ತೃತೀಯ ಲಿಂಗಿಗಳ ಜೀವನಮಟ್ಟ ಸುಧಾರಣೆಗೆ ಕ್ರಮ:ವಿನೋತ್ ಪ್ರಿಯಾ

ಚಿತ್ರದುರ್ಗ:

    ಜಿಲ್ಲೆಯ ದಮನಿತ ಮಹಿಳೆಯರು ಹಾಗೂ ತೃತೀಯ ಲಿಂಗಿಗಳ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆಗೆ ವಿವಿಧ ಇಲಾಖೆಗಳಡಿ ಲಭ್ಯವಿರುವ ಯೋಜನೆಗಳ ಮೂಲಕ ಜೀವನ ಮಟ್ಟ ಸುಧಾರಣೆಗೆ ನೆರವು ದೊರಕಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಹೇಳಿದರು.

     ದಮನಿತ ಮಹಿಳೆಯರ ಜೀವನ ಮಟ್ಟ ಸುಧಾರಿಸಲು ವಿವಿಧ ಇಲಾಖೆಗಳ ಮಧ್ಯೆ ಸಮನ್ವಯತೆ ಮತ್ತು ಯೋಜನೆಗಳ ಅನುಷ್ಠಾನಕ್ಕಾಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

      ಜಿಲ್ಲೆಯಲ್ಲಿ ದಮನಿತ ಮಹಿಳೆಯರಿಗೆ (ಲೈಂಗಿಕ ಕಾರ್ಯಕರ್ತೆಯರು) ನೆಮ್ಮದಿಯುತ ಜೀವನ ನಡೆಸಲು ಪ್ರೋತ್ಸಾಹಧನ ಹಾಗೂ ಸ್ವಯಂ ಉದ್ಯೋಗಕ್ಕಾಗಿ ಸಾಲ, ವಸತಿ ಸೌಲಭ್ಯ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳಡಿ ಅಗತ್ಯ ಸವಲತ್ತು ಕಲ್ಪಿಸಲಾಗುವುದು. ಈ ರೀತಿ ಸರ್ಕಾರಿ ಸೌಲಭ್ಯ ಪಡೆದ ದಮನಿತ ಮಹಿಳೆಯರು ವಿವಿಧ ಆರ್ಥಿಕ ಚಟುವಟಿಕೆಯ ಮೂಲಕ ನೆಮ್ಮದಿಯುತ ಬದುಕು ರೂಪಿಸಿಕೊಂಡು ಸಾಮಾಜಿಕ ಭದ್ರತೆ ಪಡೆದುಕೊಳ್ಳಬೇಕು ಎಂದರು

     ಸರ್ಕಾರಿ ಸವಲತ್ತು ಪಡೆದುಕೊಂಡ ಬಳಿಕವೂ ಅದೇ ವೃತ್ತಿಯಲ್ಲಿ ಮುಂದುವರೆದರೆ, ಸರ್ಕಾರದ ಉದ್ದೇಶ ಈಡೇರುವುದಿಲ್ಲ. ಅದೇ ರೀತಿ ಸರ್ಕಾರದಿಂದ ವಿವಿಧ ಸೌಲಭ್ಯ ಪಡೆದ ಮಂಗಳಮುಖಿಯರು ಎಲ್ಲೆಂದರಲ್ಲಿ ತಿರುಗಾಟ ನಡೆಸಿ ಭಿಕ್ಷಾಟನೆ ನಡೆಸುವುದು ಸರಿಯಲ್ಲ ಎಂದು ಹೇಳಿದರು

      ದಮನಿತ ಮಹಿಳೆಯರು ಹಾಗೂ ಲೈಂಗಿಕ ಅಲ್ಪಸಂಖಾತರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು 25 ಸಾವಿರ ರೂ. ಸಹಾಯಧನ ಹಾಗೂ 25 ಸಾವಿರ ರೂ. ಬಡ್ಡಿ ರಹಿತ ಸಾಲ ಸೌಲಭ್ಯ ಅಲ್ಲದೆ ವಸತಿ ಕಲ್ಪಿಸಲು ಜಿಲ್ಲಾಡಳಿತ ಸಿದ್ಧವಿದೆ. ಆಸಕ್ತರಿಗೆ ರುಡ್‍ಸೆಟಿ ಸಂಸ್ಥೆಯಿಂದ ವಿವಿಧ ವೃತ್ತಿ ಆಧಾರಿತ ತರಬೇತಿ ಕೂಡ ನೀಡಲಾಗುವುದು. ಆದರೆ ಈ ಎಲ್ಲ ಸೌಲಭ್ಯ ಪಡೆದ ಬಳಿಕವೂ ಪುನಃ ಭಿಕ್ಷಾಟನೆಗೆ ತೆರಳಿದರೆ, ಸರ್ಕಾರಿ ಯೋಜನೆಗಳು ಸಫಲವಾಗುವುದು ಹೇಗೆ ಎಂದು ಪ್ರಶ್ನಿಸಿದರು.

