ಜಗಳೂರು
ತಾಲ್ಲೂಕಿನ ಹಾಲೇಕಲ್ಲು ಗುಡ್ಡದ ಗೋಮಾಳ ಪ್ರದೇಶದಲ್ಲಿ ನಡೆಯುತ್ತಿದ್ದ ಅಕ್ರಮ ಮ್ಯಾಂಗನೀಸ್ ಗಣಿಗಾರಿಕೆ ಪ್ರದೇಶದ ಮೇಲೆ ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳು ಶನಿವಾರ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದು, ಗಣಿಗಾರಿಕೆ ಸ್ಥಗಿತಗೊಳಿಸಲು ಆದೇಶಿಸಿದ್ದಾರೆ.
ದಾವಣಗೆರೆ ಉಪ ವಿಭಾಗಾಧಿಕಾರಿ ಕುಮಾರಸ್ವಾಮಿ, ಜಗಳೂರು ತಹಶೀಲ್ದಾರ್ ಹುಲ್ಲುಮನಿ ತಿಮ್ಮಣ್ಣ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕೋದಂಡರಾಮ ಹಾಗೂ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.
ಉತ್ತರ ಭಾರತ ಮೂಲದ ಭಾರತ್ ಪಾರೇಖ್ ಕಂಪನಿಯಿಂದ ಹಾಲೇಕಲ್ಲು ಗೋಮಾಳದಲ್ಲಿ ಅಕ್ರಮ ಮ್ಯಾಂಗನೀಸ್, ಕಬ್ಬಿಣ ಹಾಗೂ ತಾಮ್ರದ ಗಣಿಗಾರಿಕೆ ನಡೆಯುತ್ತಿರುವ ಆರೋಪದ ಮೇರೆಗೆ ಶನಿವಾರ ಮೂರನೇ ಬಾರಿ ದಾಳಿ ನಡೆಸಲಾಯಿತು. ತಾಲ್ಲೂಕಿನ ಭೂ ಭಾಗದ ಒತ್ತುವರಿ ನಡೆದಿದೆ ಎನ್ನಲಾದ ಪ್ರದೇಶದ ಸಮಗ್ರ ಪರಿಶೀಲನೆ ನಡೆಸಲಾಯಿತು. ಮೇಲ್ನೋಟಕ್ಕೆ ಅಕ್ರಮ ಗಣಿಗಾರಿಕೆ ನಡೆದಿರುವುದು ಸಾಬೀತಾಗಿದ್ದು, ಕೂಡಲೇ ಗಣಿಗಾರಿಕೆಯನ್ನು ನಿಲ್ಲಿಸಬೇಕು. ಸಂಗ್ರಹವಾಗಿರುವ ಕೋಟ್ಯಂತರ ರೂಪಾಯಿ ಮೌಲ್ಯದ ಅದಿರನ್ನು ಸಾಗಣೆ ಮಾಡಬಾರದು ಅಧಿಕಾರಿಗಳು ಕಂಪನಿ ಮಾಲೀಕರಿಗೆ ಎಚ್ಚರಿಕೆ ನೀಡಿದರು.
ಜಗಳೂರು ತಾಲ್ಲೂಕಿನ ಹಾಲೇಕಲ್ಲು ಗಡಿಗೆ ಹೊಂದಿಕೊಂಡಿರುವ ದಾವಣಗೆರೆ ತಾಲ್ಲೂಕಿನ ಹುಲಿಕಟ್ಟೆ ಗ್ರಾಮದ ಸರ್ವೆ ಸಂಖ್ಯೆ 57 ರಲ್ಲಿ ಮಾತ್ರ ಮ್ಯಾಂಗನೀಸ್ ಗಣಿಗಾರಿಕೆಗೆ 2005ರಲ್ಲಿ 20 ವರ್ಷಗಳ ಅವಧಿಗೆ ಜಿಲ್ಲಾಧಿಕಾರಿ, ಭಾರತ್ ಪಾರೀಖ್ ಕಂಪನಿಗೆ ಗುತ್ತಿಗೆಗೆ ಪರವಾನಗಿ ನೀಡಿದ್ದಾರೆ. ಆದರೆ ಒಳಗೊಳಗೆ ಯಾವುದೇ ಪ್ರಾಧಿಕಾರದ ಅನುಮತಿ ಇಲ್ಲದೆ ಅಕ್ರಮವಾಗಿ ಪಕ್ಕದ ಜಗಳೂರು ತಾಲ್ಲೂಕಿನ ಹಾಲೇಕಲ್ಲು ಗ್ರಾಮಕ್ಕೆ ಸೇರಿದ ಸರ್ವೆ ಸಂಖ್ಯೆ 74ರ ಗೋಮಾಳ ಪ್ರದೇಶದಲ್ಲಿ ಸುಮಾರು 300 ಅಡಿಗಳದವರೆಗೆ ಭಾರಿ ಪ್ರಮಾಣದಲ್ಲಿ ಹಲವು ವರ್ಷಗಳಿಂದ ಗಣಿಗಾರಿಕೆ ಕೈಗೊಳ್ಳಲಾಗಿದೆ. ನೂರಾರು ಕೋಟಿ ರೂಪಾಯಿ ಮೌಲ್ಯದ ಬೆಲೆಬಾಳುವ ಅದಿರನ್ನು ಬಗೆದು ಸಾಗಣೆ ಮಾಡಲಾಗಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ.
