ತುಮಕೂರು
ರಸ್ತೆಗೆ ಡಾಂಬರು ಹಾಕಲಾಕಿದೆ ಎಂದರೆ, ಆ ರಸ್ತೆಯ ಚರಂಡಿ, ಒಳಚರಂಡಿ, ಫುಟ್ಪಾತ್, ವಿದ್ಯುತ್ ಕಂಬ, ರಸ್ತೆಗೆ ಅಡ್ಡಲಾಗುವ ಚರಂಡಿಗಳು, ಕುಡಿಯುವ ನೀರಿನ ಪೈಪ್, ಗ್ಯಾಸ್, ಕೇಬಲ್ಗಳ ಅಳವಡಿಕೆ ಪೂರ್ಣಗೊಂಡಿದೆ ಎಂದರ್ಥ. ಈ ಎಲ್ಲಾ ಮುಗಿದ ಮೇಲೆ ರಸ್ತೆಗೆ ಟಾರು ಹಾಕಿದರೆ ಇತರೆ ಉದ್ದೇಶಕ್ಕೆ ರಸ್ತೆ ಅಗೆಯುವ ಅಗತ್ಯಬರುವುದಿಲ್ಲ, ಅಲ್ಲಿಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಂತೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ.
ಆದರೆ, ತುಮಕೂರಿನಲ್ಲಿ ಇದಕ್ಕೆ ತದ್ವಿರುದ್ಧ ಪದ್ದತಿ ಇದ್ದಂತಿದೆ. ಡಾಂಬರು ಹಾಕಿದ ಮೇಲೂ ಇನ್ನಾವುದೋ ಕಾರ್ಯಕ್ಕಾಗಿ ರಸ್ತೆ ಅಗೆಯುವುದು ನಡೆದಿದೆ. ಕೋಟ್ಯಾಂತರ ರೂ. ಖರ್ಚು ಮಾಡಿ ಇತ್ತೀಚೆಗೆ ನಗರದ ಬಿ.ಹೆಚ್. ರಸ್ತೆಯನ್ನು ಡಾಂಬರೀಕರಣ ಮಾಡಲಾಗಿತ್ತು, ಇದಾಗಿ ಕೆಲವೇ ದಿನಗಳಲ್ಲಿ ಸ್ಮಾರ್ಟ್ಸಿಟಿ ಲಿಮಿಟೆಡ್ನವರು ಡ್ರೈನ್ ನಿರ್ಮಾಣಕ್ಕಾಗಿ ಹೊಸ ಟಾರ್ ರಸ್ತೆಯನ್ನು ಅಗೆದು ತಮ್ಮ ಕಾಮಗಾರಿ ಮುಂದುವರೆಸಿದ್ದಾರೆ. ಇಂತಹ ಅಧ್ವಾನದ ಸಾಲಿಗೆ ನಗರದ ರೈಲ್ವೆ ನಿಲ್ದಾಣ ರಸ್ತೆ ಸೇರ್ಪಡೆಯಾಗಿದೆ.
ಹಲವಾರು ವರ್ಷಗಳಿಂದ ಜನ, ವಾಹನ ಓಡಾಡಲಾಗದಷ್ಟು ಅಧ್ವಾನಗೊಂಡು ಹಾಳಾಗಿದ್ದ ರೈಲ್ವೇಸ್ಟೇಷನ್ ರಸ್ತೆ ಅಭಿವೃದ್ಧಿ ಮಾಡಬೇಕು ಎಂದು ಅಲ್ಲಿನ ನಾಗರೀಕರು ಹೋರಾಟ ಮಾಡಿಕೊಂಡು ಬಂದಿದ್ದರು. ಈ ಹೋರಾಟ ಬೆಂಬಲಿಸಿ, ಇಲ್ಲಿನ 15ನೇ ವಾರ್ಡಿನ ನಗರಪಾಲಿಕೆ ಸದಸ್ಯೆ ಗಿರಿಜಾ ಧನಿಯಾಕುಮಾರ್ ಅವರು ಕಾಳಜಿವಹಿಸಿ, ಈ ರಸ್ತೆ ಅಗಲೀಕರಣ ಹಾಗು ಅಭಿವೃದ್ಧಿಗೆ ನೆರವಾದರು. ಪರಿಣಾಮ, ಈ ರಸ್ತೆಯನ್ನು ಇತ್ತೀಚೆಗೆ ಡಾಂಬರೀಕರಣಗೊಳಿಸಲಾಯಿತು.
