ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಬಂದಿ: ಮೇ 23ಕ್ಕೆ ಬಹಿರಂಗ

ತುಮಕೂರು

     ಲೋಕಸಭಾ ಚುನಾವಣೆಯ ಅಬ್ಬರ ಮುಗಿದು, ರಾಜಕೀಯ ಬಳಗದಲ್ಲಿ ನೀರವ ಮೌನದ ನಿರಾಳ ಅನುಭವ ಕಂಡುಬಂದಂತಿದೆ. ಇಪ್ಪತ್ತು ದಿನಗಳಿಂದ ಪ್ರಚಾರ ಒತ್ತಡದಲ್ಲಿ ಬಳಲಿಹೋಗಿದ್ದ ಮುಖಂಡರು ವಿಶ್ರಾಂತಿಗೆ ತೆರಳಿದ್ದಾರೆ. ಜೊತೆಗೆ ಚುನಾವಣೆ ಸೋಲು ಗೆಲುವಿನ ಲೆಕ್ಕಾಚಾರಗಳೂ ಶುರುವಾಗಿವೆ. 18ರಂದು ಮತದಾನ ನಡೆದರೂ ಚುನಾವಣಾ ಫಲಿತಾಂಶಕ್ಕಾಗಿ ಮೇ 23ರವರೆಗೆ ಕಾಯಬೇಕಾಗಿದೆ.

       ಸಂಸತ್ ಪ್ರವೇಶ ಬಯಸಿದ್ದ ಮೈತ್ರಿ ಅಭ್ಯರ್ಥಿ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು, ಬಿಜೆಪಿ ಅಭ್ಯರ್ಥಿ ಜಿ ಎಸ್ ಬಸವರಾಜು ಸೇರಿದಂತೆ ತುಮಕೂರು ಕ್ಷೇತ್ರದ 15 ಮಂದಿಯ ಚುನಾವಣಾ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ. ಗುರುವಾರ 12,38,624 ಮತದಾರರು ತಮ್ಮ ಹಕ್ಕು ಚಲಾಯಿಸಿದ ನಂತರ 1907 ಮತಗಟ್ಟೆಗಳ ಮತಯಂತ್ರಗಳನ್ನು ತಂದು ನಗರದ ಸರ್ಕಾರಿ ಪಾಲಿಟೆಕ್ನಿಕ್‍ನಲ್ಲಿ ಭದ್ರ ಕಾವಲಿನಲ್ಲಿ ಇರಿಸಲಾಗಿದೆ. ಇಲ್ಲಿ ಮೂರು ಸುತ್ತಿನ ಕಾವಲು ನಿಯೋಜಿಸಲಾಗಿದೆ. ಮೊದಲ ಸುತ್ತಿನಲ್ಲಿ ಕೇಂದ್ರ ಕೈಗಾರಿಕಾ ರಕ್ಷಣಾ ಪಡೆ(ಸಿಐಎಸ್‍ಎಫ್), ನಂತರದಲ್ಲಿ ಶಸ್ತ್ರಸಜ್ಜಿತ ಪೊಲೀಸ್ ಪಡೆ, ಅವರ ನಂತರ ಸಾಮಾನ್ಯ ಪೊಲೀಸರ ತಂಡ ಮತಯಂತ್ರಗಳ ಕಾವಲು ಕಾಯುತ್ತಿದೆ.