ಭಾರತ್ ಪಾರೀಖ್ ಕಂಪನಿಯ ಸಿಎಸ್ ಗುಪ್ತಾ ನಮ್ಮ ಜಾಗದಲ್ಲಿ ನೀವು ನಮ್ಮನ್ನು ಕೇಳದೇ ಅಕ್ರಮ ಪ್ರವೇಶ ಮಾಡಿದ್ದೀರಿ ಎಂದು ಮೊದಲ ಬಾರಿ ತಹಶೀಲ್ದಾರ್ ಬೇಟಿ ನೀಡಿದ ಪರಿಶೀಲಿಸಿದ್ದ ತಹಶೀಲ್ದಾರ್ಗೆ ವಕೀಲರ ಮೂಲಕವೇ ನೋಟೀಸ್ ನೀಡಿದ್ದಾರೆ. ಅಲ್ಲದೇ ಎಸಿ ಕುಮಾರಸ್ವಾಮಿಯವರ ಜೊತೆಯಲ್ಲೇ ವಾಗ್ವಾದ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಅಕ್ರವಾಗಿ ಗಣಿಗಾರಿಕೆ ಮಾಡಿದ್ದಲ್ಲದೇ ಏನ್ ಜೋರ್ ಮಾಡುತ್ತೀಯ ನಿಲ್ಲಿಸುತ್ತಿಯಾ ಏನು? ಎಂದು ಗದರಿಸಿದಾಗ ಅಕ್ರಮಗಣಿಗಾರಿಕೆ ನಿಲ್ಲಿಸಲು ಅಲ್ಲಿನ ಸಿಬ್ಬಂದಿಗಳಿಗೆ ಸೂಚಿಸಿದ್ದಾನೆ. ಕಂಪನಿಯ ಸಿಇಓ ಗುಪ್ತಾ ನ ಜೊತೆ ಗಣಿಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬುದಕ್ಕೆ ಉಪ ವಿಭಾಗಾಧಿಕಾರಿಗಳ ಸಮ್ಮುಖದಲ್ಲೇ ನಾವು ಕಾನೂನು ಪ್ರಕಾರವಾಗಿ ಮಂಜೂರಾತಿ ನೀಡಿದ್ದೇವೆ ಪ್ರದೀಪ್ ಹೇಳಿತ್ತಿದ್ದುದು ಎಸಿ ಕುಮಾರಸ್ವಾಮಿಯವರಿಗೂ , ಹಾಲೇಕಲ್ಲು ಗ್ರಾಮಸ್ಥರಿಗೂ ಸಿಟ್ಟಿಗೆ ಕಾರಣವಾಗಿದ್ದು ಕಂಪನಿಯೊಂದಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯವರು ಶಾಮೀಲಾಗಿರುವ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ್ದಾರೆ.
ಅಕ್ರಮ ಗಣಿಗಾರಿಕೆ ಆರೋಪದ ಮೇರೆಗೆ ಐದಾರು ದಿನಗಳ ಹಿಂದೆ ತಹಶೀಲ್ದಾರ್ ತಿಮ್ಮಣ್ಣ ಅವರು ಗಣಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ನಮ್ಮ ಕಂಪನಿ ಪ್ರದೇಶದ ವ್ಯಾಪ್ತಿಯಲ್ಲಿ ಅನುಮತಿ ಇಲ್ಲದೆ ಪ್ರವೇಶ ಮಾಡಿದ್ದೀರಿ ಎಂದು ಆರೋಪಿಸಿ ಗಣಿ ಕಂಪನಿಯಿಂದ ತಹಶೀಲ್ದಾರ್ ತಿಮ್ಮಣ್ಣ ಅವರಿಗೆ ನೊಟೀಸ್ ನೀಡಿದ್ದನ್ನು ಸ್ಮರಿಸಬಹುದು.2005ರಿಂದ ಇಲ್ಲಿ ಗಣಿಗಾರಿಕೆ ನಡೆಯುತ್ತಿದ್ದು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಈ ವಿಷಯ ತಿಳಿದಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಸಮ್ಮತಿ ನೀಡಿದ್ದಾರೆ ಎನ್ನಲಾಗಿದ್ದು, ಒಂದೆರೆಡು ದಿನಗಳಲ್ಲಿ ಭಾರತ್ ಕಂಪನಿ ಮಾಲೀಕರು ಮತ್ತು ಸಹಕರಿಸಿದ ಆರೋಪದಲ್ಲಿ ಗಣಿ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
