ಉತ್ತಮ ದಾರಿ ತೋರುವವನೇ ದಾರ್ಶನಿಕ : ಸಚಿವ ಮಾಧುಸ್ವಾಮಿ

ತುಮಕೂರು

     ಧರ್ಮಸ್ಥಳ ಧರ್ಮಾಧಿಕಾರಿಗಳಾಸ ಡಾ. ವೀರೇಂದ್ರ ಹೆಗ್ಗಡೆಯವರ ವ್ಯಸನ ಮುಕ್ತ ತತ್ವ ಇಂದು ಎಲ್ಲೆಡೆ ಮನೆಮಾತಾಗಿದೆ. ಅವರ ದಾರಿ ಸುಗಮವಾಗಿದ್ದು ಎಲ್ಲರೂ ಅಂತಹ ಉತ್ತಮ ದಾರಿ ತೋರುವ ದಾರ್ಶನಿಕರನ್ನು ಹಿಂಬಾಲಿಸಬೇಕು. ಸಮಾಜ ಗುರುತಿಸುವಂತಹ ಕೆಲಸಗಳನ್ನು ಮಾಡಬೇಕು. ಕೆಟ್ಟ ಕೆಲಸಗಳಿಂದ ಅಥವಾ ಕೆಟ್ಟ ಚಟಗಳಿಂದ ನಾವು ಇನ್ನೊಬ್ಬರಿಂದ ಅವಹೇಳಿತರಾಗಬಾರದು. ದುಷ್ಟ ಚಟಗಳಿಗೆ ದಾಸರಾದವರು ಜೀವನದಲ್ಲಿ ಉದ್ಧಾರವಾಗುವುದಿಲ್ಲ ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ ಮಾಧುಸ್ವಾಮಿ ತಿಳಿಸಿದರು.

      ನಗರದ ಕುಂಚಿಟಿಗ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಹಾಗೂ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಗಾಂಧಿ ಜಯಂತಿ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನಜಾಗೃತಿ ಜಾಥಾ ಮತ್ತು ವ್ಯಸನ ಮುಕ್ತರ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

     ಮಹಾತ್ಮ ಗಾಂಧಿಯವರಿಗೆ ಗೌರವ ನೀಡಬೇಕಾದರೆ ಅವರ ತತ್ವಗಳನ್ನು ರೂಢಿಸಿಕೊಳ್ಳಬೇಕು. ಅವರ ಮಂತ್ರಗಳನ್ನು ಪಾಲಿಸಬೇಕು. ಸಾಧಾರಣ ಮನುಷ್ಯನೊಬ್ಬನ ಶ್ರೇಷ್ಠ ಬದುಕೆಂದರೆ ಅದು ಗಾಂಧೀಜಿಯದು. ಬದುಕಿನ ಆಯಾಮಗಳಲ್ಲಿ ಸರಿ ಹಾಗೂ ತಪ್ಪುಗಳನ್ನು ಸಮದೂಗಿಸುತ್ತಾ ಬೆಳೆದ ಮಹಾತ್ಮ ಗಾಂಧೀಜಿಯ ಸಂಘಟನಾ ಶಕ್ತಿಗೆ ಎಷ್ಟು ಬಲವಿದೆ ಎನ್ನುವುದು ಇಡೀ ವಿಶ್ವಕ್ಕೆ ಗೊತ್ತು. ಗಾಂಧಿ ವಿಶ್ವಕೋಶವಿದ್ದಂತೆ ಎಂದ ಸಚವರು, ನಮ್ಮನ್ನು ನಾವೇ ಉದ್ಧಾರ ಮಾಡಿಕೊಳ್ಳಬೇಕು. ನಮ್ಮ ಹಣೆ ಬರಹವನ್ನು ನಾವೇ ಬರೆದುಕೊಳ್ಳಬೇಕು. ಮನುಷ್ಯ ತಪ್ಪು ಮಾಡುವುದು ಸಹಜ. ತಪ್ಪನ್ನು ಮಾಡದವರು ಯಾರೂ ಇಲ್ಲ, ಆದರೆ ಮಾಡಿದ ತಪ್ಪನ್ನು ಪುನಃ ಮಾಡುವುದು ಅಕ್ಷಮ್ಯ ಅಪರಾಧ ಎಂದು ಹೇಳಿದರು.

