ಹುಳಿಯಾರು:
ಹುಳಿಯಾರು ಹೋಬಳಿಯ ಯಳನಾಡು ಗ್ರಾಪಂ ವ್ಯಾಪ್ತಿಯ ಕಾಚನಕಟ್ಟೆ ಗಂಗಮ್ಮನಕೆರೆ ಸುತ್ತಮುತ್ತ ಕಳೆದ 2 ತಿಂಗಳಿಂದ ಆಗಾಗ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬುಧವಾರ ಬೆಳಗಿನ ಜಾವ ಬಿದ್ದಿದೆ.
2 ತಿಂಗಳಿಂದ ಸಾರ್ವಜನಿಕವಾಗಿ ಚಿರತೆ ಆಗಾಗ ಕಾಣಿಸಿಕೊಂಡು ಇಲ್ಲಿನ ಜನರಲ್ಲಿ ಆತಂಕ ಮೂಡಿಸಿತ್ತು. ಅಲ್ಲದೆ ಸಾಕು ಪ್ರಾಣಿಗಳನ್ನು ತಿಂದು ಭಯದ ವಾತವರಣ ನಿರ್ಮಾಣವಾಗಿತ್ತು. ಈ ಬಗ್ಗೆ ಸ್ಥಳೀಯರು ಬುಕ್ಕಪಟ್ಟಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.ಈ ಹಿನ್ನೆಲೆಯಲ್ಲಿ ಸ್ಥಳಿಯರು ಮಾಹಿತಿಯಂತೆ ಚಿರತೆ ನಿತ್ಯ ಓಡಾಡುವ ಜಾಗದಲ್ಲಿ ಅರಣ್ಯ ಇಲಾಖೆ ಬೋನನ್ನು ಇಟ್ಟು ಸೆರೆ ಹಿಡಿಯಲು ಮುಂದಾಗಿತ್ತು. ಅಂತಿಮವಾಗಿ ಆಹಾರ ಅರಸುತ್ತಾ ಬಂದ ಚಿರತೆ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ.
ಮುಂಜಾನೆ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ತಿಪಟೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜೆ.ಜಿ.ರವಿ ಅವರ ಮಾರ್ಗದರ್ಶನದಂತೆ ಬನ್ನೇರುಘಟ್ಟಕ್ಕೆ ಬಿಡುವುದು ಸೂಕ್ತವೆಂದು ನಿರ್ಧರಿಸಿ ಚಿರತೆ ಸಮೇತ ಬೋನನ್ನು ಕೊಂಡೊಯ್ದರು.ಬುಕ್ಕಾಪಟ್ಟಣ ವಲಯ ಅರಣ್ಯಾಧಿಕಾರಿ ಎಚ್.ಮಲ್ಲಿಕಾರ್ಜುನಪ್ಪ, ಉಪ ವಲಯ ಅರಣ್ಯಾಧಿಕಾರಿ ಟಿ.ಕಿರಣ್, ಸಿದ್ದಲಿಂಗಮೂರ್ತಿ, ಅರಣ್ಯ ರಕ್ಷಕರಾದ ದಿಲೀಪ್ಕುಮಾರ್, ಆರ್.ಶೇಖರ್, ಅರಣ್ಯ ವೀಕ್ಷಕ ಸಂತೋಷ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/09/16HULIYAR1.gif)