      ಸ್ವಕ್ಷೇತ್ರ ಹಾಸನ ಬಿಟ್ಟು ಮೊದಲ ಬಾರಿಗೆ ತುಮಕೂರಿನಲ್ಲಿ ಚುನಾವಣೆ ಎದುರಿಸಿದ ದೇವೇಗೌಡರು ಹಾಗೂ ಇದೇ ಕ್ಷೇತ್ರದಿಂದ ನಾಲ್ಕು ಬಾರಿ ಸಂಸದರಾಗಿ ಐದನೇ ಆಯ್ಕೆ ಬಯಸಿರುವ ಜಿ ಎಸ್ ಬಸವರಾಜು ನಡುವೆ ನೇರಹಣಾಹಣಿ ಇರುವುದಂತೂ ನಿಜ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕೆಂದು ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮಾಡಿಕೊಂಡ ಮೈತ್ರಿ ಒಪ್ಪಂದದ ಲೋಕಸಭಾ ಕ್ಷೇತ್ರಗಳ ಸೀಟು ಹಂಚಿಕೆಯಲ್ಲಿ ಜೆಡಿಎಸ್ ಪಾಲಿಗೆ ಸಿಕ್ಕಿದ ತುಮಕೂರು ಕ್ಷೇತ್ರಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೇ ಆದ ದೇವೇಗೌಡರೇ ಬಂದರು. ಹೀಗಾಗಿ ಹಾಲಿ ಸಂಸದ ಮುದ್ದಹನುಮೇಗೌಡರು ಮೈತ್ರಿ ಧರ್ಮ ಪಾಲನೆಗಾಗಿ ಕ್ಷೇತ್ರ ತ್ಯಾಗ ಮಾಡಬೇಕಾಯಿತು. ಮಾಜಿ ಪ್ರಧಾನಿ ಸ್ಪರ್ಧೆ ಎನ್ನುವ ಕಾರಣಕ್ಕೆ ತುಮಕೂರು ಕ್ಷೇತ್ರದ ಚುನಾವಣೆ ಪ್ರತಿಷ್ಠೆ ಹೆಚ್ಚಿಸಿಕೊಂಡಿತು.

      ಈ ಕ್ಷೇತ್ರದಲ್ಲಿ ಗೆಲ್ಲುವವರು ದೇವೇಗೌಡರೊ ಇಲ್ಲವೆ, ಜಿ ಎಸ್ ಬಸವರಾಜುರವರೊ ಎಂಬುದು ಮೇ 23ರ ಮತ ಎಣಿಕೆ ನಂತರ ತಿಳಿಯುತ್ತದೆ. ಕಾಂಗ್ರೆಸ್ ಮಿತ್ರ ಪಕ್ಷಗಳು ಸರ್ಕಾರ ರಚಿಸಿದರೆ ದೇವೇಗೌಡರು ಕೂಡಾ ಪ್ರಧಾನಿ ಅಭ್ಯರ್ಥಿ ರೇಸಿನಲ್ಲಿದ್ದಾರೆ ಎಂದು ಆ ಪಕ್ಷದ ಮುಖಂಡರು ಚುನಾವಣಾ ಪ್ರಚಾರ ವೇಳೆ ಹೇಳಿಕೊಂಡಿದ್ದರು. ಜಿ ಎಸ್ ಬಸವರಾಜು ಜಯಗಳಿಸಿ, ಮತ್ತೊಮ್ಮೆ ಮೋದಿ ಪ್ರಧಾನಿಯಾದರೆ ಮಾಜಿ ಪ್ರಧಾನಿಯನ್ನು ಸೋಲಿಸಿದರು ಎಂಬ ಹೆಗ್ಗಳಿಕೆಯಲ್ಲಿ ಜಿ ಎಸ್ ಬಸವರಾಜು ಮೋದಿಗೆ ಹತ್ತಿರವಾಗಿ ಕೇಂದ್ರ ಸಚಿವರಾಗುವ ಸಾಧ್ಯತೆಗಳಿವೆ ಎಂಬುದು ಬಿಜೆಪಿಯವರ ಅಭಿಪ್ರಾಯ.

