ಚಳ್ಳಕೆರೆ
ನ್ಯಾಯಾಲಯಕ್ಕೆ ಬರುವ ಕಕ್ಷಿದಾರರಿಗೆ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಕಾರ್ಯವನ್ನು ನ್ಯಾಯಾಂಗ ಇಲಾಖೆ ಕಳೆದ ಹಲವಾರು ದಶಕಗಳಿಂದ ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಆದರೆ, ಈಗ ನ್ಯಾಯಾಂಗ ಇಲಾಖೆ ಕಕ್ಷಿದಾರರ ಸಮಸ್ಯೆಗಳ ಹೊರತಾಗಿ ಸಾಮಾಜಿಕ ಸಮಸ್ಯೆಗಳ ಬಗ್ಗೆಯೂ ಸಹ ಗಮನಹರಿಸುವಲ್ಲಿ ಮುಂದಾಗಿದೆ. ಜನರ ಕಲ್ಯಾಣಕ್ಕಾಗಿ ನ್ಯಾಯಾಂಗ ಇಲಾಖೆ ಹಲವಾರು ಕಾರ್ಯಕ್ರಮವನ್ನು ರೂಪಿಸಿದ್ದು ಇದರ ಪೂರ್ಣಪ್ರಮಾಣದ ಪ್ರಯೋಜನವನ್ನು ಪಡೆಯುವಲ್ಲಿ ಸಾರ್ವಜನಿಕರು ಮುಂದಾಗಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರು, ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾದ ಎಸ್.ಆರ್.ದಿಂಡಲಕೊಪ್ಪ ತಿಳಿಸಿದರು.
ಅವರು, ಶನಿವಾರ ಇಲ್ಲಿನ ರೋಟರಿ ಬಾಲಭವನದಲ್ಲಿ ವಿಧಾವ ಕೋಶ, ಬಾಲ್ಯ ವಿವಾಹ ನಿಷೇದ ಕಾಯ್ದೆ, ಪೌಷ್ಠೀಕಾಹಾರ ಸಪ್ತಾಹ, ಆತ್ಮಹತ್ಯೆ ತಡೆ ಮತ್ತು ಓಬವ್ವ ಪಡೆ ಕಾರ್ಯದಕ್ಷತೆಯ ಕುರಿತು ಹಮ್ಮಿಕೊಂಡಿದ್ದಕಾನೂನು ಅರಿವು ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ನ್ಯಾಯಾಂಗ ಇಲಾಖೆ ಇತ್ತೀಚಿನ ದಿನಗಳಲ್ಲಿ ಸಮಾಜದ ಕೆಲವೊಂದು ವರ್ಗಗಳ ಸಮಸ್ಯೆಗಳ ಬಗ್ಗೆ ತೀರ್ವ ಗಮನಹರಿಸುತ್ತಿದೆ. ವಿಶೇಷವಾಗಿ ಮಹಿಳಾ ಸಮುದಾಯಕ್ಕೆ ರಕ್ಷಣೆಯ ಜೊತೆಗೆ ಜಾಗೃತಿಯನ್ನು ಮೂಡಿಸುವಲ್ಲಿ ನ್ಯಾಯಾಂಗ ಇಲಾಖೆ ಯಶಸ್ಸಿಯಾಗಿದೆ. ಆದರೆ, ಗ್ರಾಮೀಣ ಭಾಗಗಳಲ್ಲಿ ವಿಧಾವ ಮಹಿಳೆಯರೂ ಸೇರಿದಂತೆ ಹಲವಾರು ವರ್ಗಗಳ ಜನರು ಕಾನೂನಿನಿಂದ ಆಗುವ ಪ್ರಯೋಜನಗಳ ಬಗ್ಗೆ ಮಾಹಿತಿಯ ಕೊರತೆಯಿಂದ ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಈ ಹಿನ್ನೆಲೆಯಲ್ಲಿ ಜಾಗೃತಿ ಮೂಡಿಸಲು ಇಂತಹ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದರು.
