ಕುಣಿಗಲ್
ಮಾರ್ಕೋನಹಳ್ಳಿ ಜಲಾಶಯದಿಂದ ನಾಗಮಂಗಲಕ್ಕೆ ನೀರು ಹರಿಸುವ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಖಂಡಿಸಿ ವಿವಿಧ ಪಕ್ಷಗಳ ಮುಖಂಡರು ಪಕ್ಷಾತೀತವಾಗಿ ಹಾಗೂ ರೈತ ಸಂಘಟನೆ ಮತ್ತು ವಿವಿಧ ಕನ್ನಡಪರ ಸಂಘಟನೆಗಳು ಕುಣಿಗಲ್ ಬಂದ್ಗೆ ಕರೆನೀಡಿದ ಹಿನ್ನೆಲೆಯಲ್ಲಿ ಬಂದ್ ಸಂಪೂರ್ಣ ಯಶಸ್ವಿಯಾಗಿದ್ದು ಯಾವುದೇ ಕಾರಣಕ್ಕೂ ಅವೈಜ್ಞಾನಿಕ ಕಾಮಗಾರಿ ನಡೆಯಲು ಬಿಡುವುದಿಲ್ಲ ಎಂದು ಆಕ್ರೋಶದೊಂದಿಗೆ ಒಕ್ಕೂರಲಿನಿಂದ ಪ್ರತಿಭಟನಾಕಾರರು ಆಗ್ರಹಿಸಿದರು.
ಸುಮಾರು 11.30ಕ್ಕೆ ಪ್ರವಾಸಿ ಮಂದಿರದಲ್ಲಿ ಸಮಾವೇಶಗೊಂಡ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮುಖಂಡರು, ಕಾರ್ಯಕರ್ತರು, ರೈತಸಂಘಟನೆಗಳು, ಕನ್ನಡಪರ ಸಂಘಟನೆಗಳು, ವಕೀಲರು ಸೇರಿದಂತೆ ಸಾವಿರಾರು ಜನರು ಬೃಹತ್ ಮೆರವಣಿಗೆಯೊಂದಿಗೆ ಪಟ್ಟಣದ ಹುಚ್ಚಮಾಸ್ತಿಗೌಡ ವೃತ್ತದ ಕಡೆಗೆ ಜೈಕಾರದೊಂದಿಗೆ ಆಗಮಿಸಿ 3 ಗಂಟೆಗಳ ಕಾಲ ರಸ್ತೆಯಲ್ಲಿ ಕೂತು ಒಟ್ಟಾಗಿ ಪ್ರತಿಭಟಿಸಿದ್ದು ವಿಶೇಷ ಹಾಗೂ ಐತಿಹಾಸಿಕ ಹೋರಾಟವಾಗಿ ಹೊರಹೊಮ್ಮಿತ್ತು.
ಪೂರ್ವ ಯೋಜನೆಯಂತೆ ಬುಧವಾರ ನಿಗಧಿಯಾಗಿದ್ದ ಬಂದ್ಗೆ ಹೋಟೆಲ್ ಮಾಲೀಕರು, ಅಂಗಡಿ ವ್ಯಾಪಾರಸ್ಥರು ಸೇರಿದಂತೆ ಸ್ವಯಂ ಪ್ರೇರಿತವಾಗಿ ಮುಚ್ಚಿದ್ದವು. ಖಾಸಗಿ ಮತ್ತು ಸರ್ಕಾರಿ ಬಸ್ ಸಂಚಾರವನ್ನು ಸ್ಥಗಿತಗೊಳಿಸುವಂತೆ ಸಂಘಟನೆಗಳು ಆಗ್ರಹಿಸಿದ್ದರಿಂದ ಯಾವುದೇ ಬಸ್ ರಸ್ತೆಗಿಳಿಯಲಿಲ್ಲ. ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು.
ಎಂದಿನಂತೆ ಬ್ಯಾಂಕ್ಗಳು ಸರ್ಕಾರಿ ಕಚೇರಿಗಳು ತೆರೆದಿದ್ದವು, ಬುಧವಾರ ಸಂತೆಯಾಗಿದ್ದರಿಂದ ತಾಲ್ಲೂಕಿನ ಅಗ್ರಹಾರದಿಂದ ವಯೋವೃದ್ದೆಯೊಬ್ಬಳು ಪೊರಕೆಯನ್ನು ಮಾರಾಟ ಮಾಡಲು ಹೊತ್ತು ತಂದು ವ್ಯಾಪಾರ ಕುದುರದೆ ಪರದಾಡಿದ ದೃಶ್ಯ ಮನಕಲಕುವಂತಿತ್ತು. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಬಂದಿದ್ದ ರೋಗಿಗಳು, ಟೀ, ಕಾಫಿ, ತಿಂಡಿ ಸಿಗದೆ ಆತಂಕಕ್ಕೀಡಾದರೆ, ದೂರದೂರಿಗೆ ಹೋಗಲು ಬಂದಿದ್ದ ಪ್ರಯಾಣಿಕರು ಬಸ್ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿತ್ತು.
