ದಾವಣಗೆರೆ:
80ರ ದಶಕದಿಂದ ದಾವಣಗೆರೆಯೊಂದಿಗೆ ನಂಟು ಹೊಂದಿದ್ದ ಹೆಚ್.ಎನ್.ಅನಂತಕುಮಾರ್ ಅವರಿಗೆ, ಇಲ್ಲಿಯ ಖಾರಮಂಡಕ್ಕಿ ಹಾಗೂ ಮಿರ್ಚಿ ಅಚ್ಚುಮೆಚ್ಚು ಆಗಿತ್ತು. ದಾವಣಗೆರೆಯ ನನ್ನ ಸ್ವಾಗತ ಮತ್ತು ಬೀಳ್ಕೂಡುಗೆಗೆ ಖಾರಮಂಡಕ್ಕಿ, ಮಿರ್ಚಿಯಿಂದಲೇ ಆಗುತ್ತೆ ಎಂಬುದಾಗಿ ಅವರೇ ಹಾಸ್ಯ ಮಾಡುತ್ತಿದ್ದರು.
ಹೀಗೆ ಅನಂತಕುಮಾರ್ ಅವರು ದಾವಣಗೆಯೊಂದಿಗೆ ಹೊಂದಿದ್ದ ಓಡನಾಟದ ನೆನಪುಗಳನ್ನು ಬಿಚ್ಚಿಟ್ಟಿದ್ದು, ಅನಂತಕುಮಾರ್ ಅವರ ಒಡನಾಡಿ ಯಾಗಿರುವ ವಕೀಲ ವೈ.ಮಂಜಪ್ಪ ಕಾಕನೂರು. ಅನಂತಕುಮಾರ್ ದಾವಣಗೆರೆಗೆ ಬಂದಾಗ ನಗರದಲ್ಲಿ ಸೈಕಲ್ ಸವಾರಿಯಲ್ಲಿಯೇ ನಗರ ಪ್ರದಕ್ಷಿಣೆ ನಡೆಯುತಿತ್ತು. ಇಲ್ಲಿಗೆ ಅವರು ಬಂದರೆ, ಅವರ ಊಟ, ಉಪಚಾರ ಎಲ್ಲವೂ ಕಾರ್ಯಕರ್ತರ ಮನೆಗಳಲ್ಲಿಯೇ ನಡೆಯುತಿತ್ತು. ಸಂಘಟನೆಯ ಕಾರ್ಯಭಾರ ಹೆಚ್ಚಾಗಿ, ಒಮ್ಮೊಮ್ಮೆ ಕಾರ್ಯಕರ್ತರ ಮನೆಗೆ ಹೋಗುವುದು ವಿಳಂಬವಾದರೆ, ಇವತ್ತು ಮನೆ ಹೋಗುವುದು ಬೇಡ ಎಂಬುದಾಗಿ ಹೇಳಿ, ನಮ್ಮೆಲ್ಲರ ಜೊತೆಗೆ ಖಾರಮಂಡಕ್ಕಿ, ಮಿರ್ಚಿಬಜಿ ಮೆಲ್ಲುತ್ತಿದ್ದರು ಎಂದು ಅನಂತ್ ಅವರ ನೆನಪುಗಳನ್ನು ಎಳೆ, ಎಳೆಯಾಗಿ ಬಿಚ್ಚಿಟ್ಟಿದ್ದರು.
ಒಮ್ಮೆ ನಮ್ಮೂರು ಕಾಕನೂರಿಗೆ ಅನಂತಕುಮಾರ್ ಅವರನ್ನು ಕರೆದುಕೊಂಡು ಹೋಗಿದ್ದಾಗ ನಮ್ಮ ಪೋಷಕರು ಜಮೀನಿನಲ್ಲಿ ಕೆಲಸವಿದೆ. ಇತ ಹೀಗೆ ಓಡಾಡಿಕೊಂಡಿದ್ದರೆ ಹೇಗೆ ಎಂಬುದಾಗಿ ಪ್ರಶ್ನಿಸಿದಕ್ಕೆ ಸಾವಧಾನವಾಗಿ ಉತ್ತರಿಸಿದ ಅನಂತಕುಮಾರ್, ನಿಮ್ಮ ಮಗ ದೇಶಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಈ ಸೌಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ನಿಮ್ಮ ಮಗ ದೇಶದ ಕೆಲಸದ ಜೊತೆಗೆ ಜಮೀನಿನ ಕೆಲಸವೂ ಮಾಡುತ್ತಾನೆಂದು ಹೇಳುವ ಮೂಲಕ ನಮ್ಮಂಥಹ ಕಾರ್ಯಕರ್ತರ ಗೌರವ ಹೆಚ್ಚಿಸುತ್ತಿದ್ದರು ಎಂದು ಸ್ಮರಿಸಿದರು.
