ಪ್ರಗ್ಯಾಸಿಂಗ್ ವಿರುದ್ಧ ಕ್ರಮಕ್ಕೆ ಸಿಪಿಐ ಆಗ್ರಹ6

ದಾವಣಗೆರೆ

      ಮಹಾತ್ಮ ಗಾಂಧಿ ಅವರನ್ನು ಕೊಂದ ಗೋಡ್ಸೆಯನ್ನು ಮಹಾನ್ ದೇಶಭಕ್ತ ಎಂದ ಸಾಧ್ವಿ ಪ್ರಗ್ಯಾಸಿಂಗ್ ಠಾಕೂರ್ ಹಾಗೂ ಶಿಕ್ಷಣ ಪ್ರೆಮಿ ಈಶ್ವರಚಂದ್ರ ವಿದ್ಯಾಸಾಗರ್ ಅವರ ಪ್ರತಿಮೆಯನ್ನು ನೆಲಕ್ಕೆ ಉರುಳಿಸಿದ ಬಿಜೆಪಿ ಕಾರ್ಯಕರ್ತರನ್ನು ತಕ್ಷಣವೇ ಬಂಧಿಸಿ, ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿ ಭಾರತ ಕಮ್ಯುನಿಷ್ಟ್ ಪಕ್ಷದ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

      ಇಲ್ಲಿನ ಅಶೋಕ ರಸ್ತೆಯ ಕಾಮ್ರೇಡ್ ಪಂಪಾಪತಿ ಭವನದಿಂದ ಪ್ರತಿಭಟನಾ ಮೆರವಣಿಗೆ ಹೊರಟ ಸಿಪಿಐ ಕಾರ್ಯಕರ್ತರು, ಎಸಿ ಕಚೇರಿಗೆ ತೆರಳಿ ಗೋಡ್ಸೆಯನ್ನು ಸಮರ್ಥಿಸಿಕೊಂಡಿರುವ ಹಾಗೂ ವಿದ್ಯಾಸಾಗರ್ ಪ್ರತಿಮೆಯನ್ನು ನೆಲಕ್ಕೆ ಉರುಳಿಸಿರುವ ಬಿಜೆಪಿ ಕಾರ್ಯಕರ್ತರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಉಪ ವಿಭಾಗಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

       ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಕೆ.ರಾಮಚಂದ್ರಪ್ಪ, ಭಾರತ ದೇಶವನ್ನು ಬ್ರಿಟೀಷರ ಗುಲಾಮಗಿರಿಯಿಂದ ಮುಕ್ತಗೊಳಿಸಲು, ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಡಲು ಸ್ವಾತಂತ್ರ್ಯ ಚಳವಳಿಯ ಮುಂಚೂಣಿಯಲ್ಲಿದ್ದ ರಾಷ್ಟ್ರಪಿತ, ಮಹಾತ್ಮ ಗಾಂಧೀಜಿಯವರ ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆರನ್ನು ಮಹಾ ದೇಶಭಕ್ತ ಎಂಬುದಾಗಿ ಹೇಳಿರುವ ಬಿಜೆಪಿ ನಾಯಕಿ ಪ್ರಗ್ಯಾಸಿಂಗ್ ಠಾಕೂರ್ ಹೇಳಿಕೆಯು ಅತ್ಯಂತ ನೀಚತನದ ಹೇಳಿಕೆಯಾಗಿದ್ದು, ಇದನ್ನು ಸಿಪಿಐ ತೀವ್ರವಾಗಿ ಖಂಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

      ಇತ್ತೀಚೆಗೆ ಕೊಲ್ಕತ್ತದಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‍ಶಾ ರೋಡ್ ಶೋ ಸಂದರ್ಭದಲ್ಲಿ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ಮಧ್ಯೆ ನಡೆದ ಗಲಭೆಯಲ್ಲಿ ಬಿಜೆಪಿ ಕಾರ್ಯಕರ್ತರು ಮಹಾನ್ ಮಾನವತವಾದಿ ಈಶ್ವರಚಂದ್ರ ವಿದ್ಯಾಸಾಗರ್ ಅವರ ಪ್ರತಿಮೆಯನ್ನು ಉರಳಿಸುವ ಮೂಲಕ ಮಾನವತಾವಾದಿಗಳ ವಿರುದ್ಧ ಬಿಜೆಪಿಯ ನಿಲುವು ಇದೆ ಎಂಬುದನ್ನು ಸಾಬೀತು ಪಡೆಸಿದ್ದಾರೆಂದು ಆರೋಪಿಸಿದರು.

      ಗಾಂಧಿಯನ್ನು ಕೊಂದ ಗೋಡ್ಯೆಯನ್ನ ಸಮರ್ಥಿಸಿಕೊಂಡಿರುವ ಬಿಜೆಪಿ ನಾಯಕಿ ಪ್ರಗ್ಯಾಸಿಂಗ್ ಠಾಕೂರ್ ಅವರ ವಿರುದ್ಧ ದೇಶದ್ರೋಹದ ಆರೋಪದ ಮೇಲೆ ಕ್ರಮ ಜರುಗಿಸಬೇಕು. ಕೊಲ್ಕತ್ತಾದಲ್ಲಿ ಈಶ್ವರಚಂದ್ರ ವಿದ್ಯಾಸಾಗರ್ ಅವರ ಪ್ರತಿಮೆ ಉರುಳಿಸಿರುವ ಬಿಜೆಪಿ ಕಾರ್ಯಕರ್ತರನ್ನು ತಕ್ಷಣವೇ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

       ಪ್ರತಿಭಟನೆಯಲ್ಲಿ ಸಿಪಿಐ ಜಿಲ್ಲಾ ಖಜಾಂಚಿ ಆನಂದರಾಜ್, ಸಹ ಕಾರ್ಯದರ್ಶಿಗಳಾದ ಅವರೆಗರೆ ಚಂದ್ರು, ಆವರಗೆರೆ ಉಮೇಶ್, ಮುಖಂಡರಾದ ಎನ್.ಟಿ.ಬಸವರಾಜ್, ಟಿ.ಎಸ್.ನಾಗರಾಜ್, ಜಿ.ಪಿ.ಪಾಳೇದ್, ಸಿ.ರಮೇಶ್, ಭೀಮರೆಡ್ಡಿ, ಜಿ.ಆರ್.ನಾಗರಾಜ್, ಪರಶುರಾಮ.ಹೆಚ್, ಐರಣಿ ಚಂದ್ರು, ಎನ್.ಎಚ್.ರಾಮಪ್ಪ, ಆವರಗೆರೆ ವಾಸು, ಕಂಚಿಕೇರಿ ಹನುಮಂತಪ್ಪ, ಜಿ.ಮಲ್ಲಪ್ಪ, ನಾಗಮ್ಮ, ಎ.ತಿಪ್ಪೇಶಿ, ನೇತ್ರಾವತಿ, ಕೆ.ಜಿ.ಶಿವಮೂರ್ತಿ, ಚಮನ್‍ಸಾಬ್ ಮತ್ತಿತರರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link