ಬೆಳಗಾವಿ
ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಬಳಕೆ ಮಾಡದೇ ಮಾರಾಟ ಮಾಡುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವ ಜತೆಗೆ ಪಡಿತರ ಚೀಟಿಯನ್ನೂ ಸಹ ರದ್ದುಗೊಳಿಸಲಾಗುವುದು ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಜಮೀರ್ ಅಹ್ಮದ್ ಖಾನ್ ವಿಧಾನಪರಿಷತ್ತಿನಲ್ಲಿಂದು ಎಚ್ಚರಿಕೆ ನೀಡಿದ್ದಾರೆ.
ಪ್ರಶ್ನೋತ್ತರ ವೇಳೆ ಬಿಜೆಪಿ ಸದಸ್ಯ ರಘುನಾಥರಾವ್ ಮಲ್ಕಾಪೂರೆ ಅವರ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ಪಡಿತರ ವಿತರಣೆಯನ್ನು ಸಂಪೂರ್ಣ ಗಣಕೀಕೃತಗೊಳಿಸಲಾಗಿದ್ದು, ಬಯೋಮೆಟ್ರಿಕ್ ಆದ ಬಳಿಕ ಅಕ್ರಮ ಮಾರಾಟ ತಪ್ಪಿದೆ. ಉಳಿದ ಅಕ್ಕಿಯ ಪ್ರಮಾಣವನ್ನು ಮುಂದಿನ ತಿಂಗಳಲ್ಲಿ ಮಾಡುವ ಹಂಚಿಕೆಯಲ್ಲಿ ಆನ್ಲೈನ್ ಮೂಲಕವೇ ಕಡಿತಗೊಳಿಸಲಾಗುತ್ತಿದೆ ಎಂದರು.
ಈ ಹಿಂದೆ ಅಕ್ರಮ ಅಕ್ಕಿ ಮಾರಾಟಕ್ಕೆ ಸಂಬಂಧಿಸಿದಂತೆ 81 ಪ್ರಕರಣಗಳಲ್ಲಿ ಎಫ್ಐಆರ್ ಆಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ಕೆಲವು ಇಲಾಖೆಗಳಿಂದಲೂ ಅಕ್ಕಿಯನ್ನು ಫಲಾನುಭವಿಗಳಿಗೆ ವಿತರಿಸಲಾಗುತ್ತಿದೆ. ಯಾವ ಇಲಾಖೆಯಲ್ಲಿ ಅಕ್ಕಿ ಅಕ್ರಮ ಮಾರಾಟ ಮಾಡಲಾಗುತ್ತಿದೆ ಎಂಬುದನ್ನು ಪರಿಶೀಲಿಸಬೇಕಾಗಿದೆ. ಪಡಿತರ ಹಂಚಿಕೆ ಬಗ್ಗೆ ಆನ್ ಲೈನ್ ನಲ್ಲೇ ಎಲ್ಲ ವಿವರಗಳು, ದೂರುಗಳು ಲಬ್ಯವಿದೆ ಎಂದರು.
ಸಚಿವರ ಮಾತಿಗೆ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಕೆಲ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ಸದನದಲ್ಲಿ ಸಮರ್ಪಕವಾಗಿ ಉತ್ತರಿಸಬೇಕೇ ಹೊರತು ಆಕ್ರೋಶಭರಿತರಾಗಿ ಮಾತನಾಡುವುದು ಸರಿಯಲ್ಲ ಎಂದರು. ಈ ವೇಳೆ ಜಮೀರ್ ಅಹ್ಮದ್ ಬೆಂಬಲಕ್ಕೆ ಸಚಿವ ಯು.ಟಿ.ಖಾದರ್ ನಿಂತರು.
ಇಲ್ಲಿಯವರೆಗೂ ಪಡಿತರ ಅಕ್ಕಿ ಅಕ್ರಮ ಮಾರಾಟ ಕಂಡುಬಂದಿಲ್ಲ. ಕೆಲವು ಕಡೆ ಅಕ್ಕಿಯನ್ನು ಪಡೆದ ಫಲಾನುಭವಿಗಳು ಹೆಚ್ಚಿನ ಹಣಕ್ಕೆ ಅಕ್ಕಿಯನ್ನು ಮಾರಾಟ ಮಾಡುತ್ತಿರುವುದು ಕಂಡುಬಂದಿದ್ದು, ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