ಇಲ್ಲಿಯವರೆಗೂ ಸುಮ್ಮನಿದ್ದ ಸ್ಮಾರ್ಟ್ ಸಿಟಿ ಲಿಮಿಟೆಡ್ನವರು, ಡಾಂಬರೀಕರಣ ಮುಗಿದ ಮೇಲೆ ಈಗ ರಸ್ತೆ ಅಗೆದು ಚರಂಡಿ ನಿರ್ಮಾಣ ಮಾಡುವ ಕಾಮಗಾರಿ ಕೈಗೊಂಡಿದ್ದಾರೆ. ಸಾಲದಕ್ಕೆ, ಮೆಗಾ ಗ್ಯಾಸ್ನವರು ಗ್ಯಾಸ್ ಲೈನ್ ಅಳವಡಿಕೆಗೆ ಈಗ ರಸ್ತೆ ಅಗೆತ ಶುರು ಮಾಡಿದ್ದಾರೆ. ಮೊನ್ನೆ ತಾನೆ ಟಾರ್ ಹಾಕಲಾಗಿದೆ, ಮತ್ತೆ ಯಾಕೆ ಅದನ್ನು ಕೀಳುತ್ತಿದ್ದೀರಿ ಎಂದು ನಾಗರಿಕರು ನಗರ ಪಾಲಕೆ ಸದಸ್ಯೆ ಗಿರಿಜಾ ಧನಿಯಾಕುಮಾರ್ ಅವರಿಗೆ ಫೋನ್ ಮಾಡಿ ಸುದ್ದಿ ತಿಳಿಸಿದಾಗ, ಪಾಲಿಕೆ ಸದಸ್ಯರು ಸ್ಥಳಕ್ಕೆ ಬಂದು ವೀಕ್ಷಣೆ ಮಾಡಿದಾಗ ಮೆಗಾ ಗ್ಯಾಸ್ನವರು ರಸ್ತೆ ಅಗೆಯುತ್ತಿದ್ದರು. ತಮ್ಮ ಗಮನಕ್ಕೆ ಬಾರದಂತೆ ಕಾಮಗಾರಿ ಆರಂಭಿಸಿದ್ದೀರಿ, ಹೊಸ ಡಾಂಬರು ಹಾಳು ಮಾಡಿದ್ದೀರಿ ಎಂದು ಆಕ್ಷೇಪವ್ಯಕ್ತಪಡಿಸಿ, ಮೇಯರ್ಗೆ ದೂರು ಸಲ್ಲಿಸಿದರು.
ಮೇಯರ್ ಫರೀದಾಬೇಗಂ, ಉಪಮೇಯರ್ ಶಶಿಕಲಾ ಗಂಗಹನುಮಯ್ಯ ಗುರುವಾರ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಪಾಲಿಕೆ ಗಮನಕ್ಕೆ ಹಾಗೂ ಸ್ಥಳೀಯ ಪಾಲಿಕೆ ಸದಸ್ಯರ ಗಮನಕ್ಕೆ ಬಾರದಂತೆ ಕಾಮಗಾರಿ ಆರಂಭಿಸಿದ್ದೀರಿ, ಕುಡಿಯುವ ನೀರಿನ ಪೈಪಿಗೆ ಹಾನಿಯಾಗಿ ತೊಂದರೆಯಾದರೆ ಯಾರು ಹೊಣೆ. ತಕ್ಷಣದಿಂದ ಕೆಲಸ ನಿಲ್ಲಿಸಿ ಎಂದು ಮೇಯರ್ ಫರೀದಾ ಬೇಗಂ ಅವರು ಕಾಮಗಾರಿಯ ಗುತ್ತಿಗೆದಾರರಿಗೆ ತಾಕೀತು ಮಾಡಿದರು.
