ಬಾಲ ಪ್ರತಿಭಾ ಪ್ರದರ್ಶನ

ತುಮಕೂರು:

    ಹಾಡು ಹೇಳಲು ಹೊರಟ ಮಕ್ಕಳ ತೊದಲು ನುಡಿಗಳು, ಅವರ ಹಾವಭಾವವನ್ನೇ ವೀಕ್ಷಿಸುತ್ತಿದ್ದ ಪೋಷಕರು, ತಯಾರಿ ಇನ್ನಷ್ಟು ಆಗಬಹುದಿತ್ತಲ್ಲವೇ ಎಂದು ಕೈ ಕೈ ಹಿಸುಕಿಕೊಳ್ಳುತ್ತಿದ್ದ ಅಂಗನವಾಡಿ ಕಾರ್ಯಕರ್ತರು, ಇದೆಲ್ಲದರ ನಡುವೆ ಮಕ್ಕಳು ಸ್ವಚ್ಛಂದವಾಗಿ ಅಭಿನಯಿಸುತ್ತಾ ತಮ್ಮ ಕಲಾ ಪ್ರತಿಭೆ ಪ್ರದರ್ಶಿಸುತ್ತಾ ನೆರೆದಿದ್ದವರಲ್ಲಿ ಒಂದಷ್ಟು ಆಸಕ್ತಿಯನ್ನಂತೂ ಮೂಡಿಸಿದರು.

     ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲ ಭವನ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ನಗರದ ಬಾಲ ಭವನದಲ್ಲಿ 6 ವರ್ಷದೊಳಗಿನ ಅಂಗನವಾಡಿ ಮಕ್ಕಳಿಗಾಗಿ ಆಯೋಜಿಸಿದ್ದ ಬಾಲ ಪ್ರತಿಭಾ ಪ್ರದರ್ಶನದಲ್ಲಿ ನೂರಕ್ಕೂ ಹೆಚ್ಚು ಮಕ್ಕಳು ಆಸಕ್ತಿಯಿಂದಲೇ ಪಾಲ್ಗೊಂಡಿದ್ದವು. ಮಕ್ಕಳನ್ನು ನೋಡಲು ಪೋಷಕರೂ ಬಂದಿದ್ದರು .ಅಂಗನವಾಡಿ ಶಿಕ್ಷಕರು ಮಕ್ಕಳನ್ನು ಕರೆತಂದಿದ್ದರು.

      ತುಮಕೂರು ನಗರ ಮಾತ್ರವಲ್ಲದೆ ತಾಲ್ಲೂಕಿನ ವಿವಿಧ ಕಡೆಗಳಿಂದ ಮಕ್ಕಳನ್ನು ಕರೆಸಲಾಗಿತ್ತು. ವೇದಿಕೆಯ ಅಭಿನಯದ ಕಾರ್ಯಕ್ರಮಗಳು ಮಾತ್ರವಲ್ಲದೆ, ಆಟೋಟ ಕಾರ್ಯಕ್ರಮಗಳು ಗಮನ ಸೆಳೆದವು. ರಂಗಗೀತೆಗಳಿಂದ ಹಿಡಿದು ಚಿತ್ರಗೀತೆಗಳವರೆಗೆ ಮಕ್ಕಳು ಹಾಡಿದವು. ಹಾಡಿಗಿಂತ ಹೆಚ್ಚಾಗಿ ವೇಷಭೂಷಣವೇ ಹೆಚ್ಚು ಗಮನ ಸೆಳೆಯಿತು. ಕಿತ್ತೂರು ರಾಣಿ ಚೆನ್ನಮ್ಮನ ಪಾತ್ರಧಾರಿಗಳು ಹೆಚ್ಚು ಗಮನ ಸೆಳೆದರು. ಸುಭಾಷ್ ಚಂದ್ರಬೋಸ್, ಮಹಾತ್ಮಗಾಂಧೀಜಿ, ಅಕ್ಕಮಹಾದೇವಿ, ಭಗತ್ ಸಿಂಗ್ ಸೇರಿದಂತೆ ವಿವಿಧ ಮಹನೀಯರ ವೇಷಭೂಷಣಗಳು ಹಾಗೂ ಅದಕ್ಕೆ ತಕ್ಕ ಪಾತ್ರ ಅಭಿನಯಗಳು ಮಕ್ಕಳಿಂದಲೇ ಮೂಡಿಬಂದವು.

     ಹೊರಾಂಗಣದಲ್ಲಿ ಓಟದ ಸ್ಪರ್ಧೆ, ಚಿತ್ರ ಬಿಡಿಸುವ ಸ್ಪರ್ಧೆ, ಆಶುಬಾಷಣ ಸ್ಪರ್ಧೆ, ಕ್ವಿಜ್ ಸೇರಿದಂತೆ ಇನ್ನೂ ಹಲವು ಹತ್ತು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಈ ಎಲ್ಲ ಚಟುವಟಿಕೆಗಳಲ್ಲಿ ಮಕ್ಕಳು ಆಸಕ್ತಿಯಿಂದ ಪಾಲ್ಗೊಂಡರಾದರೂ ಎಲ್ಲ ವಿಷಯಗಳಿಗೂ ಸಮರ್ಪಕ ಉತ್ತರ ಮಾತ್ರ ಎಲ್ಲರಿಂದಲೂ ದೊರೆಯಲಿಲ್ಲ. ಆದರೆ ಭಾಗವಹಿಸಿದ ಖುಷಿ, ಅಭಿನಯದ ಹಾವಭಾವಗಳು ಪೋಷಕರು ಮತ್ತು ಅಂಗನವಾಡಿ ಸಿಬ್ಬಂದಿಯ ಮೆಚ್ಚುಗೆಗೆ ಪಾತ್ರವಾದವು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link