ಚಿತ್ರದುರ್ಗ:
ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಹಾಗೂ ಕನ್ನಡದ ಮೇಲೆ ಪರಭಾಷಿಕರ ದಬ್ಬಾಳಿಕೆ ನಡೆಯುತ್ತಿರುವುದು ನಿಲ್ಲಬೇಕಾಗಿರುವುದರಿಂದ ರಾಜ್ಯದಲ್ಲಿ ಮತ್ತೊಮ್ಮೆ ಗೋಕಾಕ್ ಮಾದರಿ ಚಳುವಳಿ ಆರಂಭಿಸಲು ನ.21 ರಂದು ಚಿತ್ರದುರ್ಗದಲ್ಲಿ ಪತ್ರ ಚಳುವಳಿ ನಡೆಸುವುದಾಗಿ ಕದಂಬ ಸೈನ್ಯ ಕನ್ನಡ ಸಂಘಟನೆಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕನ್ನಡ ಉಳಿವಿಗಾಗಿ ನಡೆದ ಗೋಕಾಕ್ ಚಳುವಳಿಯ ನೇತೃತ್ವವನ್ನು ಮೂವತ್ತೈದು ನಲವತ್ತು ವರ್ಷಗಳ ಹಿಂದೆ ಪದ್ಮಭೂಷಣ ಡಾ.ರಾಜ್ಕುಮಾರ್ ವಹಿಸಿ ರಾಜ್ಯಾದ್ಯಂತ ಸಂಚರಿಸಿ ಕನ್ನಡಿಗರಲ್ಲಿ ಸಂಚಲನ ಮೂಡಿಸಿದ್ದರು. ಇಂದು ಅವರ ಪುತ್ರ ನಟ ಶಿವರಾಜ್ಕುಮಾರ್ ಮತ್ತೊಮ್ಮೆ ಗೋಕಾಕ್ ಮಾದರಿಯ ಚಳುವಳಿ ನೇತೃತ್ವ ವಹಿಸಲಿ ಎಂದು ಮನವಿ ಮಾಡಿದರು.
ಕರ್ನಾಟಕದಲ್ಲಿಯೇ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಸಿಗುತ್ತಿಲ್ಲ. ಕನ್ನಡಿಗರ ಉದ್ಯೋಗವನ್ನು ಪರಭಾಷಿಕರು ಕಸಿದುಕೊಳ್ಳುತ್ತಿದ್ದಾರೆ. ಸರೋಜಿನಿ ಮಹಿಷಿ ವರದಿ ಜಾರಿಯಾಗಬೇಕು. ಕನ್ನಡ ನಾಡು, ನುಡಿ, ನೆಲ, ಜಲ ಉಳಿಯಬೇಕಾಗಿರು ವುದರಿಂದ ಮೇರು ನಟರುಗಳಾದ ಶಿವರಾಜ್ಕುಮಾರ್, ಪುನಿತ್ರಾಜ್ಕುಮಾರ್, ದರ್ಶನ್, ಯಶ್, ಗಣೇಶ್, ಹಿರಿಯ ನಟರುಗಳಾದ ರವಿಚಂದ್ರನ್, ಡಾ.ರಾಜ್ಕುಮಾರ್, ಸಾಹಸ ಸಿಂಹ ವಿಷ್ಣುವರ್ಧನ್, ರೆಬೆಲ್ ಸ್ಟಾರ್ ಅಂಬರೀಶ್ ಅಭಿಮಾನಿಗಳು ಮತ್ತೊಮ್ಮೆ ಗೋಕಾಕ್ ಮಾದರಿ ಚಳುವಳಿಗೆ ಕೈಜೋಡಿಸಲಿ ಎಂದು ಕೋರಿದರು.ಕದಂಬ ಸೈನ್ಯ ಕನ್ನಡ ಸಂಘಟನೆ ರಾಜ್ಯ ಸದಸ್ಯ ಎಸ್.ತಿಮ್ಮಯ್ಯ ಮ್ಯಾಕ್ಲೂರಹಳ್ಳಿ, ನಗರಾಧ್ಯಕ್ಷ ಆರ್.ಸಂತೋಷ್, ಮೈಸೂರು ಜಿಲ್ಲಾಧ್ಯಕ್ಷ ನಾಗೇಂದ್ರ, ಅರುಣ್ಕುಮಾರ್ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
