ಸಬ್‍ರಿಜಿಸ್ಟ್ರಾರ್ ಕಚೇರಿಯಲ್ಲಿ ಏಜೆಂಟರದೇ ದರ್ಬಾರ್

ತುಮಕೂರು

    ಈ ಕಚೇರಿಯೊಳಗೆ ಎಂಟ್ರಿಕೊಟ್ಟು ಕೆಲಸ ಮಾಡಿಸಿಕೊಂಡು ಬರುವುದು ಅಷ್ಟು ಸಲೀಸಲ್ಲ. ನೇರವಾಗಿ ಅಧಿಕಾರಿಗಳನ್ನು ಭೇಟಿ ಮಾಡಿ ಕೆಲಸ ಮಾಡಿಸಿಕೊಳ್ಳುವ ವ್ಯವಸ್ಥೆ ಅಷ್ಟು ಸಲೀಸಾಗಿಲ್ಲ. ಅಲ್ಲಿ ಎದುರಾಗುವ ಅಡ್ಡಿ ಆತಂಕಗಳನ್ನು, ಎಡರುತೊಡರುಗಳನ್ನು ಗಮನಿಸಿಯೇ ಮೂರನೇ ವ್ಯಕ್ತಿಗಳ ಮೊರೆ ಹೋಗುತ್ತಾರೆ.

    ತುಮಕೂರಿನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸಾರ್ವಜನಿಕ ಸ್ನೇಹಿ ಸೇವೆ ಇಲ್ಲವೇಇಲ.್ಲ ಇಲ್ಲಿ ಮಧ್ಯವರ್ತಿಗಳಿಲ್ಲದೆ, ಹಣವಿಲ್ಲದೆ ಯಾವ ಕೆಲಸವೂ ಆಗುವುದಿಲ್ಲ. ಸರ್ಕಾರದ ಪ್ರಮುಖ ಆದಾಯ ಮೂಲವಾಗಿರುವ ಸಬ್‍ರಿಜಿಸ್ಟ್ರಾರ್ ಕಚೇರಿಯಲ್ಲಿ ಅಷ್ಟೇ ಪ್ರಮಾಣದಲ್ಲಿ ಸಾರ್ವಜನಿಕರ ಶೋಷಣೆ ನಡೆಯುತ್ತಿದೆ. ಈ ಕಚೇರಿ ಮಧ್ಯವರ್ತಿಗಳ ಮೂಲಕ ಹಣ ಮಾಡುವ ದಂಧೆ ಕೇಂದ್ರವಾಗಿದೆ ಎಂಬುದು ಸಾರ್ವಜನಿಕರ ಊರು.

   ಆಸ್ತಿಗಳ ನೋಂದಣಿ ಈ ಕಚೇರಿಯಲ್ಲಿ ನಡೆಯುತ್ತದೆ. ಜಮೀನುಗಳ ನೋಂದಣಿಯೂ ಸೇರಿದಂತೆ ವಿವಾಹ ನೋಂದಣಿ ಹಾಗೂ ಜಮೀನಿಗೆ ಸಂಬಂಧಿಸಿದ ದಾಖಲೆ ಪತ್ರಗಳ ಪ್ರಕ್ರಿಯೆ ನಡೆಯುವುದು ಈ ಕಚೇರಿಯಲ್ಲಿಯೇ. ಯಾವುದೇ ಪತ್ರಗಳ ನೊಂದಣಿಗೆಂದು ಈ ಸಬ್‍ರಿಜಿಸ್ಟ್ರಾರ್ ಕಚೇರಿಗೆ ಹೋದರೆ ಏಜೆಂಟರಿಲ್ಲದೆ ಯಾವ ಕೆಲಸವೂ ಆಗುವುದಿಲ್ಲ. ಸಾರ್ವಜನಿಕರಿಗೆ ಅಗತ್ಯ ಮಾಹಿತಿ, ಮಾರ್ಗದರ್ಶನ ನೀಡುವ ಸೌಜನ್ಯ ಇಲ್ಲಾರಿಗೂ ಇಲ್ಲ, ಬದಲಿಗೆ ದಿಕ್ಕುತಪ್ಪಿಸುವವರು ಇರುತ್ತಾರೆ. ಇಲ್ಲಿ ಸಾರ್ವಜನಿಕರ ಕೆಲಸ ಅಷ್ಟು ಸಲೀಸಾಗಿ ಆಗುವುದಿಲ್ಲ. ಅಧಿಕಾರಿ, ಸಿಬ್ಬಂದಿ ಏನಾದರೊಂದು ಆಕ್ಷೇಪಣೆ ಹುಡುಕಿ, ಕೆಲಸಕ್ಕೆ ಕೊಕ್ಕೆ ಇಡುತ್ತಾರೆ. ಆದರೆ, ಅದೇ, ಏಜೆಂಟರ ಮೂಲಕ ಹೋದರೆ ಯಾವುದೇ ಆಕ್ಷೇಪಣೆಗಳಿಲ್ಲದೆ ಸುಗಮವಾಗಿ ಕೆಲಸ ಕಾರ್ಯಗಳಾಗಿಬಿಡುತ್ತವೆ.

