ಆಮೆ ಗತಿಯಲ್ಲಿ ಹೈವೇ ಕಾಮಗಾರಿ : ವಾಹನ ಸವಾರರಿಗೆ ತಪ್ಪದ ಕಿರಿಕಿರಿ..!!

ಹುಳಿಯಾರು:

     ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಪಟ್ಟಣ ವ್ಯಾಪ್ತಿಯಲ್ಲಿ ಕೈಗೊಂಡಿರುವ ಹೆದ್ದಾರಿ ಅಗಲೀಕರಣ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು ಸವಾರರಿಗೆ ಹಾಗೂ ಸಾರ್ವಜನಿಕರಿಗೆ ಕಿರಿಕಿರಿಯನ್ನು ತಂದೊಡ್ಡಿದೆ.

      ರಾಷ್ಟ್ರೀಯ ಹೆದ್ದಾರಿ 243 ರ ಅಭಿವೃದ್ಧಿ ಕಾಮಗಾರಿಯು ಹುಳಿಯಾರು ಪಟ್ಟಣದಲ್ಲಿ ನಡೆಯುತ್ತಿದೆ. ಸರ್ವಿಸ್ ರಸ್ತೆ, ಸುಸಜ್ಜಿತ ಒಳಚರಂಡಿ ಹಾಗೂ ಪಾದಚಾರಿ ಮಾರ್ಗ ನಿರ್ಮಿಸುವ ಯೋಜನೆ ಇದಾಗಿದೆ. 2017 ರ ಡಿಸೆಂಬರ್ ತಿಂಗಳಲ್ಲಿ ಶಿರಾ ಭಾಗದಿಂದ ಹೆದ್ದಾರಿ ಕಾಮಗಾರಿ ಆರಂಭಗೊಂಡಿತು. ಕಾಮಗಾರಿ ಕುಂಟುತ್ತಾಸಾಗಿ ಕಳೆದ 2018 ರ ಅಕ್ಟೋಬರ್ ತಿಂಗಳಲ್ಲಿ ಹುಳಿಯಾರು ಪಟ್ಟಣ ತಲುಪಿತು. ಆರಂಭವಾದ ಕಾಮಗಾರಿ ಆರಂಭದಲ್ಲಿ ಬಿರುಸಾಗಿ ಸಾಗಿತ್ತು. ಆದರೆ ಈಗ ಕಾಮಗಾರಿ ವಿಳಂಬವಾಗುತ್ತಿದ್ದು, ವಾಹನ ಸವಾರರು ಸೇರಿದಂತೆ ಎಲ್ಲರಿಗೂ ಸಮಸ್ಯೆಯಾಗುತ್ತಿದೆ.

     ಕಾಮಗಾರಿ ಆರಂಭವಾಗಿ ಒಂದು ವರ್ಷವಾದರೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಗುತ್ತಿಗೆದಾರರ ಬೇಜವಾಬ್ದಾರಿಯಿಂದಾಗಿ ಯೋಜನೆ ಮಂದಗತಿಯಲ್ಲಿ ಸಾಗುತ್ತಿದೆ. ಹೆದ್ದಾರಿ ಪಕ್ಕದಲ್ಲೇ ಎರಡು ಅಡಿಯಷ್ಟು ಆಳವಾದ ಚರಂಡಿ ತೆಗೆದು ಹಾಗೆಯೇ ಬಿಡಲಾಗಿದೆ. ಪಟ್ಟಣದ ಎಪಿಎಂಎಸಿ ಮುಂಭಾಗ, ರಾಮಗೋಪಾಲ್ ಸರ್ಕಲ್ ಸೇರಿದಂತೆ ಹಲವು ಕಡೆ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಎಲ್ಲೆಡೆ ಜಲ್ಲಿಕಲ್ಲಿನ ಗುಡ್ಡೆ, ರಸ್ತೆ ಅಗೆದು ಬಿಟ್ಟಿರುವುದು, ಜಲ್ಲಿ ಹಾಕಿರುವುದು, ಗುಂಡಿಗಳು, ಪೂರ್ಣವಾಗದ ಚರಂಡಿಗಳು ಕಾಣುತ್ತಿವೆ.

