ಸಚಿವ ಸಂಪುಟ ವಿಸ್ತರಣೆ ಬಳಿಕ ಸಿಎಂ ಬಳಿ ನಿಯೋಗ

ಚಿತ್ರದುರ್ಗ

     ತುಮಕೂರು-ಚಿತ್ರದುರ್ಗ-ದಾವಣಗೆರೆ ನಡುವಿನ ನೇರ ರೈಲು ಮಾರ್ಗದ ಭೂ ಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸುವಂತೆ ಆಗ್ರಹಿಸಿ ಸಚಿವ ಸಂಪುಟ ವಿಸ್ತರಣೆ ನಂತರ ಮುಖ್ಯಮಂತ್ರಿ ಬಳಿಗೆ ನಿಯೋಗ ತೆರಳುವ ನಿರ್ಣಯವನ್ನು ಬುಧವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸಮಾವೇಶಗೊಂಡಿದ್ದ ರೇಲ್ವೆ ಹೋರಾಟ ಸಮಿತಿ ಸಭೆಯಲ್ಲಿ ನಿರ್ಣಯಿಸಲಾಯಿತು. ಸಮಿತಿ ಅಧ್ಯಕ್ಷ ಪಿ.ಕೋದಂಡ ರಾಮಯ್ಯ ಅಧ್ಯಕ್ಷತೆ ವಹಿಸಿದ್ದರು.

    ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಕೋದಂಡರಾಮಯ್ಯ, ಎರಡು ತಿಂಗಳ ಹಿಂದೆಯೇ ಮುಖ್ಯಮಂತ್ರಿಗಳ ಭೇಟಿ ಮಾಡಬೇಕಾಗಿತ್ತು. ಉಪ ಚುನಾವಣೆ ಹಾಗೂ ನಂತರ ಎದುರಾದ ಸಚಿವ ಸಂಪುಟ ವಿಸ್ತರಣೆ ಕಾರಣಕ್ಕೆ ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಈಗಾಗಲೇ ಮುಖ್ಯಮಂತ್ರಿಗಳ ಸಲಹೆಗಾರರ ಸಂಪರ್ಕಿಸಿ ಮತ್ತೊಂದು ದಿನಾಂಕ ನಿಗಧಿ ಮಾಡುವಂತೆ ಮನವಿ ಮಾಡಲಾಗಿದೆ. ಅಲ್ಲಿಂದ ಉತ್ತರ ಬಂದ ನಂತರ ಹೋರಾಟ ಸಮಿತಿಯಿಂದ ನಿಯೋಗ ತೆರಳಲಾಗುವುದೆಂದರು.

     ಭೂ ಸ್ವಾಧೀನ ಪ್ರಕ್ರಿಯೆ ಕುರಿತಂತೆ ಚಿತ್ರದುರ್ಗದ ಉಪ ವಿಭಾಗಾಧಿಕಾರಿಗಳು ಹೋರಾ ಸಮಿತಿಗೆ ಸುದೀರ್ಘ ಪತ್ರ ಬರೆದು ಸದ್ಯದ ಸ್ಥಿತಿಗತಿ ಮನವರಿಕೆ ಮಾಡಿಕೊಟ್ಟಿದ್ದಾರೆ. ಚಿತ್ರದುರ್ಗ ತಾಲೂಕಿನ 25 ಗ್ರಾಮಗಳ 389 ಎಕರೆ ಹಾಗೂ ಹಿರಿಯೂರು ತಾಲೂಕಿನ 19 ಗ್ರಾಮಗಳ 639 ಎಕರೆ ಸೇರಿದಂತೆ ಒಟ್ಟು 1028 ಎಕರೆಯಷ್ಟು ಭೂಮಿ ರೇಲ್ವೆ ಮಾರ್ಗಕ್ಕೆ ಬೇಕಾಗಿದೆ. ಭೂ ಸ್ವಾ„ೀನದ ವಿಚಾರದಲ್ಲಿ ಈಗಾಗಲೇ ನಾಲ್ಕು ಹಂತದಲ್ಲಿ 11(1) ಅ„ಸೂಚನೆ ಹೊರಡಿಸಲಾಗಿದ್ದು ರಾಜ್ಯಪತ್ರದಲ್ಲಿ ಪ್ರಕಟವಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