     ಸಬ್‍ರಿಜಿಸ್ಟ್ರಾರ್ ಕಚೇರಿಯ ಲಂಚದ ದಂಧೆ ಬಗ್ಗೆ ಮೇಲಾಧಿಕಾರಿಗಳಿಗಾಗಲಿ, ಚುನಾಯಿತ ಪ್ರತಿ ನಿಧಿಗಳಿಗಾಗಲಿ ಗೊತ್ತಿಲ್ಲವೆಂದಲ್ಲ, ಎಲ್ಲರಿಗೂ ಎಲ್ಲವೂ ಗೊತ್ತು, ನಿಯಂತ್ರಿಸಲು ಕ್ರಮ ತೆಗೆದುಕೊಳ್ಳಬೇಕಾದವರೂ ಲಾಭವನ್ನೇ ನೋಡಿಕೊಂಡು ತೆಪ್ಪಗಿದ್ದಾರಷ್ಟೆ. ಹಾಗಾಗಿ ಇಲ್ಲಿ ಲಂಚ ಪಡೆಯುವ ಅಧಿಕಾರಿ, ಸಿಬ್ಬಂದಿಗೆ ಯಾವುದೇ ಮುಜುಗರ, ಭಯ ಕಿಂಚಿತ್ತೂ ಇಲ್ಲ ಎನ್ನುತ್ತಾರೆ ನಗರದ ಉಪ್ಪಾರಹಳ್ಳಿಯ ನಾರಾಯಣಪ್ಪ.

    ತುಮಕೂರು ಕಚೇರಿಯಲ್ಲಿ ಮೂವರು ಸಬ್‍ರಿಜಿಸ್ಟ್ರಾರ್‍ಗಳಿದ್ದಾರೆ. ಬೆಳಿಗ್ಗೆ ಬಂದು ತಮ್ಮ ಕೊಠಡಿಯೊಳಗೆ ಹೋಗಿ ಬಾಗಿಲು ಹಾಕಿಕೊಂಡರೆಂದರೆ ಸಂಜೆ ಕಚೇರಿಯ ವ್ಯವಹಾರ-ವಹಿವಾಟು ಮುಗಿದ ನಂತರವೇ ಹೊರ ಬರುವುದು. ಇವರು ಸಾರ್ವಜನಿಕೊಂದಿಗೆ ಬೆರೆಯಲು ಬಯಸುವುದಿಲ್ಲ. ಹೀಗಾಗಿ, ಕಚೇರಿಯಲ್ಲಿ ಏನೇನು ಆಗುತ್ತದೆ, ಸಮಸ್ಯೆಗಳೇನು ಎಂಬುದರ ಬಗ್ಗೆ ಇವರು ತಮಗೆ ಸಂಬಂಧವೇ ಇಲ್ಲವೇನೋ ಎನ್ನುವಂತಿರುತ್ತಾರೆ.