ಜಿಲ್ಲಾಡಳಿತ ವಿಫಲ ಎಂದ ಮಾಜಿ ಸಚಿವ ಡಿ.ಎನ್ : ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಸಚಿವ ಡಿ.ನಾಗರಾಜಯ್ಯ, ನಮ್ಮ ಜಿಲ್ಲಾಡಳಿತ, ತಾಲ್ಲೂಕು ಆಡಳಿತ ವಿಫಲವಾಗಿದೆ. 144 ನಿಷೇಧಾಜ್ಞೆ ವಿಧಿಸಿ ತಹಸೀಲ್ದಾರ್, ಶಾಸಕರನ್ನೇ ಒಳಬಿಡದೆ ಕಾಮಗಾರಿ ಮಾಡಲು ಮಂಡ್ಯ ಜಿಲ್ಲಾಡಳಿತ ಮುಂದಾಗಿದ್ದಾಗ ಇವರು ಏನು ಮಾಡುತ್ತಿದ್ದರು ಎಂದು ಕಿಡಿಕಾರಿದ ಅವರು, ಈ ಭಾಗದ 2ಸಾವಿರ ಹೆಕ್ಟೇರ್ ಜಮೀನಿಗೆ ನೀರಿನ ಅಭಾವ ಉಂಟಾಗುತ್ತದೆ. ಅಲ್ಲದೆ ಡ್ಯಾಂ ಉಳಿಯಬೇಕಾದರೆ ಸದಾ ನೀರು ನಿಲ್ಲಲೇಬೇಕು. ಸಮಸ್ಯೆ ತಿಳಿದು ಈ ಅವೈಜ್ಞಾನಿಕ ಕಾಮಗಾರಿ ಸರಿಪಡಿಸಿಕೊಂಡು ಹೇಮಾವತಿ ಯಿಂದ ಹೆಚ್ಚುವರಿ ನೀರು ಹರಿಸಿದ ನಂತರವೇ ನೀರು ಬಿಡುವುದು. ಅಲ್ಲಿಯವರೆಗೆ ಎಲ್ಲರೂ ಒಗ್ಗಟ್ಟಿನೊಂದಿಗೆ ಹೋರಾಟ ಮಾಡೋಣ ಎಂದು ಕರೆನೀಡಿದರು.
ರಾಜಕೀಯ ಬರುತ್ತೆ ಹೋಗುತ್ತೆ ಎಂದ ಎಸ್.ಪಿ.ಎಂ.: ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡರು ಮಾತನಾಡಿ, ರಾಜ್ಯದ ಐತಿಹಾಸಿಕ ಜಲಾಶಯಗಳಲ್ಲಿ ಒಂದಾದ ಮಾರ್ಕೋನಹಳ್ಳಿ ಜಲಾಶಯ ಮೈಸೂರು ಮಹಾರಾಜರ ಕೊಡುಗೆ. ಇಂದು ನೀರಿನ ಸಮಸ್ಯೆ ಸೂಕ್ಷ್ಮತೆಯನ್ನು ಪಡೆದಿದ್ದು ತಾಲ್ಲೂಕುಗಳ ನಡುವೆ, ಜಿಲ್ಲೆಗಳ ನಡುವೆ, ರಾಜ್ಯ ರಾಜ್ಯಗಳ ನಡುವೆ ವ್ಯಾಜ್ಯ ಉಂಟಾಗುತ್ತಿವೆ. ಇದನ್ನರಿತು ಮುಂದಿನ ಪೀಳಿಗೆಗೆ ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಿಕೊಳ್ಳಬೇಕು.