ಅಪರ ಸಿವಿಲ್ ನ್ಯಾಯಾಧೀಶ ಕೋಟೆಪ್ಪ ಕಾಂಭ್ಳೆ ಮಾತನಾಡಿ, ಮಹಿಳೆಯರ ಮೇಲೆ ಮತ್ತು ಅಪ್ರಾಪ್ತ ಬಾಲಕಿಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳು ನಿಯಂತ್ರಿಸಬೇಕಾದಲ್ಲಿ ಪ್ರತಿಯೊಬ್ಬ ಮಹಿಳೆಯೂ ಕಾನೂನಿನ ಮಹತ್ವವನ್ನು ಅರಿಯಬೇಕಿದೆ. ಕಾನೂನಿನಲ್ಲಿ ಮಹಿಳೆಯರಿಗೆ ಹೆಚ್ಚಿನ ರಕ್ಷಣೆ ನೀಡುವ ಎಲ್ಲಾ ರೀತಿಯ ಅಂಶಗಳಿದ್ದರೂ ಸಹ ಮಹಿಳೆಯರು ಮುಂದೆ ಬರುತ್ತಿಲ್ಲ. ದೌರ್ಜನ್ಯ ವೆಸಗಿದ ವ್ಯಕ್ತಿಗೆ ಕಾನೂನಿನಡಿ ಶಿಕ್ಷೆಯಾದಲ್ಲಿ ಮಾತ್ರ ಕಾನೂನಿನ ಮೌಲ್ಯ ಹೆಚ್ಚುತ್ತದೆಯಲ್ಲದೆ, ತಪ್ಪುಗಳು ಸಂಪೂರ್ಣವಾಗಿ ನಿಯಂತ್ರಣವಾಗುತ್ತದೆ. ಅದ್ದರಿಂದ ಮಹಿಳೆಯರು ಬಾಲಕಿಯರು ಮತ್ತು ಯುವತಿಯರು ತಮ್ಮ ಮೇಲೆ ನಡೆಯುವ ದೌರ್ಜನ್ಯಗಳನ್ನು ಸಂಪೂರ್ಣವಾಗಿ ತೊಡೆದು ಹಾಕಬೇಕಾದಲ್ಲಿ ಕಾನೂನಿನ ಸಹಾಯಕ ಪಡೆಯಬೇಕು. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯ ಮೇಲೆ ನಡೆಯುವ ಹತ್ತಿಕ್ಕಲು ಓಬವ್ವ ಪಡೆ ಅಸ್ಥಿತ್ವಕ್ಕೆ ಬಂದಿದ್ದು, ಇದರ ಸಹಾಯವನ್ನು ಸಹ ಪಡೆದುಕೊಳ್ಳಿ ಎಂದರು.
ನೂತನ ನ್ಯಾಯಾಧೀಶೆ ಸಿ.ಎನ್.ಮುನಿರತ್ನಮ್ಮ ಮಾತನಾಡಿ, ಸಮಾಜ ಮತ್ತು ನಮ್ಮ ಸಂಸ್ಕøತಿ ಮಹಿಳೆಯರಿಗೆ ಮಾತೃ ಸ್ಥಾನವನ್ನು ನೀಡುವ ಮೂಲಕ ಮಹಿಳೆಯ ಗೌರವ ಹೆಚ್ಚಿಸಿದೆ. ಸಹನಾ ಮತ್ತು ಶಾಂತಿ ಮೂರ್ತಿಯಾದ ಮಹಿಳೆಯ ಗೌರವಕ್ಕೆ ದಕ್ಕೆಯಾಗದಂತೆ ಜಾಗೃತೆ ವಹಿಸಬೇಕಾಗಿದೆ. ಪತಿಯೂ ಸೇರಿದಂತೆ ಸಮಾಜದ ಯಾವುದಾದರೂ ಶಕ್ತಿ ಮಹಿಳೆಯ ಮೇಲೆ ದೌರ್ಜನ್ಯವೆಸದಗಿದಲ್ಲಿ ಕೂಡಲೇ ಮಾಹಿತಿ ನೀಡಿದಲ್ಲಿ ಪೊಲೀಸರು ಕ್ರಮ ಕೈಗೊಂಡು ರಕ್ಷಣೆ ನೀಡುತ್ತಾರೆ. ವಿಶೇಷವಾಗಿ ನಾನಾ ಕಾರಣಗಳಿಂದಾಗಿ ಮಹಿಳೆ ವಿಧವೆಯಾದಾಗ ಅವಳ ಸಮಸ್ಯೆಗೆ ಕಾನೂನಿನಲ್ಲಿ ಪರಿಹಾರವಿದ್ದು ಅದನ್ನು ಪಡೆದುಕೊಳ್ಳುವಲ್ಲಿ ಮುಂದಾಗಬೇಕು ಎಂದರು.