ಇನ್ನೋರ್ವ ಓಡನಾಡಿ ವಕೀಲ ಜಿ.ಕೆ.ಸುರೇಶ್ ಮಾತನಾಡಿ, ಅನಂತಕುಮಾರ್ ದಾವಣಗೆರೆಯ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದರು. ಇತ್ತೀಚಿನ ವರೆಗೂ ಅವರು ಇಲ್ಲಿಗೆ ಬಂದಾಗ 80ರ ದಶಕದ ಒಡನಾಡಿಗಳು ಕಂಡರೆ, ಅವರ ಯೋಗಕ್ಷೇಮ ವಿಚಾರಿಸಿ, ಅವರ ಸುಃಖ, ದುಃಖದಲ್ಲಿ ಭಾಗಿಯಾಗುವ ಸೌಜನ್ಯವನ್ನು ಹೊಂದಿದ್ದರು ಎಂದರು.
ಅನಂತಕುಮಾರ್ 1982ರಲ್ಲಿ ಎಬಿವಿಪಿ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆಯಾದ ಮೇಲೆ ಅವರ ನಂಟು ದಾವಣಗೆರೆಯೊಂದಿಗೆ ಆರಂಭವಾಯಿತು. ವಿದ್ಯಾರ್ಥಿ ಸಂಘಟನೆಯನ್ನು ಬಲಪಡಿಸಲಿಕ್ಕಾಗಿ 1985ರ ವರೆಗೂ ಅವರು ನಿರಂತರವಾಗಿ ಇಲ್ಲಿಗೆ ಬರುತ್ತಿದ್ದರು. 1982ರಲ್ಲಿ ಇಲ್ಲಿನ ಎಕ್ಸ್ ಮುನ್ಸಿಪಲ್ ಕಾಲೇಜ್ನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾಡಿದ ಭಾಷಣ ವಿದ್ಯಾರ್ಥಿಗಳಲ್ಲಿ ದೇಶಾಭಿಮಾನದ ಕಿಚ್ಚು ಮೂಡಿಸುವಂತಿತ್ತು. ಅನಂತಕುಮಾರ್ ಇದ್ದಕಡೆಗಳಲ್ಲಿ ನಗು, ಹರಟೆ ಸದಾ ಇರುತಿತ್ತು. ಅಲ್ಲದೆ, ದೇಶದ ವಿದ್ಯಾಮಾನಗಳ ಚರ್ಚೆ ಇಡೀ ರಾತ್ರಿ ನಡೆಯುತಿತ್ತು. ಬರೀ ನಾನೊಬ್ಬನೇ ಮುಖಂಡನಾಗಿ ಬೆಳೆಯ ಬಾರದು. ನನ್ನೊಂದಿಗೆ ನೀವು ಬೆಳೆಯಬೇಕೆಂದು ಉತ್ತೇಜಿಸುತ್ತಿದ್ದರು.
ಇನ್ನೋರ್ವ ಓಡನಾಡಿ, ನರಸಭಾ ಮಾಜಿ ಸದಸ್ಯ ಪಿ.ಸಿ.ಮಹಾಬಲೇಶ್ವರ ಮಾತನಾಡಿ, ಅನಂತ ಕುಮಾರ್ ದಾವಣಗೆರೆಯಲ್ಲಿದ್ದ ಕಾಲೇಜುಗಳಿಗೆ ಹೋಗಿ ಭಾಷಣ ಮಾಡಿ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ತುಂಬುತ್ತಿದ್ದರು. ಜಯದೇವ ವೃತ್ತ, ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿ ಖಾರಮಂಡಕ್ಕಿ, ಮೆಣಸಿನಕಾಯಿ ಮೆಲ್ಲುತ್ತಾ ರಾತ್ರಿವಿಡೀ ಹರಟುತ್ತಿದ್ದೇವು ಎಂದು ನೆನಪಿಸಿಕೊಂಡರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