ಮಾರ್ಕೋಹಳ್ಳಿ ಜಲಾಶಯದಲ್ಲಿ ನಾಗಮಂಗಲಕಡೆಗೆ ನೀರುಹರಿಸಲು ಮಾಡುತ್ತಿರುವ ಜಾಕ್ವೆಲ್ ಕಾಮಗಾರಿ ಅವೈಜ್ಞಾನಿಕವಾಗಿದೆ. ಇದಕ್ಕೆ ನನ್ನ ವಿರೋಧವಿದ್ದು ಕೂಡಲೆ ನಿಲ್ಲಿಸಬೇಕು. ಹೋರಾಟವನ್ನು ರೂಪಿಸಿ ಮುಖ್ಯಮಂತ್ರಿಗಳ ಬಳಿಗೆ ನಿಯೋಗವೆ ತೆರಳಿ ನಮ್ಮ ತಾಲ್ಲೂಕಿನ ಸಂಪತ್ತನ್ನು ನಾವು ರಕ್ಷಿಸಿಕೊಳ್ಳುವ ಕೆಲಸ ಮಾಡೋಣ. ಇದಕ್ಕೆ ಸದಾ ನಾನು ಸಿದ್ದನಿದ್ದೇನೆ. ಇಲ್ಲಿನ ರೈತರ ಸಂಘಟನೆ, ಕನ್ನಡಪರ ಸಂಘಟನೆಗಳು ಈ ನಿಟ್ಟಿನಲ್ಲಿ ಹೋರಾಟ ಇನ್ನೂ ಹೆಚ್ಚಿನದಾಗಿ ರೂಪಿಸಲಿ. ರಾಜಕೀಯ ಬರುತ್ತೆ ಹೋಗುತ್ತೆ ಯಾರ ಹಣೆಯಲ್ಲಿ ಭಗವಂತ ಏನು ಬರೆದಿದ್ದಾನೋ ಅದು ಆಗುತ್ತೆ. ಇಲ್ಲಿ ನಮ್ಮ ಒಗ್ಗಟ್ಟನ್ನು ಒಡೆಯಲು ಬಿಡಬಾರದು ಒಟ್ಟಾಗಿ ಹೋರಾಟ ಮಾಡಲು ನಾನು ಸಿದ್ದ ಎಂದರು.
ಕಾಮಗಾರಿ ಯಾರಿಗೂ ಗೊತ್ತಿಲ್ಲದ ಹೊಳ್ಳೆಕ್ಯಾಟಿ ಎಂದ ಬಿಬಿಆರ್ : ಈ ಕಾಮಗಾರಿ ಯೋಜನೆ ಯಾರಕಾಲದಲ್ಲಿ ಆಯ್ತು, ಏಕಾಯ್ತು, ಹೇಗಾಯ್ತು ಎಂದು ಯಾರಿಗೂ ಗೊತ್ತಿಲ್ಲದ ಒಂದು ರೀತಿ ನುಸುಳಿಕೊಂಡು ಬಂದ ಹೊಳ್ಳೆಕ್ಯಾಟಿ ಇದ್ದಂತೆ. ಇಂತಹ ಮಹಾಯೋಜನೆಗಳು ಬರುತ್ತಿರುತ್ತವೆ. ಅವುಗಳನ್ನು ಎಚ್ಚರಿಕೆಯಿಂದ ನಿಬಾಯಿಸಬೇಕು ಎಂದ ಅವರು, ನಾಗಮಂಗಲಕ್ಕೆ, ಆದಿಚುಂಚಗಿರಿಗೆ ನೀರಿನ ಸಮಸ್ಯೆಯೇ ಇಲ್ಲ. ಕುಣಿಗಲ್ ತಾಲ್ಲೂಕಿಗೆ ನೀರಿನ ಅಭಾವ ಇನ್ನೂ ತೀರಿಲ್ಲಾ, ಅಲ್ಲಿನ ಕೆರೆಗಳಿಗೆ ಹೇಮಾವತಿ ನೀರು ಈಗಾಗಲೇ ಹರಿದು ತುಂಬಿಹೋಗುತ್ತಿವೆ.
ಮಾರ್ಕೋನಹಳ್ಳಿ ಜಲಾಶಯ ಕೆಳಗಿದೆ, ಅಲ್ಲಿಂದ ಬಂದಂತಹ ನೀರನ್ನೇ ಮೇಲಕ್ಕೆ ಏಕೆ ಎತ್ತಬೇಕು. ಇಲ್ಲಿಗೆ ಖರ್ಚುಮಾಡಿರುವ ಕಾಲುಭಾಗದಷ್ಟು ಹಣವನ್ನು ನಾಗಮಂಗಲದ ಕೆರೆಗಳ ಕಡೆಗೆ ಯೋಜನೆ ರೂಪಿಸಿದರೆ ಭಾರಿ ಸುಲಭವಾಗಿ ನೀರು ಹರಿಸಿಕೊಳ್ಳಬಹುದು. ಇಂತಹ ಯೋಜನೆಯನ್ನ ಯಾರು ರೂಪಿಸಿದರೋ ದೇವರೇ ಬಲ್ಲಾ ಎಂದ ಅವರು, ಇಂದಿನ ರಾಜಕಾರಣವನ್ನ ಕತ್ತೆ ಕುದುರೆಗೆ ಹೋಲಿಸಿ ವ್ಯಂಗ್ಯವಾಡಿದರು.
