ಹಿರಿಯೂರು :
ಚಿತ್ರದುರ್ಗ ಜಿಲ್ಲೆಯ ಬಹು ನೀರಿಕ್ಷಿತ ಯೋಜನೆಯಾದ ಭದ್ರಾ ಮೇಲ್ದಂಡೆ ಯೋಜನೆಯ ನೀರನ್ನು ಮುಂದಿನ ತಿಂಗಳು ಅಕ್ಟೋಬರ್ 1 ರಂದು ವಿವಿ ಸಾಗರಕ್ಕೆ ನೀರು ಹರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬೆಂಗಳೂರಿನಲ್ಲಿ ಹೇಳಿದರು.
ಇಂದು ಬೆಂಗಳೂರಿನ ಸಿಎಂ ಗೃಹ ಕಛೇರಿ ಕೃಷ್ಣದಲ್ಲಿ ಹಿರಿಯೂರು ಶಾಸಕಿ ಕೆ. ಪುರ್ಣಿಮಾ ಶ್ರೀನಿವಾಸ್ ನೇತೃತ್ವದಲ್ಲಿ ವಿವಿ ಸಾಗರ ಹೋರಾಟ ಸಮಿತಿಯ ಪದಾಧಿಕಾರಿಗಳು ಸಿಎಂ ಭೇಟಿ ಮಾಡಿದ ನಂತರ ಭದ್ರಾ ಕಾಮಗಾರಿ ಕುರಿತು ರೈತರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು ಕಾಮಗಾರಿ ಯಾಕೆ ವಿಳಂಬವಾಗಿದೆ ಎಂದು ಅಧಿಕಾರಿಗಳನ್ನು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಕಾಮಗಾರಿ ವಿಳಂಬಕ್ಕೆ ಸಾಕಷ್ಟು ತೊಡಕುಗಳು ಉಂಟಾಗಿದ್ದರಿಂದ ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸಿ ನೀರು ಹರಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.
ಅಧಿಕಾರಿಗಳು ಯಾವುದೇ ಕಾರಣಗಳನ್ನು ಹೇಳದೆ ಹಗಲು ರಾತ್ರಿ ಎನ್ನದೆ ಶ್ರಮಿಸಿ, ತ್ವರಿತ ಗತಿಯಲ್ಲಿ ಕಾಮಗಾರಿ ಮುಗಿಸಿ, ತಾವು ಹೇಳಿದಂತೆ ವಿವಿ ಸಾಗರಕ್ಕೆ ಅಕ್ಟೋಬರ್ 1. ರಂದು ನೀರು ಹರಿಸಬೇಕು ಇದಕ್ಕೆ ನಾನೆ ಚಾಲನೆ ನೀಡುತ್ತೆನೆ ಎಂದು ಭದ್ರಾ ಅಧಿಕಾರಿಗಳಿಗೆ ಸಿಎಂ ಖಡಕ್ ಸಂದೇಶ ನೀಡಿದರು.
ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕದಲ್ಲಿ ಜಾರಿಗೆ ತಂದ ನೀರಾವರಿ ಯೋಜನೆಗಳು ಎಲ್ಲ ಮುಗಿದಿದ್ದು, ಚಿತ್ರದುರ್ಗದ ಭದ್ರಾ ಯೋಜನೆ ಮಾತ್ರ ಮುಗಿಯದೆ, ಕಾಮಗಾರಿ ವಿಳಂಬವಾಗುತ್ತಿದೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ರೈತರು ಆರೋಪಿಸಿದರು. ಜೊತೆಗೆ ನಿಮ್ಮ ಅಧಿಕಾರ ಅವಧಿಯಲ್ಲಿ ನಿಗದಿಯಾಗಿದ್ದ 5 ಟಿಎಂಸಿ ನೀರನ್ನು ನೀಡಬೇಕೆಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಬಸವರಾಜ್ ಬೋಮ್ಮಾಯಿ ನವರು ನಮ್ಮ ಪಕ್ಷದ ಅಧಿಕಾರದ ಅವಧಿಯಲ್ಲಿ ವಿವಿ ಸಾಗರಕ್ಕೆ 5 ಟಿಎಂಸಿ ನೀರು ನಿಗದಿಯಾಗಿತ್ತು. ಆದರೆ ನಂತರ ಬಂದ ಕಾಂಗ್ರೇಸ್ ಸರ್ಕಾರದಲ್ಲಿ 2 ಟಿಎಂಸಿಗೆ ಕಡಿತಗೊಳಿಸಿದರು.ಹಾಗಾಗಿ ಮೊದಲು ವಿವಿ ಸಾಗರಕ್ಕೆ ನೀರು ಬರಲಿ, ನಂತರ ನಮ್ಮದೆ ಸರ್ಕಾರ ಆಡಳಿತದಲ್ಲಿದ್ದು 5 ಟಿಎಂಸಿ ನೀರು ಹರಿಸಲು ಆದೇಶ ಮಾಡುವುದಾಗಿ ರೈತರಿಗೆ ಭರವಸೆ ನೀಡಿದರು.
ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ, ಹಿರಿಯೂರಿನಲ್ಲಿ ನಾಲ್ಕೈದು ವರ್ಷಗಳಿಂದ ಮಳೆ ಇಲ್ಲದ ಕಾರಣ ಅಂತರ್ಜಲ ಮಟ್ಟ ಕುಸಿದಿದ್ದು, ಹಿರಿಯೂರು ಸತತ ಬರಗಾಲಕ್ಕೆ ತುತ್ತಾಗಿದೆ, ನೀರು ಇಲ್ಲದೆ ತೋಟಗಳು ಒಣಗಿದ್ದು, ನೀರು ಮೇವಿಲ್ಲದೆ ಜಾನುವಾರುಗಳು ತತ್ತರಿಸಿವೆ, ಕುಡಿಯುವ ನೀರಿಗಾಗಿ ಆಹಾಕಾರ ಉಂಟಾಗಿದೆ ಇತ್ತ ರೈತರು ಸಾವಿರಾರು ಅಡಿ ಬೋರ್ ವೆಲ್ ಕೋರೆಸಿದರು ನೀರು ಬರುತ್ತಿಲ್ಲ, ಹಾಗಾಗಿ ತಾವು ಮುಖ್ಯಮಂತ್ರಿಯ ಅವಧಿಯಲ್ಲಿ ಜಾರಿಗೆ ತಂದಿದ್ದ ಭದ್ರಾ ಮೇಲ್ದಂಡೆ ಯೋಜನೆಯನ್ನು ಬಹುಬೇಗ ಪೂರ್ಣಗೊಳಿಸಿ, ತಾವೇ ಭದ್ರಾ ನೀರನ್ನು ವಿವಿ ಸಾಗರಕ್ಕೆ ಹರಿಸಲು ಚಾಲನೆ ನೀಡಬೇಕು ಎಂದು ಸಿಎಂ ಬಿಎಸ್ವೈಗೆ ಶಾಸಕಿ ಕೆ. ಪೂರ್ಣಿಮಾ ಹೇಳಿದರು.
ಈ ಸಂದರ್ಭದಲ್ಲಿ ಸಂಸದ ನಾರಾಯಣಸ್ವಾಮಿ ಯವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಕಾಮಗಾರಿ ವಿಳಂಬಕ್ಕೆ ಅಧಿಕಾರಿಗಳೇ ನೇರ ಹೊಣೆಗಾರರು, ರೈತರಿಗೆ ಭರವಸೆ ನೀಡುವುದನ್ನು ಬಿಟ್ಟು ವಾಸ್ತವ ಸ್ಥಿತಿ ತಿಳಿಸಿ ನೀರು ಹರಿಸಲು ನಿಗದಿತ ಸಮಯವನ್ನು ಸಿಎಂ ಅವರಿಗೆ ತಿಳಿಸಿ ಅದರಂತೆ ನಡೆದುಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ಸಭೆಯಲ್ಲಿ ಶಾಸಕ ಗೂಳಿಹಟ್ಟಿ ಡಿ ಶೇಖರ್, ನಾ.ತಿಪ್ಪೇಸ್ವಾಮಿ, ಭದ್ರಾ ಅಧಿಕಾರಿಗಳು, ಸೇರಿಂದತೆ ಹಿರಿಯೂರಿನ ವಿವಿ ಸಾಗರ ಹೋರಾಟ ಸಮಿತಿಯ ಮುಖಂಡರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
