ವೈವಿಧ್ಯಮಯ ಗಣಪನ ಮೂರ್ತಿಗಳು: ಪರಿಸರ ಸ್ನೇಹಿ ಗಣಪನಿಗೂ ಬೇಡಿಕೆ
ತುಮಕೂರು:

ಹಬ್ಬದ ಸಾಲುಗಳು ಆರಂಭವಾಗಿದ್ದು, ಹೂವು ಮತ್ತು ಹಣ್ಣಿನ ದರ ಏರಿಕೆಯಾಗುತ್ತಲೇ ಇವೆ. ಆಗಸ್ಟ್ 9 ರಂದು ವರಮಹಾಲಕ್ಷ್ಮಿ ಹಿನ್ನೆಲೆಯಲ್ಲಿ ದರ ವಿಪರೀತ ಏರಿಕೆಯಾಗಿತ್ತು. ಅಂದಿನಿಂದಲೂ ದರ ಸ್ವಲ್ಪ ಮಟ್ಟಿಗೆ ಹಾಗೆಯೇ ಇದೆ. ಕೆಲವು ದಿನ ಕೊಂಚ ಇಳಿಕೆ ಕಂಡುಬಂದರೂ ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ಮತ್ತೆ ಏರಿಕೆ ಕಂಡುಬಂದಿದೆ.
ಪ್ರತಿವರ್ಷ ಮೊದಲು ಗೌರಿ ಹಬ್ಬ, ಮಾರನೆಯ ದಿನ ಗಣೇಶನ ಹಬ್ಬ ಬರುತ್ತಿತ್ತು. ಈ ಬಾರಿ ಗೌರಿ, ಗಣೇಶ ಹಬ್ಬ ಒಂದೇ ದಿನ ಆಚರಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ಮಧ್ಯಾಹ್ನದಿಂದಲೇ ಮಾರುಕಟ್ಟೆ ಜನರಿಂದ ತುಂಬಿತ್ತು. ಇತರೆ ದಿನಗಳಲ್ಲಿ 50 ರೂ.ಗಳಿಗೆ ಮಾರಾಟವಾಗುತ್ತಿದ್ದ ಮಾರು ಹೂ 100 ರೂ.ಗಳಿಗೆ ಏರಿಕೆಯಾಯಿತು. 80 ರಿಂದ 90 ರೂ.ಗಳಿಗೆ ಇದ್ದ ಬಾಳೆ ಹಣ್ಣಿನ ದರ 100 ರೂ.ಗಳಿಗೆ ಏರಿಕೆಯಾಗಿದೆ.
ಇದೇ ರೀತಿ ಕನಕಾಂಬರ, ಮಲ್ಲಿಗೆ ಹೂ, ಬಟನ್ಸ್, ಸೇವಂತಿ ಇತ್ಯಾದಿ ಹೂಗಳು ದರ ಏರಿಕೆ ಕಂಡಿವೆ. ಸೇಬು ಕೆ.ಜಿ. 1ಕ್ಕೆ 100 ರಿಂದ 150 ರೂ.ಗಳವರೆಗೆ ಏರಿಕೆಯಾಗಿದೆ. ಸಾಮಾನ್ಯವಾಗಿ ಎಲ್ಲ ಹಣ್ಣುಗಳ ದರವೂ ಏರಿಕೆ ಕಂಡು ಬಂದಿತು . ಜಿಲ್ಲೆಯಲ್ಲಿ ಈ ಬಾರಿ ಹೇಳಿಕೊಳ್ಳುವಂತಹ ಮಳೆಯಾಗಿಲ್ಲ. ವರಮಹಾಲಕ್ಷ್ಮಿ ಹಬ್ಬದ ಸಮಯದಲ್ಲೂ ಬರ ತಾಂಡವವಾಡುತ್ತಿತ್ತು. ಆನಂತರದ ದಿನಗಳಲ್ಲಿ ಅಲ್ಲಲ್ಲಿ ಸೋನೆ ಮಳೆ ಕಂಡಬಂದರೂ ಕೆರೆ ಕಟ್ಟೆಗಳಿಗೆ ನೀರು ಬರುವಂತಹ ಮಳೆಯಾಗಿಲ್ಲ.
ಹೀಗಾಗಿ ಮೇಲ್ಬಾಗದ ಹಸಿರು ಮಾತ್ರವೇ ಕಾಣುತ್ತಿದ್ದು, ರೈತರು ಸದ್ಯಕ್ಕೆ ಚೇತರಿಸಿಕೊಂಡಿರಬಹುದು. ಆದರೆ ಇನ್ನೂ ಆತಂಕ ಇದ್ದೇ ಇದೆ. ಬೋರ್ವೆಲ್ಗಳು ಬತ್ತಿ ಹೋಗಿದ್ದು, ಮರು ಜೀವ ಪಡೆದಿಲ್ಲ. ಹೀಗಾಗಿ ಹೂ, ಹಣ್ಣು ಬೆಳೆಯುವುದು ದುಸ್ತರವಾಗಿದೆ. ಹಬ್ಬದ ಸಮಯದಲ್ಲಾದರೂ ಉತ್ತಮ ಬೆಲೆ ಸಿಗುವುದಲ್ಲ ಎಂಬ ನಿರೀಕ್ಷೆ ಬೆಳೆಗಾರರದ್ದು. ಆದರೆ ಧಾರಣೆ ಏರಿಕೆಯಿಂದ ಹಬ್ಬ ಮಾಡುವವರು ಮಾತ್ರ ಆತಂಕಕ್ಕೆ ಒಳಗಾಗುವುದು, ಚೌಕಾಸಿ ಮಾಡುವುದು ತಪ್ಪಿದ್ದಲ್ಲ.
ಹಬ್ಬ ಮಾಡಲೇಬೇಕು ಎಂದಾಗ ಧಾರಣೆ ಎಷ್ಟಾದರೂ ಸರಿ ಖರೀದಿ ಮಾಡಲೇಬೇಕು. ಬೀದಿ ಬದಿಗಳಲ್ಲಿ, ವಾರ್ಡ್ವಾರು ಗಣೇಶನನ್ನು ಪ್ರತಿಷ್ಠಾಪಿಸುವವರು ನಿನ್ನೆಯಿಂದಲೇ ಗಣೇಶನನ್ನು ಕೂರಿಸುವ ಮಂಟಪದ ಕೆಲಸ ಕಾರ್ಯಗಳಲ್ಲಿ ಮಗ್ನರಾಗಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








