ಬೆಂಗಳೂರು
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 2018-19ನೇ ಸಾಲಿನ 10,129 ಕೋಟಿ ರೂ. ಬಜೆಟ್ನಲ್ಲಿ ಘೋಷಿಸಿದ ಯೋಜನೆಗಳ ಪೈಕಿ ಇಲ್ಲಿಯವರೆಗೆ ಶೇ.5ರಷ್ಟು ಮಾತ್ರ ಅನುಷ್ಠಾನಗೊಂಡಿವೆ ಎಂದು ಪಾಲಿಕೆಯ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಜೆಟ್ನಲ್ಲಿ ನೀಡಿರುವ ಯೋಜನೆಗಳನ್ನು ಪೂರೈಸದ ಕಾಂಗ್ರೆಸ್ -ಜೆಡಿಎಸ್ ಪಕ್ಷಗಳು ವಚನ ಭ್ರಷ್ಟವಾಗಿವೆ. ಬೆಂಗಳೂರು ಜನತೆಗೆ ಅಭಿವೃದ್ಧಿ ಹೆಸರಿನಲ್ಲಿ ವಂಚಿಸುತ್ತಿವೆ. ಕೇವಲ ಭ್ರಷ್ಟಾಚಾರದಲ್ಲಿ ತೊಡಗಿದ್ದು ಪರ್ಸೆಂಟೇಜ್ ಆಡಳಿತ ನಡೆಸುತ್ತಿವೆ ಎಂದು ಟೀಕಿಸಿದರು.
ಆಡಳಿತ ಪಕ್ಷ ಪದೇ ಪದೇ ಜನತೆಗೆ ಸುಳ್ಳು ಹೇಳಿ ದಾರಿ ತಪ್ಪಿಸುತ್ತಿದೆ. ಜನತೆಯ ಕಲ್ಯಾಣಕ್ಕೆ ಯಾವುದಾದರೂ ಕ್ರಮ ಕೈಗೊಂಡಿದ್ದರೆ ಮಿತ್ರ ಪಕ್ಷಗಳು ತಮ್ಮ ಆಡಳಿತಾವಧಿಯ ಅಭಿವೃದ್ದಿ ಕಾರ್ಯಗಳ ಬಗ್ಗೆ ಹಾಗೂ ಯಾರ ಅವಧಿಯಲ್ಲಿ ಬಿಬಿಎಂಪಿ ಅತಿ ಹೆಚ್ಚು ಸಾಲ ಪಡೆದಿದೆ ಎಂಬುದರ ಕುರಿತು ಶ್ವೇತಪತ್ರ ಮಂಡಿಸಲಿ ಎಂದು ಸವಾಲು ಹಾಕಿದರು.
ಬಜೆಟ್ ಘೋಷಣೆಯಂತೆ ಮಹಾಪೌರರಿಗೆ ಬೆಳ್ಳಿ ಕೀ ಹಾಗೂ ಬ್ಯಾಟ್ ಹಾಗೂ ಎಲ್ಲ ಸದಸ್ಯರಿಗೆ ಟ್ಯಾಬ್ ನೀಡಲಾಗಿದೆಯಷ್ಟೇ. 2017ರ ಮಾರ್ಚ್ ಒಳಗೆ ಎಲ್ಲ ಗುತ್ತಿಗೆ ಪೌರಕಾರ್ಮಿಕರನ್ನು ಖಾಯಂಗೊಳಿಸುವ ಭರವಸೆಯನ್ನು ಇನ್ನೂ ಪೂರೈಸಿಲ್ಲ ಎಂದು ಆರೋಪಿಸಿದರು.
ಬೆಂಗಳೂರು ನಗರದ 400 ಸ್ಥಳಗಳಲ್ಲಿ ಉಚಿತ ವೈ-ಫೈ ಒದಗಿಸುವುದು, ಬಿಬಿಎಂಪಿಯ ಆದಾಯ, ಖರ್ಚು ವೆಚ್ಚಗಳಿಗೆ ಸಂಬಂಧಿಸಿದಂತೆ ನೂತನ ಲೆಕ್ಕ ಪತ್ರ ನೀತಿ ಜಾರಿಗೊಳಿಸುವುದು, ಸೈನಿಕರ ಕುಟುಂಬಗಳಿಗೆ ಸ್ವಂತ ವಸತಿ ಕಟ್ಟಡಗಳ ಶೇ.100 ರಷ್ಟು ಆಸ್ತಿ ತೆರಿಗೆ ವಿನಾಯಿತಿ ನೀಡುವುದು, ಅನಧಿಕೃತ ಮೊಬೈಲ್ ಟವರ್ ತೆರವು, ರಾಜ್ಯ ಹಾಕಿ ಅಸೋಸಿಯೇಷನ್ ಆವರಣದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಧ್ಯಾನ್ಚಂದ್ ಪುತ್ಥಳಿ ಸ್ಥಾಪನೆ ಸೇರಿದಂತೆ ಸುಮಾರು 53 ಭರವಸೆಗಳನ್ನು ಜಾರಿಗೆ ತರದೆ ಜನತೆಯನ್ನು ವಂಚಿಸಲಾಗುತ್ತಿದೆ ಎಂದು ಆರೋಪಿಸಿದರು.
ಕಾನೂನು ಶಾಖೆಯನ್ನು ವಿಚಾರಣಾ ನ್ಯಾಯಾಲಯ, ನ್ಯಾಯಾಲಯ ವಿಭಾಗಗಳಾಗಿ ವಿಂಗಡನೆ ಹಾಗೂ ನಾನ್ ಲಿಟಿಗೇಷನ್ ವಿಭಾಗಕ್ಕೆ ಓರ್ವ ನಿವೃತ್ತ ನ್ಯಾಯಾಂಗ ಅಧಿಕಾರಿಯ ನೇಮಕ ಮತ್ತಿತರರ ಭರವಸೆಗಳನ್ನು ಕೂಡ ಆರೋಪಿಸಲಾಗಿಲ್ಲ ಎಂದು ಟೀಕಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








