ಬೆಂಗಳೂರು
ಕಾಂಗ್ರೆಸ್ – ಜೆಡಿಎಸ್ ಪಕ್ಷಗಳ ಸೀಟು ಹಂಚಿಕೆ ಪ್ರಕ್ರಿಯೆ ಕೊನೆಗೂ ಪೂರ್ಣಗೊಂಡಿದ್ದು, ಜೆಡಿಎಸ್ ಗೆ ಕಾಂಗ್ರೆಸ್ ಪ್ರತಿನಿಧಿಸುತ್ತಿರುವ ತುಮಕೂರು ಹಾಗೂ ಮಂಡ್ಯ, ಬೆಂಗಳೂರು ಉತ್ತರ ಸೇರಿ 8 ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದೆ.
ವಿವಾದಾತ್ಮಕ ಹೇಳಿಕೆ ನೀಡಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿರುವ ಕೇಂದ್ರ ಕೌಶಲ್ಯಾಭಿವೃದ್ಧಿ ಖಾತೆ ರಾಜ್ಯ ಸಚಿವ ಅನಂತ್ ಕುಮಾರ್ ಹೆಗಡೆ ಗೆದ್ದಿರುವ ಉತ್ತರ ಕನ್ನಡ, ಉಡುಪಿ-ಚಿಕ್ಕಮಗಳೂರು, ಶಿವಮೊಗ್ಗ, ತುಮಕೂರು, ಹಾಸನ, ಮಂಡ್ಯ, ಬೆಂಗಳೂರು ಉತ್ತರ ಮತ್ತು ವಿಜಯಪುರ ಕ್ಷೇತ್ರಗಳನ್ನು ಜೆಡಿಎಸ್ ಗೆ ಹಂಚಿಕೆ ಮಾಡಿದೆ.
ಮೈಸೂರು – ಕೊಡಗು ಕ್ಷೇತ್ರವನ್ನು ಬಿಟ್ಟುಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಕೊನೆಗೂ ಮೇಲುಗೈ ಸಾಧಿಸಿದ್ದಾರೆ. ಮೈಸೂರು ಕ್ಷೇತ್ರ ನೀಡುವಂತೆ ಸಿದ್ದರಾಮಯ್ಯ ಅವರ ಎದುರಾಳಿಗಳಾದ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ, ಸಚಿವ ಸಾ.ರಾ. ಮಹೇಶ್ ಮತ್ತಿತರರು ತೀವ್ರ ಲಾಬಿ ನಡೆಸಿದ್ದರು. ಆದರೆ ಹೈಕಮಾಂಡ್ ಜೆಡಿಎಸ್ ವರಿಷ್ಠರ ಮನವಿಗೆ ಸ್ಪಂದಿಸಿಲ್ಲ.
ತುಮಕೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಜಯಗಳಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನ ಮುದ್ದ ಹನುಮೇಗೌಡ ಪ್ರತಿನಿಧಿಸುತ್ತಿರುವ ತುಮಕೂರು ಇದೀಗ ಜೆಡಿಎಸ್ ಪಾಲಾಗಿದೆ. ಈ ಕ್ಷೇತ್ರ ಬಿಟ್ಟುಕೊಡುವುದಿಲ್ಲ ಎಂದು ಶತಾಯಗತಾಯ ಪ್ರಯತ್ನಿಸಿದ್ದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರಿಗೆ ತೀವ್ರ ಹಿನ್ನೆಡೆಯಾಗಿದೆ. ಇದೀಗ ಹಾಲಿ ಸಂಸದ ಮುದ್ದ ಹನುಮೇಗೌಡರ ಮುಂದಿನ ಹೆಜ್ಜೆ ಏನು ಎನ್ನುವುದು ಸಹ ಅಷ್ಟೇ ಕುತೂಹಲ ಕೆರಳಿಸಿದೆ. ಅವರು ಬಿಜೆಪಿ ಸೇರುತ್ತಾರೋ ಅಥವಾ ಕಾಂಗ್ರೆಸ್ ನಲ್ಲೇ ಉಳಿಸಿಕೊಳ್ಳುತ್ತಾರೋ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಸಂಚಾಲಕ ಡ್ಯಾನಿಷ್ ಆಲಿ ಕೇರಳದ ಕೊಚ್ಚಿಯಲ್ಲಿಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿ ಸೀಟು ಹಂಚಿಕೆಯನ್ನು ಪೂರ್ಣಗೊಳಿಸಿದರು ಎಂದು ಜೆಡಿಎಸ್ ನ ಅಧಿಕೃತ ಮೂಲಗಳು ತಿಳಿಸಿವೆ.