        ಇವರ ಜೊತೆಗೆ ಸಿಪಿಐನಿಂದ ಎನ್.ಶಿವಣ್ಣ, ಬಿಎಸ್‍ಪಿಯ ಕೆ.ಸಿ.ಹನುಮಂತರಾಯ, ಉತ್ತಮ ಪ್ರಜಾಕೀಯ ಪಾರ್ಟಿಯ ಎಂ.ಆರ್.ಛಾಯಾಮೋಹನ್, ಅಂಬೇಡ್ಕರ್ ಸಮಾಜ್ ಪಾರ್ಟಿಯ ಸಿ.ಪಿ.ಮಹಾಲಕ್ಷ್ಮಿ, ಕಪನಿಗೌಡ ಅಲ್ಲದೆ ಪಕ್ಷೇತರರಾದ ಟಿ.ಎನ್.ಕುಮಾರಸ್ವಾಮಿ, ಜಿ.ನಾಗೇಂದ್ರ, ಪ್ರಕಾಶ್ ಆರ್.ಎ.ಜೈನ್, ಬಿ.ಎಸ್.ಮಲ್ಲಿಕಾರ್ಜುನ್, ಡಿ. ಶರಧಿಶಯನ, ಕೆ.ವಿ.ಶ್ರೀನಿವಾಸ್ ಕಲ್ಕೆರೆ, ಜೆ.ಕೆ. ಸಮಿ, ಸಿದ್ದರಾಮೇಗೌಡ ಟಿ.ಬಿ.ಯವರು ಎಷ್ಟು ಮತ ಪಡೆಯಬಹುದು ಎಂಬುದೂ ಕೂಡಾ ಮೈತ್ರಿ, ಬಿಜೆಪಿ ಅಭ್ಯರ್ಥಿಗಳ ಸೋಲು ಗೆಲುವಿನ ಮೇಲೆ ಪರಿಣಾಮ ಬೀರಬಹುದು.

        ಕಳೆದ ಲೋಕಸಭಾ ಚುನಾವಣೆಗಿಂತಾ ಈ ಬಾರಿ ದಾಖಲಾದ ಮತಗಳ ಪ್ರಮಾಣ ಹೆಚ್ಚಾಗಿದೆ. ಅದರಲ್ಲೂ ನವ ಮತದಾರರು, ಯುವ ಮತದಾರರು ಹೆಚ್ಚು ಉತ್ಸಾಹದಿಂದ ಈ ಬಾರಿ ಮತ ಚಲಾಯಿಸಿದ್ದು ಕಂಡುಬಂದಿತು.

        ತುಮಕೂರು ಪ್ರತಿಷ್ಠೆಯ ಕಣವಾಗಿದ್ದರೂ ತಮ್ಮ ಅಭ್ಯರ್ಥಿ ಪರ ಪ್ರಚಾರಕ್ಕೆ ರಾಷ್ಟ್ರೀಯ ನಾಯಕರು ಬರಲಿಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನಗರದಲ್ಲಿ ರೋಡ್ ಶೋ ನಡೆಸಿ ಹೋದರು, ಪಕ್ಕದ ಚಿತ್ರದುರ್ಗಕ್ಕೆ ಬಂದಿದ್ದ ಪ್ರಧಾನಿ ಮೋದಿ ತುಮಕೂರಿಗೆ ಬಾರಲಿಲ್ಲ.

          ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರೂ ತುಮಕೂರಿನಲ್ಲಿ ಪ್ರಚಾರಕ್ಕೆ ಬರಲಿಲ್ಲ. ಮೈತ್ರಿ ಅಭ್ಯರ್ಥಿ ದೇವೇಗೌಡರ ಪರ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತಿತರ ನಾಯಕರು ಪ್ರಚಾರ ಸಭೆ ನಡೆಸಿದರು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಇಲ್ಲಿಗೆ ಬರಲಿಲ್ಲ. ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್‍ರವರು ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ದೇವೇಗೌಡರೊಂದಿಗೆ ಕ್ಷೇತ್ರದಾದ್ಯಂತ ಪ್ರಚಾರ ನಡೆಸಿದರು. ಇಬ್ಬರೂ ಅಭ್ಯರ್ಥಿಗಳು ಸ್ವಸಾಮಥ್ರ್ಯ ಹೊಂದಿದ್ದು ರಾಷ್ಟ್ರೀಯ ನಾಯಕರ ಪ್ರಚಾರದ ಅಗತ್ಯ ಕಂಡುಬರಲಿಲ್ಲ ಎಂದು ಮುಖಂಡರೇ ಹೇಳಿಕೊಂಡರು. ಮೈತ್ರಿ ಹಾಗೂ ಬಿಜೆಪಿ ಅಭ್ಯರ್ಥಿ ನಡುವೆ ತೀವ್ರ ಪೈಪೋಟಿ ಕಂಡುಬಂದಿದ್ದು, ಯಾರಿಗೆ ಗೆಲುವು ಒಲಿಯಲಿದೆ ಎಂಬುದನ್ನು ಕಾದುನೋಡಬೇಕಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link