   ಅವರ ಒಂದು ಕರೆಗೆ ದೇಶ ಲಕ್ಷಾಂತರ ಜನರು ಸೇರುತ್ತಿದ್ದರೆ ಎಂದರೆ ಅವರ ಶಕ್ತಿ ಸಾಮಥ್ರ್ಯವನ್ನು ಹೇಳ ತೀರದು. ವರ್ಷದ 365 ದಿನಗಳಲ್ಲಿ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಹುಟ್ಟಿದ ದಿನ ಶ್ರೇಷ್ಠ ದಿನ. ಗಾಂಧಿಯ ಸ್ವಚ್ಛತಾ ಮಂತ್ರವನ್ನು ಪಾಲಿಸಿ ನಿಮ್ಮ ಮನೆಯ ಕಸವನ್ನು ಇನ್ನೊಬ್ಬರ ಮನೆಗೆ ಹಾಕದೆ ತಮ್ಮ ಮನೆಯ ಕಸವನ್ನು ತಾವೇ ಸ್ವಚ್ಛವಾಗಿಟ್ಟಕೊಳ್ಳಬೇಕು. ಮನೆ ಮತ್ತು ಮನ ಸ್ವಚ್ಛವಾಗಿದ್ದರೆ ದೇಶವೇ ಸ್ವಚ್ಛವಾಗಿರುತ್ತದೆ ಎಂದರು.

    ಬೆಂಗಳೂರಿನ ಧರ್ಮಸ್ಥಳ ಜ್ಞಾನಕೇಂದ್ರದ ಅಧ್ಯಕ್ಷೆ ಶ್ರದ್ಧಾ ಅಮಿತ್ ಮಾತನಾಡಿ, ಗಾಂಧಿಯನ್ನು ನಾವು ಕ್ರಾಂತಿಕಾರಿ ಎನ್ನುವುದಿಲ್ಲ, ಶಾಂತಜೀವಿ ಸ್ವತಂತ್ರ ಹೋರಾಟಗಾರ ಎನ್ನುತ್ತೇವೆ. ದೇಶವನ್ನು ಕಟ್ಟುವ ನಿಟ್ಟಿನಲ್ಲಿ ಗಾಂಧಿ ಪಾತ್ರ ದೊಡ್ಡದು. ಅವರು ಕ್ರಾಂತಿಕಾರಿ ಸಂಘವನ್ನು ಕಟ್ಟಲಿಲ್ಲ, ಬದಲಾಗಿ ಸಬರಮತಿ ಎಂಬ ಆಶ್ರಮವನ್ನು ಕಟ್ಟಿದರು. ಶಾಂತಿಯುತ ಅಹಿಂಸೆಯ ಹೋರಾಟಗಾರ ಗಾಂಧಿಯು ದುಶ್ಚಟವನ್ನು ನಿಚ್ಚಳವಾಗಿ ವಿರೋಧಿಸಿದವರು ಎಂದು ಹೇಳಿದರು.

    ನಮ್ಮ ಜನ್ಮ, ಸಂಸ್ಕೃತಿ ನಮ್ಮ ದೇಶವನ್ನು ಒಗ್ಗೂಡಿಸುತ್ತದೆ. ಗಾಂಧಿ ಕನಸಿನ ಭಾರತ ನಮ್ಮೆಲ್ಲರ ಹೆಜ್ಜೆಯ ಮೇಲಿದೆ. ನೀವು ವ್ಯಸನಿಗಳಾಗಬೇಡಿ, ಒಬ್ಬರಿಂದ ಇಡೀ ಕುಟುಂಬದ ನೆಮ್ಮದಿ ಹದಗೆಡುತ್ತದೆ. ವ್ಯಸನಮುಕ್ತರಾಗಿ ಶಾಂತಿಯುತ ನವ ಜೀವನವನ್ನು ಕಟ್ಟಿ, ನಮ್ಮ ನವಜೀವನ ಸಮಿತಿ ನಿಮ್ಮ ಸಹಾಯಕ್ಕಿದೆ ಎಂದರು.

   ನಗರ ಪಾಲಿಕೆ ಮೇಯರ್ ಲಲಿತಾ ರವೀಶ್ ಮಾತನಾಡಿ, ಒಬ್ಬ ಮನುಷ್ಯ ಯಾವ ದುಶ್ಚಟವಿಲ್ಲದೆ ಜೀವನ ನಡೆಸಿದರೆ ಆತನ ಪರಿವಾರ ನೆಮ್ಮದಿಯ ಬಾಳನ್ನು ನಡೆಸಲು ಸಹಾಯವಾಗುತ್ತದೆ. ಈ ಮಾರಕ ದುಶ್ಚಟಗಳಿಗೆ ಬಲಿಯಾಗದೆ ನಿಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿದೆ ದೇಶದ ಉನ್ನತ ಹುದ್ದೆಗಳನ್ನು ಅಲಂಕರಿಸಿ ದೇಶಕ್ಕೆ ಸೇವೆ ಸಲ್ಲಿಸುವಂತೆ ಮಾಡಿ ಎಂದರು.

    ತುಮಕೂರು ವಿವಿ ಉಪ ಕುಲಸಚಿವ ಡಾ.ರಮೇಶ್ ಸಾಲಿಯಾನ್ ಮಾತನಾಡಿ, ಕುಡಿತದಿಂದ ಮನುಷ್ಯ ಆತ್ಮವಂಚನೆ ಮಾಡಿಕೊಳ್ಳುತ್ತಾನೆ. ಇದರಿಂದ ದೈಹಿಕ ಮತ್ತು ಮಾನಸಿಕವಾಗಿ ಕುಗ್ಗಿ ವಿವಿಧ ರೋಗ ರುಜಿನಗಳಿಗೆ ತುತ್ತಾಗುತ್ತಾನೆ. ಕೊನೆಗೆ ಹೆಂಡತಿ ಮಕ್ಕಳು ತನ್ನ ಕುಟುಂಬವನ್ನೇ ತೊರೆಯುತ್ತಾನೆ ಹೀಗಾಗುವುದು ಬೇಡ ಕುಡಿತ ಬದುಕನ್ನು ಬೀದಿಗೆಳೆಯುತ್ತದೆ. ಕಟ್ಟ ಪಟ್ಟು ದುಡಿದ ಹಣವನ್ನು ಕುಡಿತಕ್ಕೆ ಚೆಲ್ಲಿದರೆ ಸಂಸಾರದ ಗತಿಯೇನು ಎಂದು ಪ್ರಶ್ನಿಸಿದರು.

     ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಪ್ರೆಸ್ ರಾಜಣ್ಣ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕರಾದ ರಾಮಸ್ವಾಮಿ, ಜಿಲ್ಲಾ ಕುಂಚಿಟಿಗ ಒಕ್ಕಲಿಗರ ವಿದ್ಯಾಭಿವೃದ್ಧಿ ಸಂಘದ ಕಾರ್ಯಾಧ್ಯಕ್ಷ ಆರ್.ಕಾಮರಾಜು ಸೇರಿದಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಪದಾಧಿಕಾರಿಗಳು ಸದಸ್ಯರು ಹಾಗೂ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿಕಲ ಚೇತನರಿಗೆ ವೀಲ್ ಚೇರ್‍ಗಳನ್ನು ವಿತರಿಸಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link