ಬೆಂಗಳೂರು
ಬಿಬಿಎಂಪಿ ರಸ್ತೆ ಅಗಲೀಕರಣಕ್ಕೆ ವಶಪಡಿಸಿಕೊಂಡ ನಿವೇಶನಗಳು ಹಾಗೂ ಕಟ್ಟಡಗಳ ಜಾಗಕ್ಕಿಂತ ಹೆಚ್ಚಿನ ಜಾಗಕ್ಕೆ ಬೆಲೆ ನಿಗಧೀಕರಣ ಮಾಡಿಸಿ, ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಲಾಭ ಮಾಡಿಕೊಟ್ಟು, ರಾಜ್ಯ ಸರ್ಕಾರಕ್ಕೆ ಕೋಟ್ಯಾಂತರ ರೂ. ಗಳ ನಷ್ಟ ಉಂಟುಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಕಡೆಗಳಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕೃಷ್ಣಲಾಲ್ ಲಾಭ ಮಾಡಿಕೊಟ್ಟ ರೆಸಿಡೆನ್ಸಿ ರಸ್ತೆಯಲ್ಲಿನ ವಾಲ್ ಮಾರ್ಕ್ ರಿಯಾಲಿಟಿ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್ನ ಕಚೇರಿ, ವಾಲ್ ಮಾರ್ಕ್ನ ನಿರ್ದೇಶಕ ರತನ್ ಬಾಬುಲಾಲ್ ಲಾಥ್ನ ಹಳೆ ಏರ್ಪೆÇೀರ್ಟ್ ರಸ್ತೆಯಲ್ಲಿನ ಕಚೇರಿ, ಮನೆಗಳ ಮೇಲೆ ಎಸಿಬಿ ಅಧಿಕಾರಿಗಳು ಮುಂಜಾನೆಯಿಂದಲೇ ದಾಳಿ ನಡೆಸಿ, ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ವಾಲ್ ಮಾರ್ಕ್ ಕಂಪನಿಯಿಂದ ನಡೆಸಲಾದ ಟಿಡಿಆರ್ ವ್ಯವಹಾರಗಳಿಗೆ ಕಂಪನಿ ವತಿಯಿಂದ ದಾಖಲಾತಿಗಳಿಗೆ ಅಧಿಕೃತ ಸಹಿ ಹಾಕಿರುವ ವಾಲ್ ಮಾರ್ಕ್ ಕಂಪನಿಯ ಉದ್ಯೋಗಿ ಅಮಿತ್ ಜೆ. ಬೋಳಾರ್ನ ಇಂದಿರಾನಗರದ ಮನೆ, ಕೆ. ಗೌತಮ್ ಎಂಬಾತನ ಕಲ್ಕೆರೆ ಮುಖ್ಯರಸ್ತೆಯಲ್ಲಿನ ಮನೆ, ಮುನಿರಾಜಪ್ಪನ ಕಲ್ಕೆರೆಯಲ್ಲಿನ ಮನೆ ಸೇರಿದಂತೆ, ಐದು ಕಡೆಗಳಲ್ಲಿ ದಾಳಿ ನಡೆಸಲಾಗಿದೆ.
ಎರವಲು ಸೇವೆಯ ಮೇಲೆ ಬಿಡಿಎಗೆ ಬಂದಿದ್ದ ಬಿಡಿಎ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ (ಎಇಇ) ಕೃಷ್ಣಲಾಲ್ನ ಬಿಬಿಎಂಪಿ ರಸ್ತೆ ಅಗಲೀಕರಣಕ್ಕೆ ವಶಪಡಿಸಿಕೊಂಡ ನಿವೇಶನ, ಕಟ್ಟಡ ಜಾಗಕ್ಕಿಂತ ಹೆಚ್ಚಿನ ವಿಸ್ತೀರ್ಣಕ್ಕೆ ಬೆಲೆ ನಿಗಧೀಕರಣ ಮಾಡಿಸಿಕೊಂಡು, ಖಾಸಗಿ ವ್ಯಕ್ತಿಗಳಿಗೆ ಲಾಭ ಮಾಡಿಕೊಟ್ಟು, ಬಿಬಿಎಂಪಿ ಹಾಗೂ ಸರ್ಕಾರಕ್ಕೆ ಕೋಟ್ಯಾಂತರ ರೂ. ಗಳ ವಂಚನೆ ನಡೆಸಿರುವ ಬಗ್ಗೆ ಎಸಿಬಿಯ ನಗರ ಠಾಣೆಯಲ್ಲಿ ದೂರುಗಳು ದಾಖಲಾಗಿದ್ದವು. ಇದನ್ನು ಆಧರಿಸಿ ದಾಳಿ ನಡೆಸಿ, ದಾಖಲೆ ಪತ್ರಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಲಾಗಿದೆ ಎಂದು ಎಸ್.ಪಿ. ಸಂಜೀವ್ ಪಾಟೀಲ್ ತಿಳಿಸಿದ್ದಾರೆ.