    ಸಾರ್ವಜನಿಕರು ಸಬ್‍ರಿಜಿಸ್ಟ್ರಾರ್‍ರನ್ನು ಭೇಟಿ ಮಾಡಲು ಕಚೇರಿ ಸಿಬ್ಬಂದಿ, ಏಜೆಂಟರೇ ಬಿಡುವುದಿಲ್ಲ, ಸಾಹೇಬರು ಬ್ಯುಸಿ ಇದ್ದಾರೆ, ಏನು ಕೆಲಸ ಆಗಬೇಕು ಹೇಳಿ ಎಂದು ಅವರನ್ನು ತಡೆಯುತ್ತಾರೆ. ಏಜೆಂಟರಿಲ್ಲದೆ ತಾವು ಸಬ್ ರಿಜಿಸ್ಟ್ರಾರ್‍ರನ್ನು ಭೇಟಿ ಮಾಡಿದರೂ ಪ್ರಯೋಜನವಿಲ್ಲ, ದೂರು ಕೊಟ್ಟರೂ ಅವರು ಪರಿಗಣಿಸುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಹಾಗಾಗಿ ಅವರ ಭೇಟಿ ಬಗ್ಗೆ ಯಾರೂ ಆಸಕ್ತಿ ತೋರುವುದಿಲ್ಲ ಎನ್ನುತ್ತಾರೆ.

    ಸಬ್‍ರಿಜಿಸ್ಟ್ರಾರ್ ಕಚೇರಿಯಲ್ಲಿ ಏಜೆಂಟರು ಕಚೇರಿ ಪ್ರತಿನಿಧಿಗಳಂತೆ, ಅವರು ಅಧಿಕಾರಿ, ಸಿಬ್ಬಂದಿಗೆ ಕಾಮಧೇನುವಿನಂತೆ. ಹಾಗಾಗಿ ಇಲ್ಲಿ ಏಜೆಂಟರಿಗೆ ವಿಶೇಷ ಗೌರವ. ಕೆಲವು ಸಬ್‍ರಿಜಿಸ್ಟರ್‍ಗಳು ಹಿಂದೆ ಸೇವೆಯಲ್ಲಿದ ಊರಿನಲ್ಲಿ ಅಲ್ಲಿ ತಮ್ಮ ನಂಬಿಕೆ ಉಳಿಸಿಕೊಂಡಿದ್ದ ಅನುಭವಿ ವ್ಯವಹಾರಸ್ಥ ಏಜೆಂಟರನ್ನು ಇಲ್ಲಿಗೂ ಕರೆದುಕೊಂಡು ಬಂದಿದ್ದಾರೆ. ಇಲ್ಲಿನ ಏಜೆಂಟರುಗಳು ಸಬ್ ರಿಜಿಸ್ಟ್ರಾರ್‍ಗಳ ಆಪ್ತ ಏಜೆಂಟರ ಸಲಹೆ ಅನುಸರಿಸಿ ವ್ಯವಹಾರ ಮಾಡಬೇಕು. ಹೀಗಾಗಿ ಸಬ್ ರಿಜಿಸ್ಟ್ರಾರ್ ಕಚೇರಿ ಏಜೆಂಟರ ಕಪಿಮುಷ್ಠಿಯಲ್ಲಿದೆ.

    ಇಲ್ಲಿರುವ ಕೆಲವು ಏಜೆಂಟರು ಇಡೀ ಕಚೇರಿಯನ್ನು, ಅಧಿಕಾರಿಗಳನ್ನು ನಿಯಂತ್ರಿಸುವಷ್ಟು ಪ್ರಭಾವಿಗಳಾಗಿದ್ದಾರೆ.
ಇತರೆ ಸರ್ಕಾರಿ ಕಚೇರಿಗಳಲ್ಲಿ ಇರುವಂತೆ ಸಬ್‍ರಿಜಿಸ್ಟ್ರಾರ್ ಕಚೇರಿಯಲ್ಲಿ ಸಾರ್ವಜನಿಕರಿಗೆ ಒದಗಿಸಬೇಕಾದ ಸೌಲಭ್ಯಗಳಿಲ್ಲ, ಸೌಜನ್ಯವೂ ಇಲ್ಲ. ಕಚೇರಿ ಆವರಣದಲ್ಲಿ ಸಾರ್ವಜನಿಕರ ವಾಹನಗಳ ನಿಲುಗಡೆಗೆ ಮಾಡಿದ್ದ ಪಾರ್ಕಿಂಗ್ ಜಾಗದಲ್ಲಿ ಪತ್ರಬರಹಗಾರರು, ಏಜೆಂಟರು ಕುರ್ಚಿ, ಟೇಬಲ್ ಹಾಕಿದ್ದಾರೆ.