       ಜಿಲ್ಲೆಯಲ್ಲಿ ಸದ್ಯ 1974 ದಮನಿತ ಮಹಿಳೆಯರು ಹಾಗೂ 706 ತೃತೀಯ ಲಿಂಗಿಗಳು ಇರುವುದಾಗಿ ಸಂಬಂಧಪಟ್ಟ ಸಂಸ್ಥೆಗಳು ವರದಿ ಸಲ್ಲಿಸಿವೆ. ಈ ಸಂಖ್ಯೆ ಇನ್ನೂ ಹೆಚ್ಚು ಇರುವ ಸಾಧ್ಯತೆಗಳೂ ಇವೆ. ದಮನಿತ ಮಹಿಳೆಯರ ಸರ್ವಾಂಗೀಣ ಜೀವನ ಮಟ್ಟ ಸುಧಾರಣೆಗೆ ವಿವಿಧ ಇಲಾಖೆಗಳು ಹಾಗೂ ಸ್ವಯಂ ಸೇವಾ ಸಂಸ್ಥೆಯ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಸಮಿತಿಯನ್ನು ರಚಿಸಲಾಗಿದೆ.

       ದಮನಿತ ಮಹಿಳೆಯರು ತಮ್ಮ ವೃತ್ತಿಯನ್ನು ತೊರೆದು, ಸಮಾಜಮುಖಿ ವೃತ್ತಿಯಲ್ಲಿ ತೊಡಗುವಂತೆ ಮಾಡಲು, ಅವರಿಗೆ ಅರಿವು ಮೂಡಿಸುವುದು ಹಾಗೂ ಸರ್ಕಾರದ ಸೌಲಭ್ಯ ತಲುಪುವಂತೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಚಿತ್ರದುರ್ಗ ಜಿಲ್ಲೆಗೆ ಸೌಖ್ಯ ಸಮುದಾಯ ಸಂಸ್ಥೆಯನ್ನು ನೇಮಿಸಿದೆ. ಆದರೆ ಸೌಲಭ್ಯ ಪಡೆದರೂ, ದಮನಿತ ಮಹಿಳೆಯರು ಲೈಂಗಿಕ ಕಾರ್ಯಕರ್ತರ ವೃತ್ತಿಯನ್ನೇ ಮುಂದುವರೆಸುವುದು ಸರಿಯಲ್ಲ.

      ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯ ದೊರಕುವುದಿಲ್ಲ ಬದಲಾಗಿ ಸಂಸ್ಥೆಗಳು ಇದರ ದುರುಪಯೋಗ ಪಡೆದುಕೊಳ್ಳುತ್ತಿರುವ ಸಾಧ್ಯತೆಗಳು ಇಲ್ಲದಿಲ್ಲ. ಕೇವಲ ಅಂಕಿ-ಸಂಖ್ಯೆಗಳನ್ನು ತೋರಿಸಿ ದಮನಿತರಿಗೆ ಸಿಗುವ ಸೌಲಭ್ಯದಿಂದ ಅರ್ಹರನ್ನು ವಂಚಿಸುವ ಸಾಧ್ಯತೆಗಳೇ ಹೆಚ್ಚಿವೆ. ಲೈಂಗಿಕ ಕಾರ್ಯಕ್ಕೆ ಬಲವಂತವಾಗಿ ತಳ್ಳಲ್ಪಟ್ಟ ಮಹಿಳೆಯರಿಗೆ ಮಾತ್ರ ಸರ್ಕಾರದ ಸವಲತ್ತುಗಳನ್ನು ಕಲ್ಪಿಸಲಾಗುತ್ತದೆಯೇ ವಿನಃ ಸ್ವಯಂಪ್ರೇರಿತರಾಗಿ ಈ ವೃತ್ತಿಗೆ ಹೋದವರಿಗೆ ಅವಕಾಶ ಕಲ್ಪಿಸಲಾಗದು ಎಂದರು.

      ಜಿಲ್ಲೆಗೆ ನಿಗದಿಪಡಿಸಲಾಗಿರುವ ಈ ಸಂಸ್ಥೆ ನಿರೀಕ್ಷೆಗೆ ತಕ್ಕಂತೆ ಯಾವುದೇ ಕಾರ್ಯ ರೂಪಿಸುತ್ತಿಲ್ಲ. ಅಲ್ಲದೆ ದಮನಿತ ಮಹಿಳೆಯರಿಗೆ ಅಗತ್ಯವಿರುವ ಸೌಲಭ್ಯ ಕಲ್ಪಿಸುವಲ್ಲಿಯೂ ವಿಫಲವಾಗಿದೆ ಹೀಗಾಗಿ ಈ ಸಂಸ್ಥೆಯ ಕಾರ್ಯ ತೃಪ್ತಿಕರವಾಗಿಲ್ಲ ಎಂಬುದನ್ನು ಸರ್ಕಾರಕ್ಕೆ ವರದಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಹೇಳಿದರು.

       ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ. ಸತ್ಯಭಾಮ ಮಾತನಾಡಿ, ಜಿಲ್ಲೆಯಲ್ಲಿ ದಮನಿತ ಮಹಿಳೆಯರ ಸಬಲೀಕರಣಕ್ಕಾಗಿ ನೇಮಕಗೊಂಡಿರುವ ಸ್ವಯಂ ಸೇವಾ ಸಂಸ್ಥೆಗಳು ಸಾಮಾಜಿಕ ಪಿಡುಗನ್ನು ತೊಡೆದುಹಾಕುವ ಬದಲಿಗೆ, ಸಮಸ್ಯೆಯನ್ನು ಜೀವಂತವಾಗಿರಿಸಿ, ಸರ್ಕಾರದ ಅನುದಾನ ಪಡೆಯುವುದನ್ನು ಮುಂದುವರೆಸುವ ಹುನ್ನಾರವಿದೆ ಎಂಬುದನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ. ಸರ್ಕಾರಿ ಸವಲತ್ತು ಪಡೆದರೂ ಲೈಂಗಿಕ ವೃತ್ತಿಯಲ್ಲಿಯೇ ಅವರು ಮುಂದುವರೆದಲ್ಲಿ, ಇತರರಿಗೂ ಇನ್ನಷ್ಟು ಉತ್ತೇಜನ ನೀಡಿದಂತಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

      ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಾನಾಯಕ್ ಮಾತನಾಡಿ, ದಮನಿತ ಮಹಿಳೆಯರ ಸ್ಥಿತಿ-ಗತಿ ಕುರಿತು ಡಾ. ಜಯಮಾಲ ಅವರು ಅಧ್ಯಯನ ವರದಿ ಸಲ್ಲಿಸಿದ್ದು, ಇದರನ್ವಯ ಜಿಲ್ಲಾ ಮಟ್ಟದಲ್ಲಿ ಸಲಹಾ ಸಮಿತಿ ರಚಿಸಲಾಗಿದೆ. ಈ ಹಿಂದೆ ಜಿಲ್ಲೆಯಲ್ಲಿ 3595 ದಮನಿತ ಮಹಿಳೆಯರ ನೊಂದಣಿಯಾಗಿತ್ತು. ಅದು ಸದ್ಯ 1974 ಕ್ಕೆ ಇಳಿದಿದೆ. ಜಿಲ್ಲೆಯಲ್ಲಿ 113 ಲೈಂಗಿಕ ಅಲ್ಪಸಂಖ್ಯಾತರರಿಗೆ ಮೈತ್ರಿ ಯೋಜನೆಯಡಿ ಮಾಸಾಶನ ಮಂಜೂರು ಮಾಡಲಾಗಿದೆ.

     ದಮನಿತ ಮಹಿಳೆಯರ ಜೀವನ ಮಟ್ಟ ಸುಧಾರಣೆ ನಿಟ್ಟಿನಲ್ಲಿ ಅವರ ಸಬಲೀಕರಣ ಮತ್ತು ಪುನರ್ವಸತಿ ಕಾರ್ಯಕ್ರಮ ಅನುಷ್ಠಾನಗೊಳಿಸಲು ವಿವಿಧ ಇಲಾಖೆಗಳು ನೆರವಾಗಲಿವೆ ಎಂದರು.

     ವಾಹಿನಿ ಸಮುದಾಯ ಸಂಸ್ಥೆಯ ಕಾರ್ಯದರ್ಶಿ ಈರಣ್ಣ ಮಾತನಾಡಿ, ತೃತೀಯ ಲಿಂಗಿಗಳಿಗೆ ಬೇಕಾಗುವ ಅಗತ್ಯ ದಾಖಲೆಗಳು ವಸತಿ ಸೌಲಭ್ಯವನ್ನು ಕಲ್ಪಿಸಬೇಕು. ಎಷ್ಟೋ ಜನ ಅಪನಿಂದನೆಗೆ ಹೆದರಿ, ಧೈರ್ಯವಾಗಿ ತೋರ್ಪಡಿಸಲಾಗದೆ ಮನೆಯಲ್ಲಿಯೇ ಉಳಿದು, ಕುಟುಂಬದವರ ಬಲವಂತಕ್ಕೆ ಮದುವೆ ಮಾಡಿಕೊಳ್ಳುತ್ತಾರೆ. ಇದರಿಂದ ಹೆಣ್ಣಿನ ಜೀವನವನ್ನು ಹಾಳು ಮಾಡುವಂತಾಗುತ್ತದೆ. ಹಾಗಾಗಿ ಲೈಂಗಿಕ ಅಲ್ಪಸಂಖ್ಯಾತರಿಗೆ ಮುಕ್ತವಾದ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕು ಎಂದರು.

      ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್, ಕರ್ನಾಟಕ ಆರೋಗ್ಯ ಸಂವರ್ಧನಾ ಟ್ರಸ್ಟ್‍ನ ರಾಮಚಂದ್ರಪ್ಪ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರುಗಳು, ಸಿಡಿಪಿಒ ಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link