ಎರಡು ಗಂಟೆಯಲ್ಲಿ ಕಾಮಗಾರಿ ಮುಗಿಸಿ, ತೆಗೆದ ಹಳ್ಳ ಮುಚ್ಚುವುದಾಗಿ ಗುತ್ತಿಗೆದಾರ ಹೇಳಿದರು. ಕಾಮಗಾರಿ ಆರಂಭಿಸುವ ಮೊದಲು ರಸ್ತೆಯಲ್ಲಿರುವ ಕುಡಿಯುವ ನೀರಿನ ಪೈಪ್, ಕೇಬಲ್ ಮತ್ತಿತರ ಸ್ಥಿತಿಗತಿಗಳ ಬಗ್ಗೆ ಪಾಲಿಕೆಯ ಸದಸ್ಯರಿಂದ ಅಥವಾ ಅಧಿಕಾರಿಗಳಿಂದ ಮಾಹಿತಿ ಪಡೆಯದೆ ಕೆಲಸ ಶುರು ಮಾಡಿದ್ದೀರಿ, ಕಾಮಗಾರಿ ಮುಗಿದ ಮೇಲೆ ರಸ್ತೆಯನ್ನು ಯಥಾಸ್ಥಿತಿಗೆ ಸಿದ್ಧ ಮಾಡಿಕೊಡಬೇಕು, ನೀವು ಹಳ್ಳ ತೆಗೆದು ಮಣ್ಣು ಮುಚ್ಚಿಹೋಗುವಿರಿ, ಇದರಿಂದ ರಸ್ತೆ ಹಾಳಾಗುತ್ತದೆ, ಮಳೆಗಾಲದಲ್ಲಿ ರಸ್ತೆ ಕೆಸರಾಗುತ್ತದೆ ಎಂದು ಪಾಲಿಕೆ ಸದಸ್ಯೆ ಗಿರಿಜಾ ಧನಿಯಾಕುಮಾರ್ ಗುತ್ತಿಗೆದಾರರನ್ನು ತರಾಟೆ ತೆಗೆದುಕೊಂಡರು.
ರಸ್ತೆಯನ್ನು ಈ ಮೊದಲಿನ ಸ್ಥಿತಿಯಲ್ಲಿ ಸಿದ್ಧಪಡಿಸಬೇಕು ಹಾಗೂ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಮೆಗಾ ಗ್ಯಾಸ್ನವರಿಗೆ ದಂಡ ವಿದಿಸಲಾಗುತ್ತದೆ ಎಂದು ಮೇಯರ್ ಹೇಳಿದರು.ಇನ್ನು ಮುಂದೆ ಯಾವುದೇ ಇಲಾಖೆ ಅಥವಾ ಸಂಸ್ಥೆ ಯಾವುದೇ ಕಾಮಗಾರಿ ಆರಂಭಿಸುವ ಮೊದಲು ನಗರಪಾಲಿಕೆ ಹಾಗೂ ಸ್ಥಳೀಯ ಸದಸ್ಯರಿಗೆ ಮಾಹಿತಿ ನೀಡಬೇಕು, ಉಲ್ಲಂಘನೆ ಮಾಡುವವರಿಗೆ ಪಾಲಿಕೆಯಿಂದ ದಂಡ ಅಥವಾ ಶಿಸ್ತಿನ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಮೇಯರ್ ಫರೀದಾ ಬೇಗಂ ಎಚ್ಚರಿಕೆ ನೀಡಿದರು.ಪಾಲಿಕೆ ಸದಸ್ಯ ಜೆ.ಕುಮಾರ್, ಬಿಜೆಪಿ ಮುಖಂಡರಾದ ಧನಿಯಾಕುಮಾರ್, ಮಹೇಶ್ಬಾಬು ಮತ್ತಿತರರು ಈ ವೇಳೆ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
