ಬೆಂಗಳೂರು
ಯಾವುದೇ ಸಂದರ್ಭದಲ್ಲಿ ಸಚಿವ ಸಂಪುಟ ವಿಸ್ತರಣೆ ನಡೆಯಬಹುದೆಂಬ ಸುಳಿವು ಸಿಗುತ್ತಿದ್ದಂತೆ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳು ದೆಹಲಿಯಲ್ಲಿ ಲಾಬಿ ಆರಂಭಿಸಿದ್ದಾರೆ.ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರೊಂದಿಗೆ ದೆಹಲಿಗೆ ತೆರಳಿರುವ ಅನೇಕ ಮುಖಂಡರು ತಮ್ಮ ತಮ್ಮ ಗಾಡ್ ಫಾದರ್ಗಳ ಮೂಲಕ ತಮ್ಮನ್ನು ಸಂಪುಟಕ್ಕೆ ತೆಗೆದುಕೊಳ್ಳುವಂತೆ ಒತ್ತಡದ ತಂತ್ರ ಅನುಸರಿಸುತ್ತಿದ್ದಾರೆ.
ಕಳೆದ ಮೂರು ದಿನಗಳಿಂದ ನವದೆಹಲಿಯಲ್ಲಿ ಇರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಗೋವಿಂದ ಕಾರಜೋಳ, ಕರುಣಾಕರ ರೆಡ್ಡಿ, ಬಸವರಾಜ್ ಬೊಮ್ಮಾಯಿ ಸೇರಿದಂತೆ ಮತ್ತಿತರರು ಸಂಪುಟಕ್ಕೆ ಸೇರ್ಪಡೆಯಾಗಲು ನಾನಾ ರೀತಿಯ ಸರ್ಕಸ್ ನಡೆಸುತ್ತಿದ್ದಾರೆ.
ಕೆಲವರು ಮುಖ್ಯಮಂತ್ರಿ ಯಡಿಯೂರಪ್ಪನವರ ಮೂಲಕ ಸಂಪುಟಕ್ಕೆ ಸೇರ್ಪಡೆಯಾಗಲು ಲಾಬಿ ಮಾಡುತ್ತಿದ್ದರೆ ಇನ್ನು ಕೆಲವರು ಆರ್ಎಸ್ಎಸ್ ನಾಯಕರ ಜೊತೆ ಒಡನಾಟ ಇಟ್ಟುಕೊಂಡಿರುವ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಮೂಲಕವೂ ಒತ್ತಡದ ತಂತ್ರ ಅನುಸರಿಸುತ್ತಿದ್ದಾರೆ.
ಕರಾವಳಿ ಭಾಗದ ಸಚಿವ ಸ್ಥಾನದ ಆಕಾಂಕ್ಷಿಗಳು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮೂಲಕ ಲಾಬಿ ಮಾಡಿದರೆ ಈವರೆಗೂ ಬೆಂಗಳೂರಿನ ರಾಜಕಾರಣದಲ್ಲಿ ದಿವಂಗತ ಅನಂತ್ಕುಮಾರ್ ಅವರ ಹೆಸರೇ ಅಂತಿಮ ಎನ್ನುವಂತಾಗಿತ್ತು. ಆದರೆ ಅವರ ನಿಧನದ ನಂತರ ಸದಾನಂದಗೌಡ ಹಾಗೂ ಅಶೋಕ್ ಅವರ ಮೇಲೆ ಕೆಲವರು ಪ್ರಭಾವ ಬೀರುವ ಪ್ರಯತ್ನ ನಡೆಸಿದ್ದಾರೆ.
ಆದರೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಜಾತಿ ಹಾಗೂ ಲಾಬಿಗೆ ತಿಲಾಂಜಲಿ ಹಾಡಿರುವ ನರೇಂದ್ರ ಮೋದಿ ಅಮಿತ್ ಷಾ ಜೋಡಿ ಯಾರನ್ನೇ ಸಂಪುಟಕ್ಕೆ ತೆಗೆದುಕೊಂಡರೆ ಸಾಕಷ್ಟು ರಾಜಕೀಯ ಲೆಕ್ಕಾಚಾರವಿರುತ್ತದೆ .ಇದೀಗ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸಂಪುಟಕ್ಕೆ ತೆಗೆದುಕೊಳ್ಳಬಹುದಾದ ಸಂಭವನೀಯರ ಎರಡು ಪಟ್ಟಿಯನ್ನು ರಾತ್ರೋರಾತ್ರಿ ತರಿಸಿಕೊಂಡಿದ್ದಾರೆ.
ಆರ್ಎಸ್ಎಸ್ ನಾಯಕರಿಂದ ಒಂದು ಪಟ್ಟಿ ಹೋದರೆ, ಬಿಜೆಪಿಯಿಂದ ಮತ್ತೊಂದು ಕೂಲವಾಗುತ್ತದೆ, ಪಕ್ಷ ಸಲ್ಲಿಸಿರುವ ಸೇವೆ, ಕಾರ್ಯಕರ್ತರು ಮತ್ತು ಪಕ್ಷದ ನಡುವೆ ಇಟ್ಟುಕೊಂಡಿರುವ ಸಂಪರ್ಕ ಎಲ್ಲವನ್ನು ಅಳೆದು ತೂಗಿ ಸಂಪುಟ ವಿಸ್ತರಣೆಗೆ ಹಸಿರು ನಿಶಾನೆ ತೋರುವರು.
ರಾಷ್ಟ್ರೀಯ ನಾಯಕರು ಅಷ್ಟೂ ಸರಳವಾಗಿ ಸಂಪುಟಕ್ಕೆ ಸೇರ್ಪಡೆಯಾಗಲು ಅನುಮತಿ ನೀಡುವುದಿಲ್ಲ ಎನ್ನುತ್ತಿರುವ ಬಿಜೆಪಿ ನಾಯಕರು ದೆಹಲಿಯಲ್ಲಿ ಕೆಲವು ನಾಯಕರ ಮನೆ ಬಾಗಿಲು ಎಡತಾಕುತ್ತಿದ್ದಾರೆ.ಆದರೆ ಲಾಬಿಗೆ ಮಣಿದು ಮೋದಿ, ಅಮಿತ್ ಷಾ ಮಂತ್ರಿ ಸ್ಥಾನ ನೀಡುವರೇ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
