ಚಿತ್ರದುರ್ಗ
ಆಧ್ಯಾತ್ಮಿಕತೆ ಸುಲಭವಾಗಿ ಧಕ್ಕುವಂತದಲ್ಲ. ನಿರಂತರ ಪ್ರಯತ್ನ, ಕಠಿಣ ಪರಿಶ್ರಮದಿಂದ ಆಧ್ಯಾತ್ಮಿಕತೆಯನ್ನು ಪಡೆಯಬೇಕೆಂದು ಜಾನಪದ ತಜ್ಞ ಡಾ. ಮೀರಾಸಾಬಿಹಳ್ಳಿ ಶಿವಣ್ಣ ತಿಳಿಸಿದರು.
ವಾಸ್ತವ ವೇದಿಕೆ ಹಾಗೂ ಸಂಭ್ರಮ ಪ್ರಕಾಶನದ ವತಿಯಿಂದ ಪತ್ರಿಕಾ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಲೇಖಕ ಎಂ. ಮಂಜುನಾಥ್ ಕಳ್ಳಿಹಟ್ಟಿ ಅವರ `ನೀನೆ ಪ್ರಶ್ನೆ ನೀನೆ’ ಉತ್ತರ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ಬರಹಗಾರ ತನ್ನ ಬರವಣಿಗೆಯನ್ನು ಸಾಮಾನ್ಯವಾಗಿ ಕಥೆ, ಕವಿತೆ, ಕಾದಂಬರಿ ಪ್ರಕಾರಗಳ ಮೂಲಕ ಪ್ರಾರಂಭಿಸುವುದುಂಟು. ಆದರೆ, ಮಂಜುನಾಥ್ ಅವರ ಮೊದಲ ಪ್ರಯತ್ನವೇ ವೈಚಾರಿಕ ಚಿಂತನೆಯಿಂದ ಕೂಡಿದೆ ಎಂದರು.
ಕೃತಿಯಲ್ಲಿ ವೈಚಾರಿಕತೆಯೂ ಆಧ್ಯಾತ್ಮಿಕ ಸ್ಪರ್ಶದ ಮನಸ್ಸಿನ ಅಂತರಂಗದ ಒಳನೋಟಗಳಿಂದ ಮೊದಲಾಗಿರುವುದು ಕುತೂಹಲಕಾರಿಯಾಗಿದೆ. ಅಲ್ಲದೆ, ಗಂಭೀರವಾಗಿ ಪರಿಗಣಿಸುವಂತೆ ಮಾಡಿದ್ದು, ಮಾಗಿದ ವಯಸ್ಸಲ್ಲಿ ಮಾಡಬೇಕಾದ ಚಿಂತನೆಗಳು ಬಹುಶಃ ಎಳೆಯ ವಯಸ್ಸಿನಲ್ಲಿಯೇ ಕೃತಿಕಾರನಲ್ಲಿ ಕಾಣಿಸಿಕೊಂಡಿರುವುದು ಹುಬ್ಬೇರಿಸುವಂತೆ ಮಾಡಿದೆ ಎಂದು ಹೇಳಿದರು.
ಸಮಾಜಮುಖಿ ಚಿಂತನೆಗಳೂ ಸೂಫಿ ಚಿಂತನೆಯ ಸ್ಪರ್ಶ ಪಡೆದಿರುವುದರಿಂದ ಕೃತಿ ವಿಶಿಷ್ಟ ಅನಿಸುತ್ತದೆ. ಇದು ಸುಧೀರ್ಘವಲ್ಲದ ಚಿಕ್ಕಪುಟ್ಟ ವಿಭಿನ್ನ ವಿಚಾರಧಾರೆಗಳಿಂದ ಕೂಡಿದ 29 ಬಹುಮುಖಿ ಚಿಂತನೆಗಳಿಂದ ಕೂಡಿದ್ದು, ಜೆನ್ ಮಾದರಿಗೆ ಹತ್ತಿರವಾಗಿದೆ ಎಂದರು.