ಉತ್ತರ ಕನ್ನಡ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿರುವ ಬೆಳವಣಿಗೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್ ನಿಂದ ಸಮರ್ಥ ಅಭ್ಯರ್ಥಿಗಳ ಕೊರತೆಯಿಂದಾಗಿ ಇಂತಹ ನಿರ್ಧಾರ ತೆಗೆದುಕೊಂಡಿರಬಹುದು ಎಂಬ ಚರ್ಚೆ ರಾಜಕೀಯ ವಲಯದಲ್ಲಿದೆ.
ಇನ್ನು ವಿಜಯಪುರ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ತಲಾ ಎರಡು ಕ್ಷೇತ್ರಗಳಲ್ಲಿ ಗೆದ್ದಿರುವ ಹಿನ್ನೆಲೆಯಲ್ಲಿ ಈ ಕ್ಷೇತ್ರ ಬಿಟ್ಟುಕೊಡಲು ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಸಹ ತಕರಾರಿಲ್ಲದೇ ಒಪ್ಪಿಗೆ ನೀಡಿದ್ದರು. ಬಿಜೆಪಿಗೆ ಪ್ರಬಲ ಪೈಪೋಟಿ ನೀಡಲು ಮೈತ್ರಿಕೂಟ ಪ್ರಯತ್ನಿಸಲಿದೆ ಎಂದು ಎಂ.ಬಿ. ಪಾಟೀಲ್ ಬಹಿರಂಗವಾಗಿಯೇ ತಿಳಿಸಿದ್ದಾರೆ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ತನ್ನ ಪ್ರಾಬಲ್ಯವನ್ನೂ ಈಗಲೂ ಉಳಿಸಿಕೊಂಡಿದ್ದು, ಒಟ್ಟಿಗೆ ಪ್ರಯತ್ನ ಮಾಡಿದರೆ ಗೆಲುವು ಸಾಧಿಸಬಹುದು ಎನ್ನುವ ಲೆಕ್ಕಾಚಾರ ಕಾಂಗ್ರೆಸ್ ಮುಖಂಡರಲ್ಲಿದೆ. ಹೀಗಾಗಿಯೇ ಈ ಕ್ಷೇತ್ರವನ್ನು ಜೆಡಿಎಸ್ ಗೆ ನೀಡಿರಬಹುದು ಎನ್ನಲಾಗಿದೆ.
ಇನ್ನು ಜೆಡಿಎಸ್ ನ ಭದ್ರಕೋಟೆಯಾದ ಹಾಸನ, ಮಂಡ್ಯ ಕ್ಷೇತ್ರಗಳನ್ನು ಯಾವುದೇ ತಕರಾರಿಲ್ಲದೇ ನಿರಾಯಾಸವಾಗಿ ನೀಡಿದೆ. ಈ ಎರಡೂ ಕ್ಷೇತ್ರಗಳಲ್ಲಿ ಈಗಾಗಲೇ ಕ್ರಮವಾಗಿ ಪ್ರಜ್ವಲ್ ಮತ್ತು ನಿಖಿಲ್ ಸ್ಪರ್ಧಿಸುವುದಾಗಿ ಜೆಡಿಎಸ್ ಮುಖಂಡರು ಹೇಳಿದ್ದಾರೆ. ಮಂಡ್ಯ ಕ್ಷೇತ್ರ ತೀವ್ರ ಕುತೂಹಲ ಕೆರಳಿಸಿದ್ದು, ಇಲ್ಲಿ ಸುಮಲತ ಅಂಬರೀಷ್ ತನ್ನ ಪ್ರಚಾರ ಅಭಿಯಾನ ಮುಂದುವರೆಸಿದ್ದಾರೆ. ಕೊನೆಘಳಿಗೆಯಲ್ಲಿ ಇಲ್ಲಿನ ರಾಜಕೀಯ ಬೆಳವಣಿಗೆಳು ಯಾವ ರೀತಿಯ ತಿರುವು ಬೇಕಾದರೂ ಪಡೆದುಕೊಳ್ಳಬಹುದು ಎನ್ನುವುದು ರಾಜಕೀಯ ವಲಯದ ಅಭಿಮತವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
