ಸಂಪುಟ ಸಭೆಯ ನಂತರ ರಾಗ ಬದಲಿಸಿದ ಬಿಜೆಪಿ ಶಾಸಕರು..!

ಬೆಂಗಳೂರು

   ರಾಜ್ಯದ ಮೂಲೆ ಮೂಲೆಗಳಲ್ಲಿ ಯಡಿಯೂರಪ್ಪ ಸಂಪುಟದ ಸಚಿವರು ಆರ್ಭಟಿಸುತ್ತಿದ್ದರೂ ಇಂದು ನಡೆದ ಸಚಿವ ಸಂಪುಟ ಸಭೆಯ ನಂತರ ಯೇಸುವೂ ಇಲ್ಲ,ದಂಡ ವಸೂಲಿಯೂ ಇಲ್ಲ ಎಂಬ ಮಾತು ಬಿಜೆಪಿ ಪಾಳೆಯಗಳಿಂದಲೇ ಕೇಳಿ ಬರತೊಡಗಿದೆ.

  ಕಪಾಲ ಬೆಟ್ಟದಲ್ಲಿ ಏಶ್ಯಾದಲ್ಲೇ ಅತ್ಯಂತ ದೊಡ್ಡ ಯೇಸುಕ್ರಿಸ್ತರ ಪ್ರತಿಮೆಯನ್ನು ನಿರ್ಮಿಸುವ ಸಂಬಂಧ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಪ್ರಕಟಿಸಿದ ನಿರ್ಧಾರ ಬಿಜೆಪಿ ವಲಯಗಳಿಂದ ವ್ಯಾಪಕ ಟೀಕೆಗೆ ಒಳಗಾಗಿತ್ತು.ಧರ್ಮದ್ರೋಹಿ ಎಂಬುದರಿಂದ ಹಿಡಿದು ಹಲವು ರೀತಿಯಲ್ಲಿ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರನ್ನು ಬಿಜೆಪಿ ಟೀಕಿಸುತ್ತಿದ್ದರೆ ಯಡಿಯೂರಪ್ಪ ಸಂಪುಟದ ಸಚಿವರು ಮತ್ತಿತರ ನಾಯಕರು ಕೂಡಾ ಅದಕ್ಕೆ ಜತೆ ನೀಡಿದ್ದರು.

   ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ,ಕಂದಾಯ ಸಚಿವ ಆರ್.ಅಶೋಕ್,ಕನ್ನಡ ಮತ್ತು ಸಂಸ್ಕøತಿ ಸಚಿವ ಸಿ.ಟಿ.ರವಿ,ಸಂಸದ ಅನಂತಕುಮಾರ್ ಹೆಗಡೆ,ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ಹಲವರು ಡಿಕೆಶಿ ವಿರುದ್ಧ ಮುನಿಸು ತೋರಿಸಿದ್ದರು.

   ಆದರೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಯೇಸು ಪ್ರತಿಮೆ ನಿರ್ಮಾಣದ ವಿವಾದದ ಬಗ್ಗೆ ಪ್ರಸ್ತಾಪವೇ ಆಗಲಿಲ್ಲ.ಇದೇ ರೀತಿ ಸಾರ್ವಜನಿಕ ಆಸ್ತಿ ಪಾಸ್ತಿಗೆ ನಷ್ಟ ಉಂಟು ಮಾಡುವ ಗಲಭೆಕೋರರಿಗೆ ದಂಡ ವಿಧಿಸಿ ನಷ್ಟ ಭರ್ತಿ ಮಾಡುವ ಸಂಬಂಧ ಉತ್ತರ ಪ್ರದೇಶ ಸರ್ಕಾರ ಜಾರಿಗೆ ತಂದ ಕಾನೂನಿನ ಮಾದರಿಯಲ್ಲೇ ರಾಜ್ಯದಲ್ಲಿ ಕೂಡಾ ಕಾನೂನು ಜಾರಿಗೊಳಿಸಬೇಕು ಎಂದು ಯಡಿಯೂರಪ್ಪ ಸಂಪುಟದ ಹಲವು ಸಚಿವರು ಸಾರ್ವಜನಿಕ ಹೇಳಿಕೆಗಳನ್ನು ನೀಡಿದ್ದರು.

   ಆದರೆ ಈ ವಿಷಯದಲ್ಲೂ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಯಾವ ಸಚಿವರು ಕೂಡಾ ಪ್ರಸ್ತಾಪ ಮಾಡಲಿಲ್ಲ.ಹೀಗಾಗಿ ಸಂಪುಟ ಸಭೆಯ ನಂತರ ಯೇಸುವೂ ಇಲ್ಲ,ದಂಡ ವಸೂಲಿಯೂ ಇಲ್ಲ ಎಂಬ ಮಾತು ಬಿಜೆಪಿ ವಲಯಗಳಿಂದಲೇ ಕೇಳಿ ಬರುತ್ತಿದೆ.ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಈ ಎರಡು ವಿಷಯಗಳ ಕುರಿತು ಸುದ್ದಿಗಾರರು ಪ್ರಶ್ನಿಸಿದಾಗ,ಹೊರಗೆ ನಾವು ಆಡುವ ಮಾತುಗಳ ಬಗೆಗೆಲ್ಲ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲು ಸಾಧ್ಯವೇ ಎಂದು ಮರು ಪ್ರಶ್ನಿಸಿದರು.