ಧಕ್ಕಲಾರದ ಅಂಶಗಳನ್ನು ಕೂಡ ಧಕ್ಕಿಸಿಕೊಳ್ಳುವ ಪ್ರಯತ್ನ ಕೃತಿಯಲ್ಲಿ ಅಡಗಿದೆ. ತತ್ವಪದಕಾರರ ಮುಂದುವರೆದ ಆಧುನಿಕ ರೂಪದಲ್ಲಿ ನಮಗೆ ಹೊಸ ಲೇಖಕರು ಸಿಕ್ಕಿದಂತಾಗಿದೆ. ಇಂತಹ ಕೃತಿಯನ್ನು ಪ್ರಸ್ತುತ ದಿನಗಳಲ್ಲಿ ಬರೆಯೋರು ತುಂಬಾ ವಿರಳ. ಓದುವವರೂ ಇಲ್ಲ. ಭಾವ ಇದ್ದವರು ಮಾತ್ರ ಕೃತಿಯ ಒಳಹೊಕ್ಕು ಓದಿದಾಗ ಅರ್ಥೈಸಿಕೊಳ್ಳಬಹುದಾಗಿದೆ ಎಂದು ಹೇಳಿದರು.
ನಿವೃತ್ತ ಪ್ರಾಧ್ಯಾಪಕ ಡಾ. ಸಂಗೇನಹಳ್ಳಿ ಅಶೋಕ್ ಕುಮಾರ್ ಮಾತನಾಡಿ, ಯುವ ಸಮೂಹ ಗಣಕಯಂತ್ರ, ಮೊಬೈಲ್ ಗೀಳಿನಿಂದ ಹೊರಗೆ ಬರಬೇಕು. ಬರವಣಿಗೆಯಲ್ಲಿ ತೊಡಗಿಸಿಕೊಳ್ಳಬೇಕು. ಆ ಮೂಲಕ ವಿನೂತನ ಶೈಲಿಯ ಕಥೆ, ಕವಿತೆ, ಕಾದಂಬರಿ ಬರೆಯಲು ಸಾಧ್ಯವಾಗುತ್ತದೆ. ಯುವ ಜನತೆ ಇಂತಹ ಕಾರ್ಯಕ್ಕೆ ಮುಂದಾಗಬೇಕೆಂದು ಹೇಳಿದರು.
ಪ್ರಾಧ್ಯಾಪಕ ಡಾ.ಜೆ. ಕರಿಯಪ್ಪ ಮಾಳಿಗೆ ಅಧ್ಯಕ್ಷತೆ ವಹಿಸಿದ್ದರು. ಲೇಖಕಿ ಲಲಿತಾ ಕೃಷ್ಣಮೂರ್ತಿ, ಉಪನ್ಯಾಸಕಿ ಎನ್. ಮಮತಾ, ಹಿರಿಯೂರು ನಗರಸಭೆ ಪೌರಾಯುಕ್ತ ಎಚ್. ಮಹಂತೇಶ್, ಜಿಲ್ಲಾ ಪಂಚಾಯಿತಿ ಸದಸ್ಯ ನರಸಿಂಹರಾಜ್, ನಿವೃತ್ತ ಪ್ರಾಂಶುಪಾಲ ಡಿ. ಬಸವರಾಜಪ್ಪ, ನಗರಸಭೆ ಕಂದಾಯಾಧಿಕಾರಿ ವಾಸಿಂ, ಸ್ಪೂರ್ತಿ ಅಂಗವಿಕಲರ ಟ್ರಸ್ಟ್ನ ತಿಪ್ಪಮ್ಮ, ಎಸ್.ಎನ್. ಶ್ರೀನಿವಾಸಮೂರ್ತಿ, ಆರ್. ಗಂಗಮ್ಮ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