ಒಗ್ಗಟ್ಟು ಅನಿವಾರ್ಯ, ಮುಟ್ಟಾಳತನ ರಾಜಕೀಯ ಮಾಡಲ್ಲ ಎಂದ ಡಿ.ಕೆ. : ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್ ಮಾತನಾಡಿ, ನಮ್ಮಲ್ಲಿನ ನೀರನ್ನು ಬೇರೆಯವರು ತೆಗೆದುಕೊಂಡು ಹೋಗುತ್ತಿದ್ದಾರೆ. ಇದಕ್ಕೆ ಜಿಲ್ಲಾಡಳಿತ ತಾಲ್ಲೂಕು ಆಡಳಿತ ವಿಫಲವಾಗಿರುವುದೇ ಕಾರಣ ಎಂದ ಅವರು, ಯಾರ ಕಾಲದಲ್ಲಿ ಆಯ್ತು ಎಂದು ಚರ್ಚೆ ಬೇಡ. ತಾಲ್ಲೂಕಿಗೆ ಅನ್ಯಾಯವಾದರೆ ಸಹಿಸುವುದಿಲ್ಲಾ, ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು ನನ್ನ ತಾಲ್ಲೂಕಿಗೆ ಅನ್ಯಾಯವಾದರೆ ನಾನು ಕೈಕಟ್ಟಿ ಕೂರುವ ಮುಟ್ಟಾಳತನ ರಾಜಕೀಯ ಮಾಡಲ್ಲ. ಅನ್ಯಾಯವನ್ನು ಖಂಡಿಸುವಲ್ಲಿ ಮೊದಲಿಗನಾಗುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೋರಾಟವನ್ನು ಹಂತಹಂತವಾಗಿ ರೂಪಿಸೋಣ ಎಂದ ಶಾಸಕ : ಶಾಸಕ ಡಾ.ರಂಗನಾಥ್ ಮಾತನಾಡಿ, ತಾಲ್ಲೂಕಿನ ಹಿರಿಯ ರಾಜಕೀಯ ನಾಯಕರುಗಳ ಸಮ್ಮುಖದಲ್ಲಿ ಚರ್ಚಿಸಿ ರೂಪುರೇಷೆ ಮಾಡಿಕೊಂಡು ಇಂದಿನ ಮಾರ್ಕೋನಹಳ್ಳಿ ಜಲಾಶಯದಲ್ಲಿ ಮಾಡುತ್ತಿರುವ ಅವೈಜ್ಞಾನಿಕ ಕಾಮಗಾರಿ ಬಗ್ಗೆ ಒಗ್ಗಟ್ಟಿನಿಂದ ಹೋರಾಟ ಮಾಡೋಣ. ಇದಕ್ಕೆ ಎಲ್ಲರ ಸಹಕಾರ ಮುಖ್ಯ ಎಂದ ಅವರು, ತಾಲ್ಲೂಕಿಗೆ ಹೇಮಾವತಿ ನೀರು ನಿಗದಿಯಾದಂತೆ ಹರಿದುಬಂದೇ ಇಲ್ಲಾ. ನಮ್ಮ ಸಚಿವರು, ಸಂಸದರು ಕುಣಿಗಲ್ಗೆ ಹೆಚ್ಚುವರಿಯಾಗಿ ಹೇಮಾವತಿ ನೀರು ಹರಿಸಲು ಆದೇಶ ಮಾಡಿದ್ದಾರೆ. ಇವರ ಕೊಡುಗೆ ತಾಲ್ಲೂಕಿಗೆ ಅಪಾರ ಎಂದು ಕೊಂಡಾಡಿದರು.
