ಬೆಂಗಳೂರು:
ನಗರದಲ್ಲಿ ಸುರಿದ ನಾಲ್ಕೈದು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದ ಕೆ.ಆರ್. ಪುರದ ಕಲ್ಕೆರೆ ಕೆರೆಯು ಸಂಪೂರ್ಣ ಕಲುಷಿತಗೊಂಡು ಲಕ್ಷಾಂತರ ಮೀನುಗಳು ಸಾವನ್ನಪ್ಪಿವೆ.
ಮೀನುಗಳ ಸಾವಿನಿಂದ ಕಲ್ಕೆರೆ ಸುತ್ತ-ಮತ್ತಲ ಪ್ರದೇಶದಲ್ಲಿ ದುರ್ವಾಸನೆ ಹರಡಿ ಸ್ಥಳೀಯರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣಗೊಂಡಿದ್ದು ಪಾಳಿಕೆ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತವಾಗಿದೆ.
ಕಳೆದ ನಾಲ್ಕೈದು ದಿನಗಳಿಂದ ಮಳೆಯಿಂದ ಕೆರೆಗೆ ಎಸ್ಟಿಪಿ ನೀರು, ಚರಂಡಿ ಮತ್ತು ರಸಾಯಿನಿಕ ಯುಕ್ತನೀರು ಸೇರಿದ್ದರಿಂದ ಕೆರೆಯಲ್ಲಿದ್ದ ಸಾವಿರಾರು ಮೀನುಗಳು ಸಾವನ್ನಪ್ಪಿ ಟೆಂಡರ್ ಪಡೆದು ಮೀನು ಸಾಕಾಣೆ ಮಾಡುತ್ತಿದ್ದ ಗುತ್ತಿಗೆದಾರರಿಗೆ ನಷ್ಟ ಉಂಟಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸಂಸ್ಕರಿಸದ ಕೊಳಚೆ ನೀರು ಮತ್ತು ಕೈಗಾರಿಕಾ ದ್ರವ ಪದಾರ್ಥಗಳು ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಬೆಳ್ಳಂದೂರು, ವರ್ತೂರು ಕೆರೆಯ ರೀತಿಯಲ್ಲೇ ಕಲ್ಕೆರೆಯಲ್ಲಿಯೂ ನೊರೆ ಸೃಷ್ಟಿಯಾಗಿರುವುದರಿಂದ ಸ್ಥಳೀಯರು ಆತಂಕ ಪಡುವಂತಾಗಿದೆ.ಬೆಳ್ಳಂದೂರು ಕೇರಿಯ ಮಾದರಿಯಲ್ಲೇ ವಿಷಪೂರಿತ ನೀರು ಕೆರೆಗೆ ಸೇರುತ್ತಿರುವುದರಿಂದ ನೊರೆ ಹೆಚ್ಚಾಗಿ ದುರ್ವಾಸನೆ ಬರುತ್ತಿದೆ. ಬೆಳಗಿನ ಸಮಯದಲ್ಲಿ ವಾಯು ವಿಹಾರಕ್ಕೆ ಬರುವವರಿಗೆ ತೊಂದರೆ ಉಂಟಾಗುತ್ತಿದೆ.
ಪಕ್ಕದಲ್ಲಿರುವ ಜಲ ಮಂಡಳಿಯ ಮರುಬಳಕೆಯ ನೀರನ್ನು ನೇರವಾಗಿ ಕೆರೆಗೆ ಬಿಡಲಾಗುತ್ತಿದೆ. ಇದರ ಜೊತೆಗೆ ಒಳಚರಂಡಿಯ ನೀರು ಕೂಡ ಕೆರೆಯನ್ನು ಸೇರುತ್ತಿದೆ. ಮೊನ್ನೆ ಸುರಿದ ಮಳೆಯಿಂದ ಕೆರೆಯಲ್ಲಿ ನೊರೆ ಸೃಷ್ಟಿಯಾಗಿದ್ದು, ನಿನ್ನೆ ಬೆಳಗ್ಗೆ ಸಾವಿರಾರು ಮೀನುಗಳು ಸಾವನ್ನಪ್ಪಿವೆ. ಈ ಕುರಿತು ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದರೂ ಯಾರೂ ಈ ಕಡೆ ಗಮನಹರಿಸಿಲ್ಲ. ಕೆರೆಯಲ್ಲಿ ಮೀನು ಸಾಕಾಣೆ ಮಾಡಲು ಮೀನುಗಾರಿಕೆ ಇಲಾಖೆಯಿಂದ ಗುತ್ತಿಗೆ ಪಡೆದು ಕೆಳದ ತಿಂಗಳು 1 ಲಕ್ಷ ಮರಿಗಳನ್ನು ಬಿಡಲಾಗಿತ್ತು. ಇದೀಗ ಮರಿ ಮೀನುಗಳು ಸಾವಿಗೀಡಾಗಿದ್ದು, ಲಕ್ಷಾಂತರ ರೂ. ನಷ್ಟ ಉಂಟಾಗಿದೆ.
ಕಲುಷಿತ ನೀರು ಸೇರಿರುವುದರಿಂದ ಕೆರೆ ಹಾಳಾಗುತ್ತಿದೆ. ಮೀನು ಸೇರಿದಂತೆ ಮತ್ತಿತರ ಜಲಚರಗಳು ಸಾವನ್ನಪ್ಪುತ್ತಿವೆ. ಇದರಿಂದ ಸುತ್ತಲಿನ ಪರಿಸರ ಕೂಡ ಹಾಳಾಗುತ್ತಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಕೆರೆ ಅತ್ಯಂತ ಸ್ವಚ್ಛವಾಗಿತ್ತು. ಕೆರೆ ನಿರ್ವಹಣೆ ಹೊಣೆ ಹೊತ್ತಿರುವವರು ನಿನ್ನೆ ಬೆಳಗ್ಗೆ ಸತ್ತ ಮೀನುಗಳನ್ನು ಕೆರೆಯಿಂದ ಹೊರ ತೆಗೆಯುವ ಕೆಲಸದಲ್ಲಿ ನಿರತರಾಗಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