    ಹಿರಿಯೂರು ತಾಲೂಕಿನ 19 ಗ್ರಾಮಗಳಲ್ಲಿ ಜಂಟಿ ಸರ್ವೆ ಕಾರ್ಯ ಮುಕ್ತಾಯಗೊಂಡಿದೆ. ಚಿತ್ರದುರ್ಗ ತಾಲೂಕಿನ 25 ಗ್ರಾಮಗಳ ಪೈಕಿ 10 ಗ್ರಾಮಗಳ ಜಂಟಿ ಅಳತೆ ಸರ್ವೆ ಕಾರ್ಯ ಪೂರ್ಣಗೊಂಡಿದ್ದು 15 ಗ್ರಾಮಗಳ ಅಳತೆ ಪ್ರಗತಿಯಲ್ಲಿದೆ. ಮಾರ್ಚ್ ಅಂತ್ಯದೊಳಗೆ ಸಮೀಕ್ಷೆ ಪೂರ್ಣಗೊಳಿಸಲಾಗುವುದು. ಲಭ್ಯವಿರುವ ಹೊರಗುತ್ತಿಗೆ ಸಿಬ್ಬಂದಿ ನೆರವು ಪಡೆದು ಸಮೀಕ್ಷೆ ಕಾರ್ಯ ಚುರುಕುಗೊಳಿಸಲಾಗುತ್ತಿದೆ.

    ದಕ್ಷಿಣ ರೇಲ್ವೆ ಮುಖ್ಯ ಇಂಜಿನಿಯರ್ ಬೌಂಡ್ರಿ ಸ್ಟೋನ್ ಮತ್ತು ಸೆಂಟರ್ ಲೈನ್ ಹಾಕಿಕೊಡಲು ಸುಮಾರು ಆರು ತಿಂಗಳಷ್ಟು ವಿಳಂಬ ಮಾಡಿದ್ದಾರೆ. ಹಾಗಾಗಿ ಜಂಟಿ ಸರ್ವೆ ಕಾರ್ಯ ನಿಗಧಿತ ವೇಳೆಯಲ್ಲಿ ಪೂರ್ಣಗೊಳ್ಳಲು ಸಾಧ್ಯವಾಗಿಲ್ಲ. ವಿಳಂಬಕ್ಕೆ ರೇಲ್ವೆ ಇಲಾಖೆಯೇ ಕಾರಣವೆಂದು ಉಪ ವಿಭಾಗಾಧಿಕಾರಿಗಳು ಪತ್ರದಲ್ಲಿ ಉಲ್ಲೇಖಿಸಿರುವುದಾಗಿ ಕೋದಂಡರಾಮಯ್ಯ ಸಭೆಯ ಗಮನಕ್ಕೆ ತಂದರು.

    ಸರ್ಕಾರಕ್ಕೆ ಪ್ರಸ್ತಾವನೆ ಭೂ ಸ್ವಾದೀನಕ್ಕೆ ವಿಶೇಷ ಭೂ ಸ್ವಾಧೀನ ಅಧಿಕಾರಿಗಳ ನೇಮಕ ಕುರಿತು ಜಿಲ್ಲಾಧಿಕಾರಿಗಳಿಂದ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ. ಈ ಕುರಿತು ಮುಖ್ಯಮಂತ್ರಿ ಬಳಿಗೆ ನಿಯೋಗ ತೆರಳಿದಾಗ ವಿಷಯ ಪ್ರಸ್ತಾಪಿಸಿ ಶೀಘ್ರ ವಿಶೇಷ ಭೂ ಸ್ವಾಧೀನ ಅಧಿಕಾರಿಗಳ ನೇಮಕಕ್ಕೆ ಒತ್ತಾಯಿಸಲಾಗುವುದೆಂದು ಕೋದಂಡರಾಮಯ್ಯ ಸಭೆಗೆ ತಿಳಿಸಿದರು.

    ರೇಲ್ವೆ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ರಮಾನಾಗರಾಜ್ ,ಕಾರ್ಯಾಧ್ಯಕ್ಷ ಮುರುಘರಾಜೇಂದ್ರ ಒಡೆಯರ್ ,ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಎಂ.ಶಂಕರಪ್ಪ, ಸಮಿತಿ ಪದಾಧಿಕಾರಿ ಗಳಾದ ಶಿವುಯಾದವ್ , ಬಿ.ಪಿ.ಲಿಂಗಾರೆಡ್ಡಿ, ಕೃಷ್ಣಪ್ಪ, ಕುರುಬರಹಳ್ಳಿ ಶಿವಣ್ಣ, ಹನುಮಂತಪ್ಪ, ಎಂ.ಬಿ.ಜಯದೇವ ಮೂರ್ತಿ , ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link