ತುಮಕೂರು

ತುಮಕೂರು ನಗರದ ಸರ್ಕಾರಿ ಕಚೇರಿಗಳೆಲ್ಲ ಗುರುವಾರ ಬಹುತೇಕ ಖಾಲಿ- ಖಾಲಿ ಆಗಿ ಕಂಡುಬಂದಿತು. ಎಲ್ಲ ಸರ್ಕಾರಿ ಕಚೇರಿಗಳಲ್ಲೂ ಎಂದಿನಂತೆ ಸಾರ್ವಜನಿಕರ ಹಾಜರಿ ಇಲ್ಲದಿದ್ದುದು ಹಾಗೂ ಬಹುತೇಕ ಅಧಿಕಾರಿಗಳು ಕಚೇರಿಯಲ್ಲಿ ಇಲ್ಲದಿದ್ದುದು ಇದಕ್ಕೆ ಕಾರಣವಾಯಿತು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ತುಮಕೂರು ನಗರದ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರಿ ಇಲಾಖಾಧಿಕಾರಿಗಳೆಲ್ಲ ಅತ್ತ ತೆರಳಿದ್ದರು. ಮುಖ್ಯಮಂತ್ರಿ ಭೇಟಿ ಎಂದರೆ ಸಹಜವಾಗಿ ಅಧಿಕಾರಿಗಳು ಜೊತೆಯಲ್ಲಿರುತ್ತಾರೆಂಬುದು ಗೊತ್ತಿರುವ ಕಾರಣ, ಕಚೇರಿ ಕೆಲಸ-ಕಾರ್ಯಗಳು ದಿನದಂತೆ ಆಗುವುದಿಲ್ಲವೆಂಬುದನ್ನು ಅರಿತಿದ್ದ ಸಾರ್ವಜನಿಕರೂ ಸರ್ಕಾರಿ ಕಚೇರಿಗಳತ್ತ ಬರಲಿಲ್ಲ. ಹೀಗಾಗಿ ಸರ್ಕಾರಿ ಕಚೇರಿಗಳಲ್ಲಿ ಬಿಕೋ ಎನ್ನುವ ವಾತಾವರಣ ಉಂಟಾಯಿತು.
ಜಿಲ್ಲಾಡಳಿತದ ಕೇಂದ್ರವೂ ಆದ ನಗರದ ಮಿನಿ ವಿಧಾನ ಸೌಧದಲ್ಲಿ ಅನೇಕ ಸರ್ಕಾರಿ ಕಚೇರಿಗಳಿವೆ. ದಿನವೂ ಮಿನಿ ವಿಧಾನಸೌಧದ ಒಳಗೆ ಮತ್ತು ಹೊರಗಿನ ರಸ್ತೆಗಳಲ್ಲೆಲ್ಲ ಬೆಳಗಿನಿಂದ ಸಂಜೆಯವರೆಗೆ ಗಿಜಿ ಗಿಜಿ ಎಂಬ ವಾತಾವರಣ ಇರುತ್ತದೆ. ಜಿಲ್ಲಾದ್ಯಂತದಿಂದ ಜನರು ಕಚೇರಿಗಳಿಗೆ ಬಂದು ಹೋಗುತ್ತಾರೆ. ಆದರೆ ಗುರುವಾರ ಇಡೀ ಮಿನಿವಿಧಾನಸೌಧ ಹಾಗೂ ಸುತ್ತಮುತ್ತ ಖಾಲಿ-ಖಾಲಿಯಾಗಿ ಕಾಣಿಸಿತು. ಬಹುತೇಕ ಎಲ್ಲ ಅಧಿಕಾರಿಗಳೂ ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿದ್ದರು. ಹೀಗಾಗಿ ಸಾರ್ವಜನಿಕರೂ ಇತ್ತ ಬರಲಿಲ್ಲ. ಮಿನಿವಿಧಾನಸೌಧದ ಹಿಂಭಾಗ ಅರ್ಜಿ ಬರೆಯುವವರು, ಅರ್ಜಿ ಮಾರಾಟ ಮಾಡುವವರು ಗ್ರಾಹಕರಿಲ್ಲದೆ ಸುಮ್ಮನೆ ಕುಳಿತಿದ್ದುದು ಕಂಡುಬಂದಿತು.
ಅಲ್ಲೇ ಹಿಂಭಾಗದ ತುಮಕೂರು ತಾಲ್ಲೂಕು ಪಂಚಾಯಿತಿ ಕಚೇರಿಯ ವಾತಾವರಣವೂ ಇದಕ್ಕಿಂತ ಭಿನ್ನವಿರಲಿಲ್ಲ. ಇಲ್ಲೂ ಸಹ ಪ್ರಮುಖ ಅಧಿಕಾರಿಗಳು ಇರಲಿಲ್ಲ. ಜನಪ್ರತಿನಿಧಿಗಳೂ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಜನರೂ ಇಲ್ಲಿಗೆ ಬಂದಿರಲಿಲ್ಲ.
ಪಾಲಿಕೆಯಲ್ಲೂ ಇದೇ ಸ್ಥಿತಿ
ಇನ್ನು ತುಮಕೂರು ಮಹಾನಗರ ಪಾಲಿಕೆ ಕಚೇರಿಯ ಪರಿಸ್ಥಿತಿಯೂ ಇದೇ ರೀತಿ ಇತ್ತು. ಪ್ರಮುಖ ಅಧಿಕಾರಿಗಳೆಲ್ಲರೂ ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ತೆರಳಿದ್ದರು. ಕಚೇರಿಯಲ್ಲಿ ಅಧಿಕಾರಿಗಳು ಇರಲಿಲ್ಲ. ಬೆರಳೆಣಿಕೆಯ ಜನಪ್ರತಿನಿಧಿಗಳು ಮಾತ್ರ ಎಂದಿನಂತೆ ಬಂದಿದ್ದರು. ಆದರೆ ಸಾರ್ವಜನಿಕರ ಹಾಜರಿ ಇಲ್ಲದೆ ಪಾಲಿಕೆ ಕಚೇರಿ ಬಿಕೋ ಎನ್ನುತ್ತಿತ್ತು.
ಜಿ.ಪಂ. ಕಚೇರಿಯಲ್ಲಿ
ನಗರದ ಜಿಲ್ಲಾ ಪಂಚಾಯತ್ ಕಚೇರಿಯಲ್ಲೂ ಪ್ರಮುಖ ಅಧಿಕಾರಿಗಳಿಲ್ಲದೆ ಹಾಗೂ ಸಾರ್ವಜನಿಕರ ಹಾಜರಿ ಇಲ್ಲದೆ, ಕಚೇರಿ ವಾತಾವರಣ ನೀರವವಾಗಿತ್ತು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