ಆತ್ಮಹತ್ಯೆಯ ಬಗ್ಗೆ ಮಾತನಾಡಿದ ಮನೋರೋಗ ತಜ್ಞ ಡಾ.ಮಂಜುನಾಥ, ರಾಜ್ಯದಲ್ಲಿ 10 ಕೋಟಿಗೂ ಹೆಚ್ಚು ಆತ್ಮಹತ್ಯೆಗಳು ನಡೆಯುತ್ತಿವೆ. ಆತ್ಮಹತ್ಯೆಗೆ ಮೂಲ ಕಾರಣ ನಮ್ಮಲ್ಲಿರುವ ಮನೋದೌರ್ಬಲ್ಯ. ಸಾಮಾನ್ಯವಾಗಿ ಮಹಿಳೆ ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಆತ್ಮಹತ್ಯೆಗೆ ಶರಣಾಗುತ್ತಾಳೆ. ಇತ್ತೀಚಿನ ದಿನಗಳಲ್ಲಿ ಪುರುಷರೂ ಸಹ ಇದೇ ಹಾದಿಯನ್ನು ತುಳಿದಿದ್ಧಾರೆ. ಆದರೆ, ಆತ್ಮಹತ್ಯೆಯನ್ನು ನಡೆಯುವಲ್ಲಿ ನಾವೆಲ್ಲರೂ ಮುಂದಾಗಬೇಕಿದೆ. ಆತ್ಮಹತ್ಯೆ ಯತ್ನಿಸುವ ವ್ಯಕ್ತಿಯ ಬಗ್ಗೆ ಮಾಹಿತಿ ಸಂಗ್ರಹಿಸಿ ಅವನನ್ನು ಜಾಗೃತಿಗೊಳಿಸಿ ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆಯಬೇಕಿದೆ. ಆತ್ಮಹತ್ಯೆಗಳ ಪ್ರಕರಣಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಮುಂದಾಗಿದ್ದು, ಸಾರ್ವಜನಿಕರ ಸಹಕಾರವನ್ನು ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಿವಿಲ್ ನ್ಯಾಯಾಧೀಶ ದೇವೇಂದ್ರ ಪಂಡಿತ್ ಮಾತನಾಡಿ, ಮಹಿಳೆಯರಲ್ಲಿ ಉಂಟಾಗುವ ಅನೇಕ ಸಮಸ್ಯೆಗಳು ಪರಿಹಾರವನ್ನು ಕಾಣದೆ ಮಹಿಳಾ ವರ್ಗ ಪರಿತಪಿಸುತ್ತದೆ. ನ್ಯಾಯಾಂಗ ಇಲಾಖೆ ಹಾಗೂ ಕಾನೂನು ಸೇವಾ ಪ್ರಾಧಿಕಾರ ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸುತ್ತಾದರೂ ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಲು ಮಹಿಳೆಯರು ಮುಂದಾಗುತ್ತಿಲ್ಲ. ಕಾನೂನಿನಲ್ಲಿ ಎಲ್ಲಾ ರೀತಿಯ ಶಕ್ತಿ ಹಾಗೂ ಸಾಮಥ್ರ್ಯಗಳಿದ್ದು, ಮಹಿಳೆ ಇವುಗಳನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು. ಮಹಿಳೆ ಅನಗತ್ಯವಾಗಿ ಹೆದರುವ ಸ್ಥಿತಿ ದೂರವಾಗಬೇಕು.
ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಈ ವಿಚಾರದಲ್ಲಿ ಮಹಿಳೆಯರನ್ನು ಹೆಚ್ಚು ಜಾಗೃತಿಗೊಳಿಸಬೇಕು ಎಂದರು.ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿದೇರ್ಶಕ ಕೆ.ಎಸ್.ರಾಜಾನಾಯಕ್ , ನೂತನ ನ್ಯಾಯಾಧೀಶ ಎಸ್.ಕೆ.ಜನಾರ್ಥನ, ವಕೀಲರ ಸಂಘದ ಉಪಾಧ್ಯಕ್ಷ ಡಿ.ಬೋರಯ್ಯ, ಕಾರ್ಯದರ್ಶಿ ಎಚ್.ಹನುಮಂತಪ್ಪ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ, ಸಿಡಿಪಿಒ ಸಿ.ಕೆ.ಗಿರಿಜಾಂಬ, ಪಿಎಸ್ಐ ಕೆ.ಸತೀಶ್ನಾಯ್ಕ, ಆರೋಗ್ಯ ಇಲಾಖೆಯ ಎಸ್.ಬಿ.ತಿಪ್ಪೇಸ್ವಾಮಿ, ಓಬವ್ವ ಪಡೆಯ ಸಿಬ್ಬಂದಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
