ಹೊನ್ನಾಳಿ:
ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಎಂದು ಘೋಷಿಸಬೇಕು ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಒತ್ತಾಯಿಸಿದರು.
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಸಭಾ ಅಧಿವೇಶನದ 4ನೇ ದಿನ ಗುರುವಾರ ಸದನದಲ್ಲಿ ನಿಯಮ 69ರ ಅಡಿ ಚರ್ಚೆ ನಡೆಸಿ ಸರಕಾರದ ಗಮನ ಸೆಳೆದ ಬಳಿಕ ಅವರು ಮಾತನಾಡಿದರು.
ಮಳೆ ಕೊರತೆಯ ಕಾರಣಕ್ಕೆ ಎರಡೂ ತಾಲೂಕುಗಳ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬಿತ್ತದ ಬೆಳೆ ರೈತನಿಗೆ ದೊರೆತಿಲ್ಲ. ಬೆಳೆಗಾಗಿ ಮಾಡಿದ ಸಾಲ ರೈತನನ್ನು ಕಿತ್ತು ತಿನ್ನುತ್ತಿದೆ. ಆದ್ದರಿಂದ, ಸರಕಾರ ಶೀಘ್ರವೇ ಬರಪೀಡಿತ ತಾಲೂಕುಗಳು ಎಂದು ಘೋಷಿಸಿ ಪರಿಹಾರ ಕಾರ್ಯಗಳನ್ನು ಅನುಷ್ಠಾನಗೊಳಿಸಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿರುವುದಾಗಿ ತಿಳಿಸಿದರು.
ರಾಜ್ಯದಲ್ಲಿ 100 ತಾಲೂಕುಗಳನ್ನು ಸರಕಾರ ಈಗಾಗಲೇ ಬರಪೀಡಿತ ತಾಲೂಕುಗಳು ಎಂದು ಘೋಷಿಸಿದೆ. ಅಧಿಕಾರಿಗಳು ನೀಡಿದ ವರದಿಯ ಅವೈಜ್ಞಾನಿಕ ಆಧಾರ ಇಟ್ಟುಕೊಂಡು ಸರಕಾರದ ಪಾಲುದಾರ ಪಕ್ಷಗಳ ಶಾಸಕರ ಕ್ಷೇತ್ರಗಳನ್ನು ಮಾತ್ರ ಬರಪೀಡಿತ ಎಂದು ಘೊಷಿಸಲಾಗಿದೆ. ಉಳಿದ ತಾಲೂಕುಗಳಲ್ಲಿ ಬರಗಾಲದ ನೈಜ ಪರಿಸ್ಥಿತಿ ತಾಂಡವವಾಡುತ್ತಿದ್ದರೂ ಸರಕಾರ ಕ್ರಮ ವಹಿಸಿಲ್ಲ. 30 ಜಿಲ್ಲೆಗಳ ಉಸ್ತುವಾರಿ ಸಚಿವರೂ ಈವರೆಗೆ ಜನರ ಜ್ವಲಂತ ಸಮಸ್ಯೆ ಮತ್ತು ಬರಗಾಲದ ಪರಿಸ್ಥಿತಿ ಅರಿತುಕೊಳ್ಳಲು ಯಾವ ಜಿಲ್ಲೆಗಳಲ್ಲಿಯೂ ಪ್ರವಾಸ ನಡೆಸಿಲ್ಲ ಎಂದು ಹರಿಹಾಯ್ದರು. ಯಾವುದೇ ನಿರ್ದಿಷ್ಟ ರೂಪುರೇಷೆ, ಜನಪರ ಕಾಳಜಿ ಇಲ್ಲದ ಮೈತ್ರಿ ಸರಕಾರ ಜನತೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಗಮನ ಹರಿಸದೇ ಸ್ವಾರ್ಥಪರ ರಾಜಕಾರಣಕ್ಕಿಳಿದಿದೆ ಎಂದು ಕುಟುಕಿದರು.
ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳಲ್ಲಿ ಮಳೆಯ ಕೊರತೆಯಿಂದ ಕೆರೆ-ಕಟ್ಟೆಗಳು ಸಂಪೂರ್ಣ ಬತ್ತಿ ಹೋಗಿದ್ದು, ಜನ-ಜಾನುವಾರುಗಳಿಗೆ ಕುಡಿಯಲು ನೀರಿಲ್ಲದ ಪರಿಸ್ಥಿತಿ ಉಂಟಾಗಿದೆ. ಹಲವಾರು ಗ್ರಾಮಗಳಲ್ಲಿ ಸಾಕಷ್ಟು ಕುಡಿಯುವ ನೀರಿನ ಬೋರ್ವೆಲ್ಗಳಿದ್ದರೂ ಅಂತರ್ಜಲ ಸಂಪೂರ್ಣ ಬತ್ತಿರುವ ಕಾರಣಕ್ಕೆ ನೀರಿನ ಹಾಹಾಕಾರ ಪರಿಸ್ಥಿತಿ ಉಂಟಾಗಿದೆ. ಸಾರ್ವಜನಿಕರು ನೀರಿಗಾಗಿ ಪರಿತಪಿಸುತ್ತಿದ್ದು, ದಿನನಿತ್ಯ ಜನರು ನೀರಿಗಾಗಿ ಧರಣಿ ನಡೆಸುತ್ತಿದ್ದಾರೆ. ಈ ಎಲ್ಲಾ ಸಂಗತಿಗಳು ಸರಕಾರದ ಗಮನಕ್ಕಿದ್ದರೂ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿಲ್ಲ. ಅಧಿಕಾರಿಗಳು ಅನುದಾನಕ್ಕಾಗಿ ಸರಕಾರದ ಕಡೆ ಬೊಟ್ಟು ಮಾಡುತ್ತಿದ್ದಾರೆ ಎಂದರು. ಎರಡೂ ತಾಲೂಕುಗಳನ್ನು ಬರಪಟ್ಟಿಗೆ ಸೇರ್ಪಡೆಗೊಳಿಸುವಂತೆ ಸಾಕಷ್ಟು ಬಾರಿ ಮುಖ್ಯಮಂತ್ರಿಗಳು, ಕಂದಾಯ ಸಚಿವರಿಗೆ ಮನವಿ ಮಾಡಿದ್ದೇನೆ. ಈ ಬಗ್ಗೆ ತಾಲೂಕಿನಲ್ಲಿ ಹಲವಾರು ಬಾರಿ ಸಾರ್ವಜನಿಕರೊಡನೆ ಪ್ರತಿಭಟನೆ ನಡೆಸಿದ್ದರೂ ಸರಕಾರ ಇತ್ತ ಗಮನಹರಿಸಿಲ್ಲ ಎಂದು ಕಿಡಿಕಾರಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