      ಪಟ್ಟಣ ಸಮೀಪದ ಎಸ್‍ಎಲ್‍ಆರ್ ಬಂಕ್‍ನಿಂದ ಎಪಿಎಂಸಿವರೆಗಿನ ಡಾಂಬರ್ ರಸ್ತೆಯನ್ನು ಕಿತ್ತು ಏಳೆಂಟು ತಿಂಗಳಾಗಿದೆ. ರಸ್ತೆಯನ್ನು ವಿಭಜಿಸಿ ಸುಮಾರು 3 ಅಡಿ ಆಳದವರಗೆ ಅರ್ಧ ಕಿ.ಮೀ ರಸ್ತೆಯನ್ನು ಕಿತ್ತು ಗುಂಡಿ ತೋಡಿದ್ದಾರೆ. ಒಂದು ಕಡೆ ರಸ್ತೆ ಸಂಪೂರ್ಣ ಆಳವಿರುವ ಕಾರಣ ವಾಹನಗಳು ಉಳಿದ ಅರ್ಧ ರಸ್ತೆಯಲ್ಲಿಯೇ ಸಂಚರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ದ್ವಿಚಕ್ರ ವಾಹನಗಳು ಸೇರಿದಂತೆ ಭಾರಿ ವಾಹನಗಳು ಒಂದೇ ರಸ್ತೆಯಲ್ಲಿ ಸಂಚರಿಸುವುದರಿಂದ ಸ್ವಲ್ಪ ಯಾಮಾರಿದರೂ ಆಳದ ಗುಂಡಿಗೆ ಬಿದ್ದು ಗಾಯಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

      ಕಾಮಗಾರಿಯು ಕುಂಟುತ್ತಾ ಸಾಗುತ್ತಿರುವುದರಿಂದ ಚರಂಡಿ ಮಾಡಲು ತೆಗೆದಿರುವ ಗುಂಡಿಗಳಲ್ಲಿ ಮಳೆಯಿಂದ ನೀರು ಸೇರಿದಂತೆ ಹೋಟೆಲ್, ಮನೆಯ ಕೊಳಚೆ ನೀರು ನಿಂತು ಸಾಕಷ್ಟು ಸಮಸ್ಯೆ ಎದುರಾಗುತ್ತಿದೆ. ಪಾದಚಾರಿಗಳು ತಿರುಗಾಡಲು ಸಾಧ್ಯವಾಗುತ್ತಿಲ್ಲ. ಮಕ್ಕಳನಂತೂ ಒಬ್ಬೊಬ್ಬರನ್ನೇ ಕಳಿಸಲು ಸಾಧ್ಯವಾಗದಾಗಿದೆ. ರಸ್ತೆ ಬದಿಯಲ್ಲಿರುವ ಅಂಗಡಿ ಮಳಿಗೆ ವರ್ತಕರು ವ್ಯಾಪಾರ ವಹಿವಾಟು ನಡೆಸಲು ಪರದಾಡುವಂತಾಗಿದೆ.

       2019 ರ ಫೆಬ್ರವರಿ ಮಾಹೆಯಲ್ಲೇ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ಹುಳಿಯಾರು ಪಟ್ಟಣದಲ್ಲಿ ಇನ್ನೂ ಒಳ ಚರಂಡಿ ನಿರ್ಮಾಣದ ಕಾಮಗಾರಿಯೇ ಪೂರ್ಣವಾಗಿಲ್ಲ. ಅಂತಹದರಲ್ಲಿ ರಸ್ತೆ ನಿರ್ಮಾಣ, ಪಾದಚಾರಿ ರಸ್ತೆ, ರಸ್ತೆ ಮಧ್ಯೆ ಡಿವೈಡರ್ ಹೀಗೆ ಅನೇಕ ಕಾಮಗಾರಿಗಳು ಇನ್ಯಾವಾಗ ಮುಗಿಯುವುದೋ ಎಂಬುದು ಚರ್ಚೆಗೆ ಗ್ರಾಸವಾದ ಸಂಗತಿಯಾಗಿದೆ. ಇನ್ನಾದರೂ ಹೆದ್ದಾರಿ ಪ್ರಾಧಿಕಾರ ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸಬೆಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link