ಗುಬ್ಬಿ
ಕಳೆದೆರಡು ದಿನಗಳಿಂದ ತಾಲ್ಲೂಕಿನ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು ಪೂರ್ವ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಬೇಸಿಗೆಯ ಬಿಸಿಲ ಬೇಗೆಯಿಂದ ತತ್ತರಿಸಿದ್ದ ರೈತರಿಗೆ ಮಳೆಯಾಗಿರುವುದು ಸ್ವಲ್ಪ ತಂಪು ತಂದಿದೆ. ಮಳೆ ಬೀಳುತ್ತಿದ್ದಂತೆ ರೈತರು ಪೂರ್ವ ಮುಂಗಾರು ಹಂಗಾಮಿನ ಬೆಳೆಗಳನ್ನು ಬಿತ್ತನೆ ಮಾಡಲು ಭೂಮಿ ಹದಮಾಡಿಕೊಳ್ಳಲು ಮುಂದಾಗಿದ್ದಾರೆ.
ಕಳೆದ ಹಲವು ವರ್ಷಗಳಿಂದ ಸಮರ್ಪಕವಾಗಿ ಮಳೆ ಬಾರದೆ ಅಂತರ್ಜಲ ಕುಸಿತಗೊಂಡಿದೆ. ರೈತರ ಜೀವನಾಡಿಯಾಗಿರುವ ಕೃಷಿ ಬೆಳೆಗಳು ಸೇರಿದಂತೆ, ತೋಟಗಾರಿಕೆ ಬೆಳೆಗಳಾದ ತೆಂಗು, ಅಡಕೆ, ಬಾಳೆ, ಮಾವು ಮುಂತಾದ ಬೆಳೆಗಳು ನೀರಿಲ್ಲದೆ ಒಣಗುವ ಹಂತಕ್ಕೆ ತಲುಪಿವೆ. ಇತ್ತೀಚೆಗೆ ತಾಲ್ಲೂಕಿನ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗಿರುವುದರಿಂದ ತಾಲ್ಲೂಕಿನ ರೈತರಿಗೆ ಹರ್ಷದಾಯಕವಾಗಿದೆ. ನಿರೀಕ್ಷಿತ ಪ್ರÀಮಾಣದಲ್ಲಿ ಮಳೆಯಿಲ್ಲದೆ ಕೃಷಿ ಬೆಳೆಗಳು ಒಣಗುತ್ತಿರುವುದರ ಜೊತೆಗೆ ತಮ್ಮನ್ನು ಅವಲಂಬಿಸಿರುವ ಜಾನುವಾರುಗಳ ಮೇವಿಗೂ ಪರದಾಡುವಂತಾಗಿತ್ತು. ಇತ್ತೀಚಿನ ದಿನಗಳಲ್ಲಿ ತಾಲ್ಲೂಕಿನಾದ್ಯಂತ ಕೆಲವು ಕಡೆಗಳಲ್ಲಿ ಮಳೆಯಾಗಿರುವುದರಿಂದ ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ.
ಅಲ್ಲದೆ ಜಾನುವಾರುಗಳಿಗೂ ಸ್ವಲ್ಪ ಪ್ರಮಾಣದಲ್ಲಿ ಮೇವು ದೊರೆಯುತ್ತದೆ ಎಂಬ ಆಸೆ ರೈತರಲ್ಲಿ ಚಿಗುರಿದೆ. ಇದೇ ಪ್ರಮಾಣದಲ್ಲಿ ಮಳೆ ಬಂದರೆ ತಾಲ್ಲೂಕಿನ ರೈತರು ನೆಮ್ಮದಿಯ ಬದುಕು ಸಾಗಿಸುತ್ತಾರೆ. ಅಲ್ಲದೆ ರೈತರ ಜೀವನಾಧಾರವಾಗಿರುವ ಕೃಷಿ ಮತ್ತು ತೋಟದ ಬೆಳೆಗಳು ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ಕೊಡುತ್ತವೆ ಎನ್ನುತ್ತಾರೆ ರೈತರು. ಕಳೆದೆರಡು ದಿನಗಳಿಂದ ಮಳೆ ಬೀಳುತ್ತಿರುವುದರಿಂದ ಮೆಳೆ ಬಾರದೆ ಮುಗಿಲತ್ತ ನೋಡುತ್ತಿದ್ದ ರೈತರಿಗೆ ಹೊಸ ಚೈತನ್ಯ ಬಂದಂತಾಗಿದೆ. ಒಟ್ಟಾರೆ ಬಿಸಿಲ ಬೇಗೆಯಿಂದ ತತ್ತರಿಸಿದ್ದ ರೈತರಲ್ಲಿ ಇದೀಗ ಬೀಳುತ್ತಿರುವ ಮಳೆ ಒಂದಿಷ್ಟು ನೆಮ್ಮದಿ ತಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