   ಯೇಸು ಪ್ರತಿಮೆ ನಿರ್ಮಾಣದ ವಿಷಯವನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲು ಸಾಧ್ಯವೇ?ಎಂದು ಪ್ರಶ್ನಿಸಿದ ಅವರು ಬಹಿರಂಗವಾಗಿ ಆಡಿದ ಮಾತುಗಳ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸುವುದಿಲ್ಲ ಎಂದರು.ಅಲ್ಲಿ ಸರ್ಕಾರದ ಉನ್ನತಾಧಿಕಾರಿಗಳು ಇರುತ್ತಾರೆ.ಸಂಬಂಧ ಪಟ್ಟ ಇಲಾಖೆಗಳವರು ಉಪಸ್ಥಿತರಿರುತ್ತಾರೆ.ಅವರ ಮುಂದೆ ಇಂತಹ ವಿಷಯಗಳನ್ನು ಚರ್ಚಿಸುತ್ತಾ ಕೂರಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

    ಗಲಭೆ ಮಾಡಿ ಸಾರ್ವಜನಿಕ ಆಸ್ತಿ ಪಾಸ್ತಿಗೆ ನಷ್ಟ ಉಂಟು ಮಾಡಿದವರಿಂದಲೇ ದಂಡವಸೂಲಿ ಮಾಡಬೇಕು ಎಂದು ನಾನೂ ಹೇಳಿದ್ದೇನೆ.ಆದರೆ ಈಗಿರುವ ಕಾನೂನಿನಲ್ಲಿಯೇ ಗಲಭೆಕೋರರಿಗೆ ದಂಡ ವಿಧಿಸಲು,ಶಿಕ್ಷೆ ವಿಧಿಸಲು ಅವಕಾಶವಿದೆ ಎಂದರು.ಆದರೆ ಉತ್ತರ ಪ್ರದೇಶದ ಮಾದರಿಯಲ್ಲಿ ಅತ್ಯಂತ ಪರಿಣಾಮಕಾರಿಯಾದ ಕಾಯ್ದೆಯೊಂದನ್ನು ಮಾಡಬೇಕೇ?ಎಂಬ ಕುರಿತು ಇಂದಿನ ಸಂಪುಟ ಸಭೆಯಲ್ಲಿ ಚರ್ಚೆಯಾಗಿಲ್ಲ.ಸಧ್ಯದ ಸ್ಥಿತಿಯಲ್ಲಿ ಅದರ ಅಗತ್ಯವೂ ಇದೆ ಎಂದು ಅನ್ನಿಸುತ್ತಿಲ್ಲ.

   ಮುಂದಿನ ದಿನಗಳಲ್ಲಿ ಸನ್ನಿವೇಶಗಳು ಹೇಗೆ ನಿರ್ಮಾಣವಾಗುತ್ತವೆ?ಎಂಬುದನ್ನು ನೋಡಿ ತೀರ್ಮಾನ ಕೈಗೊಳ್ಳಬಹುದು.ಆದರೆ ಇವತ್ತಿನ ಸ್ಥಿತಿಯಲ್ಲಿ ಅಂತಹ ಕಾನೂನಿನ ಅಗತ್ಯವಿಲ್ಲ ಎಂದರು.ಈಗ ಆಂಧ್ರಪ್ರದೇಶದಲ್ಲಿ ಒಂದು ಕಾನೂನು ಜಾರಿಗೆ ತರುವುದಾಗಿ ಹೇಳಿದ್ದಾರೆ.ಅಪರಾಧ ನಡೆದ 21 ದಿನಗಳಲ್ಲಿ ಕ್ರಮ ಕೈಗೊಳ್ಳುವ ಸಂಬಂಧ ಈ ಕಾನೂನು ಜಾರಿಗೆ ತರುವುದಾಗಿ ಹೇಳಿದ್ದಾರೆ.ಆದರೆ ಇಷ್ಟು ಶೀಘ್ರಗತಿಯಲ್ಲಿ ಒಂದು ಅಪರಾಧ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ಸಾಧ್ಯವೇ?ಎಂಬ ಕುರಿತು ನನಗೆ ಮಾಹಿತಿ ನೀಡಿ.ಮುಂದಿನ ಹೆಜ್ಜೆ ಇಡೋಣ ಎಂದು ಹೇಳಿದ್ದೇನೆ.

    ನ್ಯಾಯದಾನ ವಿಳಂಬವಾಗುವುದು ಹೇಗೆ ಸರಿಯಲ್ಲವೋ?ಹಾಗೆಯೇ ತರಾತುರಿಯಲ್ಲಿ ನ್ಯಾಯದಾನ ನೀಡುವುದೂ ಸರಿಯಲ್ಲ.ಹರೀಡ್ ಈಸ್ ಬರೀಡ್ ಎಂಬ ಮಾತು ಇದೆ. ಹಾಗಾಗಬಾರದು ಎಂದು ಹೇಳಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link