರದಿರುವುದನ್ನು ನೋಡಿ, ಆನ್ಲೈನ್ನಲ್ಲಿ ಆ ಆಪ್ನ ಕಸ್ಟಮರ್ ಕೇರ್ ಕರೆ ಮಾಡಿದ್ದಾರೆ. ಇದಾದ ಎರಡು ಗಂಟೆಯೊಳಗೆ ಶೈಕ್ ಬ್ಯಾಂಕ್ ಖಾತೆಯಿಂದ 95 ಸಾವಿರ ಮಾಯವಾಗಿದೆ.ತಿಂಗಳ ಸಂಬಳ ಮತ್ತು ಉಳಿತಾಯವನ್ನು ಕಳೆದುಕೊಂಡ ಶೈಕ್ ಮಡಿವಾಳ ಪೊಲೀಸ್ ಠಾಣೆಗೆ ಹೋಗಿ ಈ ಆನೈಲೈನ್ ವಂಚನೆ ಬಗ್ಗೆ ದೂರು ದಾಖಲಿಸಿದ್ದಾರೆ.
‘ಕಸ್ಟಮರ್ಕೇರ್ಗೆ ಕರೆ ಮಾಡಿದಾಗ ಅವರು, ಸದ್ಯ ನಾವು ಪಿಜ್ಜಾ ಆರ್ಡರ್ ತೆಗೆದುಕೊಳ್ಳುತ್ತಿಲ್ಲ. ನಿಮ್ಮ ಹಣವನ್ನು ಮರುಸಂದಾಯ ಮಾಡುತ್ತೇವೆ. ಶೀಘ್ರ ಹಣ ವಾಪಸ್ ಆಗಬೇಕೆಂದರೆ, ನಾವು ಕಳುಹಿಸುವ ಲಿಂಕ್ನಲ್ಲಿನ ವಿವರಗಳನ್ನು ಭರ್ತಿ ಮಾಡಿ ಕಳುಹಿಸಿ ಎಂದು ಹೇಳಿದರು ಎಂದು ಶೈಕ್ ದೂರಿನಲ್ಲಿ ವಿವರಿಸಿದ್ದಾರೆ.
ವಂಚಕರೊಂದಿಗೆ ಮಾತನಾಡುತ್ತಿದ್ದೇನೆ ಎನ್ನುವ ಸಣ್ಣ ಸುಳಿವು ನನಗೆ ಸಿಕ್ಕಿರಲಿಲ್ಲ ಅವರು ಹೇಳಿದಂತೆ ಲಿಂಕ್ನಲ್ಲಿನ ವಿವರಗಳನ್ನು ಭರ್ತಿ ಮಾಡುತ್ತಿದ್ದಂತೆ ಅವರ ಎಚ್ಡಿಎಫ್ಸಿ ಬ್ಯಾಂಕ್ ಖಾತೆಯಿಂದ 45 ಸಾವಿರ ಕಡಿತಗೊಂಡಿದೆ. ಆ ಖಾತೆಯಲ್ಲಿದ್ದ ಉಳಿದ 50 ಸಾವಿರನ್ನು ಮತ್ತೊಂದು ಬ್ಯಾಂಕ್ ಖಾತೆಗೆ ವರ್ಗಾಯಿಸಬೇಕು ಎನ್ನುವಷ್ಟರಲ್ಲಿ ಅದೂ ಸಹ ಕಡಿತವಾಗಿದ್ದು ಒಟ್ಟಾರೆ 95 ಸಾವಿರ ಕಳೆದುಕೊಂಡಿದ್ದೇನೆ.
ಚಿಕಿತ್ಸೆಯ ಹಣ
‘ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಮಾತನಾಡುತ್ತಿದ್ದ ವಂಚಕರು ಕಳುಹಿಸಿದ ಲಿಂಕ್ನಲ್ಲಿ, ಯಾವ ಖಾತೆಗೆ ಹಣ ಮರುಪಾವತಿಸಬೇಕು ಎನ್ನುವ ವಿವರ ಹಾಗೂ ನನ್ನ ಫೋನ್ಪೇ ಬಳಕೆದಾರರ ಹೆಸರು (ಯೂಸರ್ನೇಮ್) ನಮೂದಿಸಬೇಕಿತ್ತು. ಅದನ್ನು ಭರ್ತಿ ಮಾಡಿದೆ. ಆದರೆ, ನನ್ನ ಖಾತೆಯಿಂದ ಹಣ ಹೋಗುತ್ತದೆ ಎನ್ನುವ ಸಣ್ಣ ಕಲ್ಪನೆಯೂ ನನಗೆ ಇರಲಿಲ್ಲ,’ ಎಂದು ತಿಳಿಸಿದ್ದಾರೆ.
‘ನವೆಂಬರ್ 29ರಂದು ಸಂಬಳವಾಗಿತ್ತು. ನನ್ನ ತಾಯಿಯ ಆರೋಗ್ಯ ಸರಿ ಇರಲಿಲ್ಲ. ಅವರ ಚಿಕಿತ್ಸೆಗಾಗಿ ಹಣ ಕೂಡಿಟ್ಟಿದ್ದೆ. ಅದೆಲ್ಲವೂ ಹೋಯಿತು. ಯಾವ ಖಾತೆಗೆ ತನ್ನ ಹಣ ಹೋಗಿದೆ ಎನ್ನುವ ವಿವರವೂ ನನ್ನ ಬಳಿ ಇದೆ. ವಂಚಕರನ್ನು ದಯವಿಟ್ಟು ಪತ್ತೆ ಹಚ್ಚಿ’ ಎಂದು ಪೊಲೀಸರ ಬಳಿ ನೋವು ತೋಡಿಕೊಂಡಿದ್ದಾರೆ.ಮಡಿವಾಳ ಪೊಲೀಸರು ದೂರು ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








