ಬೆಂಗಳೂರು
ಒಡೆಯರ್ ಅವರು ರಾಜರಾಗಿದ್ದರೂ ಪ್ರಜಾತಂತ್ರ ಆಡಳಿತ ವ್ಯವಸ್ಥೆ ಬರಬೇಕೆಂಬ ಪರಿಕಲ್ಪನೆ ಹೊಂದಿದ್ದರು. ಜಾತಿ ಮತ ಬೇಧವಿಲ್ಲದೆ ಎಲ್ಲಾ ವರ್ಗದವರಿಗೂ ಸಮಾನ ಅವಕಾಶ ಕಲ್ಪಿಸಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದರು ಎಂದು ಮಹಾರಾಜಾ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು
ಸ್ವಾತಂತ್ರ್ಯ ಬಂದನಂತರ ಜನತಂತ್ರ ವ್ಯವಸ್ಥೆ ಜಾರಿಗೆ ಬಂದಿತು. ಅಂದೇ ಜಯಚಾಮರಾಜ್ ಒಡೆಯರ್ ಅವರು ರಾಜ ಪದವಿಯನ್ನು ಬಿಡಲು ದೃಢ ನಿರ್ಧಾರ ತಾಳಿ ಅಖಂಡ ಕರ್ನಾಟಕ ನಿರ್ಮಾಣಕ್ಕೆ ಮುಖ್ಯಮಂತ್ರಿಗಳೊಂದಿಗೆ ಸಹಕರಿಸಿದರು ಎಂದು ಹೇಳಿದರು.ಬಡಗನಾಡು ಬ್ರಾಹ್ಮಣ ಮಹಾಸಭಾದ ಅಮೃತ ಮಹೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು ರಾಜ ಪದವಿ ಹೋಗಲಿದೆ ಎಂಬ ಸ್ಪಷ್ಟ ಅರಿವಿದ್ದರೂ ಅದಕ್ಕೆ ಕಿಂಚಿತ್ತೂ ಚಿಂತಿಸದೆ ಅಖಂಡ ಕರ್ನಾಟಕ ನಿರ್ಮಾಣಕ್ಕೆ ದೃಢ ನಿಲುವು ತಾಳಿದ ಜಯಚಾಮರಾಜ ಒಡೆಯರ್ ಅವರ ಪರಿಕಲ್ಪನೆ ಸ್ಪರಣೀಯವಾದುದು ಎಂದರು.
ನಮ್ಮ ತಾತ ಜಯಚಾಮರಾಜ್ ಒಡೆಯರ್ ಅವರು 1940 ರಲ್ಲಿ ಮಹಾರಾಜರಾಗಿ ಪಟ್ಟಾಭಿಷಿಕ್ತರಾದರು. ಈ ಸಂದರ್ಭದಲ್ಲಿ ಬ್ರಾಹ್ಮಣ ಸಮಾಜದ ಅಭಿವೃದ್ದಿಗಾಗಿ ಬೆಂಗಳೂರಿನಲ್ಲಿ ಬಡಗನಾಡು ಸಂಘದ ನಿರ್ಮಾಣಕ್ಕೆ ಉಚಿತವಾಗಿ ನಿವೇಶನ ನೀಡಿದ್ದರ ಫಲವಾಗಿ ಈ ಸಂಘ ಹೆಮ್ಮರವಾಗಿ ಬೆಳೆದು ಸಹಸ್ರಾರು ಬಡ ಮಕ್ಕಳಿಗೆ ಆಶ್ರಯ ತಾಣವಾಗಿದೆ ಎಂದು ಶ್ಯಾಘಿಸಿದರು.
1956ರಲ್ಲಿ ಮಾಜಿ ಮುಖ್ಯಮಂತ್ರಿ ದಿ. ಕೆಂಗಲ್ ಹನುಮಂತಯ್ಯ ಹಾಗೂ ಇನ್ನಿತರ ಗಣ್ಯರ ಆಶಯದಂತೆ ರಾಜ್ಯದಲ್ಲಿ ಕನ್ನಡ ಮಾತನಾಡುವ ಎಲ್ಲಾ ಪ್ರಾಂತ್ಯಗಳನ್ನು ಒಗ್ಗೂಡಿಸಿ ಕರ್ನಾಟಕ ರಾಜ್ಯ ಉದಯವಾಗಲು ಕಾರಣೀಭೂತರಾದರು ಎಂದು ತಿಳಿಸಿದರು.
ಕಲೆ, ಸಾಹಿತ್ಯ, ಸಂಗೀತದ ಬಗ್ಗೆ ಅಪಾರ ಒಲವು ಹೊಂದಿದ್ದ ಮಹಾರಾಜರು 94ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಅವರ ಸಾಹಿತ್ಯದ ಪರಿಕಲ್ಪನೆಯಿಂದ ಸಂಸ್ಕೃತಿ ಇನ್ನೂ ಸಹ ಉಳಿದಿದೆ.
1919ರಲ್ಲಿ ಜನಿಸಿದ ಮಹಾರಾಜರ ಶತಮಾನೋತ್ಸವ ಸಮಾರಂಭವನ್ನು ಜುಲೈ 18ರಂದು ಮೈಸೂರಿನಲ್ಲಿ ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿ, ಸಂಘದ ಗೌರವಾಧ್ಯಕ್ಷ ಜಿ.ಎಸ್. ನಾಗೇಶ್, ಕಾರ್ಯಾಧ್ಯಕ್ಷ ವಿ.ಕೆ. ದಿಕ್ಷಿತ್, ಡಿ.ಎಸ್. ರವಿಶಂಕರ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