ಸಂಪೂರ್ಣ ಕಾಮಗಾರಿ ನಿಲ್ಲಿಸಲಿ ಎಂದ ರೈತಸಂಘ : ರೈತಸಂಘದ ಜಿಲ್ಲಾಧ್ಯಕ್ಷ ಆನಂದ್ಪಟೇಲ್ ಮಾತನಾಡಿ, ನಾಗಮಂಗಲದಲ್ಲಿ ನೀರಿನ ಅಭಾವ ಇಲ್ಲ. ನಮ್ಮ ತಾಲ್ಲೂಕಿನ ಜೀವನಾಡಿ ಮಾರ್ಕೋನಹಳ್ಳಿಗೆ ಬರುವ ನೀರನ್ನು ಅಲ್ಲಿಗೆ ಏಕೆ ಕೊಡಬೇಕು. ಆದಿಚುಂಚನಗಿರಿ ಶ್ರೀಗಳಿಗೆ ಮನವಿ ಮಾಡಿಕೊಳ್ಳೋಣ, ಈ ಭಾಗದ ರೈತರೂ ಸಹ ಆ ಮಠದ ಬಂಧುಗಳೆ, ಆದ್ದರಿಂದ ಅವರೇ ಸಾಮಾಜಿಕ ನ್ಯಾಯ ನೀಡಲಿ. ಇಂತಹ ಅವೈಜ್ಞಾನಿಕ ಕಾಮಗಾರಿಯನ್ನು ನಿಲ್ಲಿಸಲಿ ಎಂದರು.
ಪ್ರತಿಭಟನೆಯಲ್ಲಿ ಅರೆಶಂಕರ ಮಠದ ಶ್ರೀ ಸಿದ್ದರಾಮಚೈತನ್ಯಸ್ವಾಮೀಜಿ, ಅಂಕನಹಳ್ಳಿ ಮಠದ ಶ್ರೀ ಶಿವರುದ್ರ ಶಿವಾಚಾರ್ಯಸ್ವಾಮೀಜಿ, ಮಾಜಿ ಜಿಲ್ಲಾ ಅಧ್ಯಕ್ಷ ಡಾ.ರವಿ ಡಿ.ನಾಗರಾಜಯ್ಯ ಮಾತನಾಡಿದರು. ತಾ.ಪಂ. ಅಧ್ಯಕ್ಷ ಹರೀಶ್ನಾಯ್ಕ, ಜೆಡಿಎಸ್ ಮುಖಂಡ ಜಗದೀಶ್, ಕೆ.ಎಲ್.ಹರೀಶ್, ಕರವೇ ಅಧ್ಯಕ್ಷ ಮಂಜುನಾಥ, ಜಯಕರ್ನಾಟಕ ಅಧ್ಯಕ್ಷ ಶ್ರೀನಿವಾಸ್, ತಾಲ್ಲೂಕು ರೈತಸಂಘದ ಅಧ್ಯಕ್ಷ ಅನಿಲ್, ಪುರಸಭಾ ಸದಸ್ಯರಾದ ರಂಗಸ್ವಾಮಿ, ಸಮಿಉಲ್ಲಾ, ವಕೀಲರ ಸಂಘದ ಅಧ್ಯಕ್ಷ ಹುಚ್ಚೇಗೌಡ,
ತಾಲ್ಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ಆಲ್ಕೆರೆನಾರಾಯಣ್, ಸುಭಾನ್ ಖುರೇಶಿ, ಅಬ್ದಲ್ಹಮೀದ್, ಬೀಚನಹಳ್ಳಿ ಶ್ರೀನಿವಾಸ್, ಕರಿಗೌಡ, ನಂದಿನಿಮಿಲ್ಕ್ ಸುರೇಶ್, ಕೆ.ಎಸ್.ಬಲರಾಂ, ಶಂಕರ್, ಭಾಗವಹಿಸಿದ್ದರು. ಇಂತಹ ಸಂದಿಗ್ದ ವಾತಾವರಣ ತಾಲ್ಲೂಕಿನಲ್ಲಿದ್ದರೂ ಜಿಲ್ಲಾಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಬಾರದಿದ್ದಕ್ಕೆ ಎಲ್ಲರೂ ಆಕ್ರೋಶ ವ್ಯಕ್ತಪಡಿಸಿ ಮುಂದಾಗುವ ಪರಿಣಾಮಕ್ಕೆ ಜಿಲ್ಲಾಡಳಿತವೇ ಹೊಣೆಹೊರಬೇಕಾಗುತ್ತದೆಂದು ಎಚ್ಚರಿಕೆ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ನೇತೃತ್ವದಲ್ಲಿ ಪೊಲೀಸ್ ಬಿಗಿಬಂದೋಬಸ್ತ್ ಮಾಡಲಾಗಿತ್ತು. ನಂತರ ತಹಸೀಲ್ದಾರ್ ವಿಶ್ವನಾಥ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
