ಯಡಿಯೂರಪ್ಪ ಇಲ್ಲಿಗೆ.. ಸಂತೋಷ್‍ ದಿಲ್ಲಿಗೆ.…!!

ಬೆಂಗಳೂರು

   ಸಂಘಪರಿವಾರದಿಂದ ಪಕ್ಷದ ಕೆಲಸಕ್ಕಾಗಿ ನಿಯೋಜಿತರಾಗಿದ್ದ ಸಂತೋಷ್‌ ಅವರನ್ನು ಇದೀಗ ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದ್ದು ಈ ಮೂಲಕ ಯಡಿಯೂರಪ್ಪ ಇಲ್ಲಿಗೆ, ಸಂತೋಷ್‌ ದಿಲ್ಲಿಗೆ ಎಂಬ ಸೂತ್ರ ಜಾರಿಗೆ ಬಂದಿದೆ.

    ಇದುವರೆಗೆ ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಮಲಾಲ್‌ ಅವರನ್ನು ಸಂಘಪರಿವಾರದ ಕೆಲಸಕ್ಕಾಗಿ ವಾಪಸ್‌ ಕರೆಸಲಾಗಿದ್ದು,ಇದರಿಂದ ತೆರವಾದ ಸ್ಥಾನವನ್ನು ಸಂತೋಷ್‌ ಅವರಿಗೆ ನೀಡುವ ಮೂಲಕ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದಿದ್ದಾರೆ.

     ಇದುವರೆಗೂ ಸಂಘಟನೆಯ ಜಂಟಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಂತೋಷ್‌ ಅವರನ್ನು ಇದೀಗ ರಾಮಲಾಲ್‌ ಅವರ ಜಾಗಕ್ಕೆ ನೇಮಕ ಮಾಡಿರುವ ಅಮಿತ್‌ ಷಾ,ಆ ಮೂಲಕ ಕರ್ನಾಟಕದ ರಾಜಕೀಯ ಚಿತ್ರ ಬದಲಾಗಲಿದೆ ಎಂಬ ಸ್ಪಷ್ಟ ಸಂದೇಶ ನೀಡಿದ್ದಾರೆ.

     ಮೊದಲನೆಯದಾಗಿ,ಕೈ ಚಳಕದ ಲಾಭ ಪಡೆದು ತಾವಾಡುತ್ತಿರುವ ಆಟ ಗುರಿ ತಲುಪಲಿದೆ ಎಂಬುದನ್ನು ಖಚಿತಪಡಿಸಿಕೊಂಡಿರುವ ಅಮಿತ್‌ ಷಾ,ಅದೇ ಕಾಲಕ್ಕೆ ಸಿಎಂ ಹುದ್ದೆಯ ಮೇಲೆ ಬಂದು ಕೂರುವ ಯಡಿಯೂರಪ್ಪ ಅವರಿಗೆ ಯಾವ ಅಡ್ಡಿಯೂ ಆಗಬಾರದು ಎಂಬ ಕಾರಣಕ್ಕಾಗಿ ಸಂತೋಷ್‌ ಅವರನ್ನು ದಿಲ್ಲಿ ನೆಲೆಗೆ ತಲುಪಿಸಿದ್ದಾರೆ.

     ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಹಾಗೂ ಸಂತೋಷ್‌ ಪಾರಂಪರಿಕ ಎದುರಾಳಿಗಳಂತಾಗಿದ್ದು, ಸಮ್ಮಿಶ್ರ ಸರ್ಕಾರ ಬೀಳಿಸಿ ಯಡಿಯೂರಪ್ಪ ಮುಖ್ಯಮಂತ್ರಿಯಾದ ಮೇಲೂ ಸಂತೋಷ್‌ ಇಲ್ಲೇ ಇದ್ದರೆ ರಾಜ್ಯ ಬಿಜೆಪಿ ಮತ್ತೆ ಅಸ್ಥಿರಗೊಳ್ಳುತ್ತದೆ ಎಂಬುದು ಅಮಿತ್‌ ಷಾ ಲೆಕ್ಕಾಚಾರ.

     ಹಿಂದಿನಿಂದಲೂ ಸಂತೋಷ್‌ ಅವರನ್ನುವಿರೋಧಿಸುತ್ತಲೇ ಬಂದಿದ್ದ ಯಡಿಯೂರಪ್ಪ ಹಲವುಬಾರಿ ಪಕ್ಷದ ವರಿಷ್ಠರ ಬಳಿ ಸಂತೋಷ್‌ ಅವರ ವಿರುದ್ಧ ತಕರಾರು ತೆಗೆದುಕೊಂಡು ಹೋಗುತ್ತಲೇ ಇದ್ದರು.