   ಸಾರ್ವಜನಿಕರು ಕುಳಿತುಕೊಳ್ಳಲೆಂದು ಹಾಕಿದ್ದ ಬೇಂಚುಗಳನ್ನೂ ಇವರು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನ್ಯಾಯಾಲಯ, ವಿವಿಧ ಇಲಾಖೆಗಳ ಕಚೇರಿಗಳು ಇಲ್ಲಿರುವ ಕಾರಣ ಈ ಪ್ರದೇಶದಲ್ಲಿ ಜನ, ವಾಹನ ಜಂಗುಳಿ ಇರುತ್ತದೆ, ವಾಹನ ನಿಲ್ಲಿಸಲು ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಈ ಬಗ್ಗೆ ಸಬ್ ರಿಜಿಸ್ಟ್ರಾರ್ ಕಚೇರಿಯ ಯಾವ ಅಧಿಕಾರಿಯೂ ಸಾರ್ವಜನಿಕರಿಗೆ ಆಗುವ ಅನಾನುಕೂಲಗಳ ಬಗ್ಗೆ ಗಮನ ಹರಿಸುತ್ತಿಲ್ಲ, ಅವರಿಗೆ ಅದು ಬೇಕಾಗೂ ಇಲ್ಲ.

    ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಒಂದು ಇಲಾಖೆ ಕಚೇರಿಯಲ್ಲಿ ಇರಬೇಕಾದ ಶಿಸ್ತು, ಲಕ್ಷಣವೇ ಕಾಣುವುದಿಲ್ಲ, ಕಚೇರಿ ಒಳಗೆ ಹೋದವರಿಗೆ ಸಂತೆಗೆ ಬಂದ ಅನುಭವವಾಗುತ್ತದೆ. ಒಳ ಹೋದವರಿಗೆ ಅಲ್ಲಿ ಅಧಿಕಾರಿ ಯಾರು, ಸಿಬ್ಬಂದಿ ಯಾರು ಎಂದು ತಿಳಿಯದೆ ಗೊಂದಲಕ್ಕೀಡಾಗುತ್ತಾರೆ, ಯಾರನ್ನು ಕೇಳಬೇಕು ಎಂದು ಗೊತ್ತಾಗುವುದಿಲ್ಲ. ಅಲ್ಲಿ ಕಚೇರಿ ಸಿಬ್ಬಂದಿ ಕಾಣುವುದಿಲ್ಲ, ಏಜೆಂಟರೇ ಕಾಣುತ್ತಾರೆ, ಏನೇ ಕೇಳಲೂ ಹೋದರೂ ಬಲೆಗೆ ಬೀಳಿಸಿಕೊಳ್ಳುತ್ತಾರೆ, ವ್ಯವಹಾರ ಕುದುರಿಸುತ್ತಾರೆ ಎಂದು ಸತ್ಯಮಂಗಲದ ದೊಡ್ಡೇಗೌಡ ಹೇಳುತ್ತಾರೆ.

   ಗುಟ್ಟಾಗಿರಬೇಕಾಗಿದ್ದ ಕಚೇರಿಯ ವೈಫೈ ಪಾಸ್‍ವರ್ಡ್ ಇಲ್ಲಿನ ಏಜೆಂಟರು, ಕೆಲ ಪತ್ರ ಬರಹಗಾರರಗೆ ಬಾಯಿಪಾಠವಾಗಿದೆ. ಅವರೆಲ್ಲಾ ತಮ್ಮ ವ್ಯವಹಾರಕ್ಕೆ ಕಚೇರಿಯ ವೈಫೈ ಬಳಸಿಕೊಳ್ಳುತ್ತಿದ್ದಾರೆ. ಯಾವುದೇ ನೊಂದಣಿಯಾದ ನಂತರ ಡಾಕ್ಯೂಮೆಂಟ್ಸ್ ಪ್ರತಿಗಳ ಒಂದು ಸೆಟ್ಟು ಝೆರಾಕ್ಸ್ ಅನ್ನು ಕಚೇರಿಯಿಂದ ಕೊಡಬೇಕು, ಇದಕ್ಕಾಗಿ ಶುಲ್ಕ ಕಟ್ಟಿಸಿಕೊಳ್ಳಲಾಗಿರುತ್ತದೆ. ಆದರೆ, ಈ ಕಚೇರಿಯ ಝೆರಾಕ್ಸ್ ಮೆಷಿನ್ ಕೆಟ್ಟಹೋಗಿರುತ್ತದೆ, ಅದನ್ನು ಬೇಕೆಂತಲೇ ಕೆಡಿಸಲಾಗುತ್ತದೆ ಎನ್ನಲಾಗಿದೆ, ಹೊರಗೆ ಝೆರಾಕ್ಸ್ ಮಾಡಿಸಲು ಗ್ರಾಹಕರು ಹಣ ಕೊಡ ಬೇಕು.

     ಕಚೇರಿ ಒಳಗಿನ ಸ್ಕ್ಯಾನಿಂಗ್ ಮೆಷಿನ್ ಹಾಗೂ ಅದರ ನಿರ್ವಹಣೆಯನ್ನು ಖಾಸಗಿ ಏಜೆನ್ಸಿಗೆ ನೀಡಲಾಗಿದೆ. ಆ ಏಜೆನ್ಸಿಯವರು ನಿರ್ವಹಣ ಸಿಬ್ಬಂದಿಗೆ ಸಂಬಳ ಕೊಡಬೇಕು. ಆದರೆ, ಆ ಸಿಬ್ಬಂದಿಗೆ ಸರಿಯಾಗಿ ಸಂಬಳ ವಿತರಣೆಯಾಗುತ್ತಿಲ್ಲ ಎನ್ನಲಾಗಿದೆ. ಆದರೆ, ತಮಗೆ ಸಂಬಳವಿಲ್ಲ, ಜೀವನ ನಿರ್ವಹಣೆ ಕಷ್ಟವಾಗಿದೆ, ಬೇರೆ ಕೆಲಸ ನೋಡಿಕೊಳ್ಳಬೇಕು ಎಂದು ಆ ಸಿಬ್ಬಂದಿ ಎಂದೂ ಹೇಳಿಕೊಂಡಂತಿಲ್ಲ! ಅವರಿಗೆ ಕಚೇರಿ ಒಳಗೆ ದೊಡ್ಡ ಆದಾಯವಿದೆ, ಸಂಬಳ ಲೆಕ್ಕಕ್ಕಿಲ್ಲ.

   ಸರ್ಕಾರದ ಇತರ ಇಲಾಖೆಗಳ ಕಚೇರಿಗಳಂತೆ ಸಬ್ ರಿಜಿಸ್ಟ್ರಾರ್ ಕಚೇರಿ ಕೂಡಾ ಸಾರ್ವಜನಿಕ ಸ್ನೇಹಿಯಾಗಲು ಏಕೆ ಸಾಧ್ಯವಾಗಿಲ್ಲ. ಇಲ್ಲಿ ಸಾರ್ವಜನಿಕರ ಶೋಷಣೆ, ಲಂಚಕೋರ ದಂಧೆಗೆ ಕಡಿವಾಣ ಹಾಕುವ ಪ್ರಯತ್ನ ಏಕೆ ನಡೆದಿಲ್ಲ ಎಂಬುದು ಸಾರ್ವಜನಿಕರ ಪ್ರಶ್ನೆ.

    ಕಚೇರಿಯಲ್ಲಿ ವಿಚಾರಣಾ ಕೌಂಟರ್ ತೆರೆದು ಸಾರ್ವಜನಿಕರಿಗೆ ಅಗತ್ಯ ಸಲಹೆ, ಮಾಹಿತಿ ನೀಡುವ ಸಿಬ್ಬಂದಿ ನೇಮಿಸಬೇಕು. ಸಬ್ ರಿಜಿಸ್ಟ್ರಾರ್ ಕಚೇರಿಯನ್ನು ಮಧ್ಯವರ್ತಿಗಳಿಂದ ಮುಕ್ತಗೊಳಿಸಬೇಕು, ಸಾರ್ವಜನಿಕರಿಗೆ ಮುಕ್ತ ಸೇವೆ ದೊರೆಯುವಂತಾಗಬೇಕು ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು, ಆಡಳಿತ ವರ್ಗ ಕ್ರಮ ತೆಗೆದುಕೊಂಡು ನೆರವಾಗಬೇಕು ಎಂಬುದು ಸಾರ್ವಜನಿಕರ ಒತ್ತಾಯ.

      ಸಬ್‍ರಿಜಿಸ್ಟ್ರಾರ್ ಕಚೇರಿಯ ಲಂಚದ ದಂಧೆ ಬಗ್ಗೆ ಮೇಲಾಧಿಕಾರಿಗಳಿಗಾಗಲಿ, ಚುನಾಯಿತ ಪ್ರತಿ ನಿಧಿಗಳಿಗಾಗಲಿ ಗೊತ್ತಿಲ್ಲವೆಂದಲ್ಲ, ಎಲ್ಲರಿಗೂ ಎಲ್ಲವೂ ಗೊತ್ತು, ನಿಯಂತ್ರಿಸಲು ಕ್ರಮ ತೆಗೆದುಕೊಳ್ಳಬೇಕಾದವರೂ ಲಾಭವನ್ನೇ ನೋಡಿಕೊಂಡು ತೆಪ್ಪಗಿದ್ದಾರಷ್ಟೆ.                                                      -ನಾರಾಯಣಪ್ಪ, ಉಪ್ಪಾರಹಳ್ಳಿ .

     ಸಬ್‍ರಿಜಿಸ್ಟ್ರಾರ್ ಕಚೇರಿಯಲ್ಲಿ ಸಾರ್ವಜನಿಕರಿಗೆ ಒದಗಿಸಬೇಕಾದ ಸೌಲಭ್ಯಗಳಿಲ್ಲ, ಸೌಜನ್ಯವೂ ಇಲ್ಲ. ಕಚೇರಿ ಆವರಣದಲ್ಲಿ ಸಾರ್ವಜನಿಕರ ವಾಹನಗಳ ನಿಲುಗಡೆಗೆ ಮಾಡಿದ್ದ ಪಾರ್ಕಿಂಗ್ ಜಾಗದಲ್ಲಿ ಪತ್ರಬರಹಗಾರರು, ಏಜೆಂಟರು ಕುರ್ಚಿ, ಟೇಬಲ್ ಹಾಕಿದ್ದಾರೆ. ಸಾರ್ವಜನಿಕರು ಕುಳಿತುಕೊಳ್ಳಲೆಂದು ಹಾಕಿದ್ದ ಬೇಂಚುಗಳನ್ನೂ ಇವರು ಬಳಕೆ ಮಾಡಿಕೊಳ್ಳುತ್ತಿದ್ದಾರೆ.
 

     ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಒಂದು ಇಲಾಖೆ ಕಚೇರಿಯಲ್ಲಿ ಇರಬೇಕಾದ ಶಿಸ್ತು, ಲಕ್ಷಣವೇ ಕಾಣುವುದಿಲ್ಲ, ಕಚೇರಿ ಒಳಗೆ ಹೋದವರಿಗೆ ಸಂತೆಗೆ ಬಂದ ಅನುಭವವಾಗುತ್ತದೆ. ಒಳ ಹೋದವರಿಗೆ ಅಲ್ಲಿ ಅಧಿಕಾರಿ ಯಾರು, ಸಿಬ್ಬಂದಿ ಯಾರು ಎಂದು ತಿಳಿಯದೆ ಗೊಂದಲಕ್ಕೀಡಾಗುತ್ತಾರೆ, ಯಾರನ್ನು ಕೇಳಬೇಕು ಎಂದು ಗೊತ್ತಾಗುವುದಿಲ್ಲ. ಅಲ್ಲಿ ಕಚೇರಿ ಸಿಬ್ಬಂದಿಗಿಂತಾ ಏಜೆಂಟರೇ ಕಾಣುತ್ತಾರೆ. ಏನೇ ಕೇಳಲೂ ಹೋದರೂ ಬಲೆಗೆ ಬೀಳಿಸಿಕೊಳ್ಳುತ್ತಾರೆ, ವ್ಯವಹಾರ ಕುದುರಿಸುತ್ತಾರೆ.                                                         -ದೊಡ್ಡೇಗೌಡ, ಸತ್ಯಮಂಗಲ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link