      ಈಶ್ವರಪ್ಪ ಅವರ ನೇತೃತ್ವದಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ತಲೆ ಎತ್ತುವಂತೆ ಮಾಡಿದವರೇ ಸಂತೋಷ್‌. ಆ ಮೂಲಕ ಅವರು ರಾಜ್ಯ ಬಿಜೆಪಿಯನ್ನು ವಿಭಜಿಸುತ್ತಿದ್ದಾರೆ ಎಂದು ವರಿಷ್ಠರ ಬಳಿ ದೂರೊಯ್ದಿದ್ದರು.ಅವರ ದೂರಿನ ಹಿನ್ನೆಲೆಯಲ್ಲಿಯೇ ಸಂತೋಷ್‌ ಅವರ ಪ್ರಭಾವವನ್ನು ಕಡಿಮೆ ಮಾಡಲು ಅರುಣ್‌ ಕುಮಾರ್‌ ಅವರನ್ನು ಕಳಿಸಲಾಗಿತ್ತಾದರೂ,ಅವರು ಸಂತೋಷ್‌ ಅವರ ಪ್ರಭಾವಳಿಯನ್ನು ನಿರೀಕ್ಷಿತ ಮಟ್ಟದಲ್ಲಿ ಕುಗ್ಗಿಸಲು ವಿಫಲರಾದರು.

    ಈ ಮಧ್ಯೆ ಸಧ್ಯದ ಆಪರೇಷನ್‌ ಕಮಲ ಕಾರ್ಯಾಚರಣೆ ಯಶಸ್ವಿಯಾಗುವ ಲಕ್ಷಣಗಳು ಕಂಡು ಬರುತ್ತಿದ್ದಂತೆಯೇ ಯಡಿಯೂರಪ್ಪ ಅವರು, ರಾಜ್ಯದಲ್ಲಿ ಬಿಜೆಪಿ ನೆಮ್ಮದಿಯಾಗಿರಬೇಕು ಎಂದರೆ ಸಂತೋಷ್‌ ಅವರನ್ನು ಇಲ್ಲಿಂದ ಎತ್ತಂಗಡಿ ಮಾಡಬೇಕು ಎಂದು ವರಿಷ್ಠರ ಮುಂದೆ ಬೇಡಿಕೆ ಮಂಡಿಸಿದ್ದರು ಎಂದು ಮೂಲಗಳು ಹೇಳಿವೆ.

    ಯಡಿಯೂರಪ್ಪ ಅವರ ಸತತವಾದ ಹಾಗೂ ತಾವೇ ತರಿಸಿದ ವರದಿಯ ಆಧಾರದ ಮೇಲೆ ವಿರುದ್ಧ ಧ್ರುವಗಳಂತಿರುವ ಯಡಿಯೂರಪ್ಪ ಹಾಗೂ ಸಂತೋಷ್‌ ಒಂದೇ ಕಡೆ ಇರುವುದು ಡೇಂಜರ್‌ ಎಂಬ ನಿರ್ಧಾರಕ್ಕೆ ಬಂದಿದ್ದಾರೆ

     ಇದೇ ಕಾರಣಕ್ಕಾಗಿ ಯಡಿಯೂರಪ್ಪ ಇಲ್ಲಿಗೆ, ಸಂತೋಷ್‌ ದಿಲ್ಲಿಗೆ ಎಂಬ ಸೂತ್ರವನ್ನುಜಾರಿಗೊಳಿಸಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಅವರು ಇದೀಗ ಸಂತೋಷ್‌ ಅವರನ್ನು ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದ್ದಾರೆ.ಈ ಬೆಳವಣಿಗೆ ಯಡಿಯೂರಪ್ಪ ಅವರ ದಾರಿಗೆ ಇನ್ನು ಯಾವುದೇ ಅಡ್ಡಿಯಿಲ್ಲ ಎಂಬ ಸಂದೇಶ ರವಾನಿಸಿದ್ದರೆ,ಅದೇ ಕಾಲಕ್ಕೆ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಉರುಳುವುದು ಬಹುತೇಕ ಖಚಿತ ಎಂಬ ಬಿಜೆಪಿ ವರಿಷ್ಠರ ಆತ್ಮವಿಶ್ವಾಸದ ಸಂಕೇತವೂ ಆಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap