ಬೆಂಗಳೂರು
ರಾಜ್ಯದ ಮಹತ್ವಾಕಾಂಕ್ಷೆಯ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕಾರ್ಯಕ್ರಮ-ಬೆಂಗಳೂರು ಟೆಕ್ ಸಮಿಟ್ನ 21ನೇ ಆವೃತ್ತಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದು ಚಾಲನೆ ನೀಡಿದರು.
ಮೂರು ದಿನಗಳ ಈ ಸಮಾವೇಶದಲ್ಲಿ ವಿವಿಧ ದೇಶಗಳ ಉದ್ದಿಮೆದಾರರು ಭಾಗವಹಿಸುತ್ತಿದ್ದಾರೆ. ಸಮಾವೇಶದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ರಾಜ್ಯದಲ್ಲಿ ತಂತ್ರಜ್ಞಾನ ಆವಿಷ್ಕಾರ ಮತ್ತು ಬಳಕೆ ಹೂಡಿಕೆದಾರರಿಗೆ ಭದ್ರ ಬುನಾದಿಯನ್ನು ಒದಗಿಸುತ್ತಿರುವುದು ಸಾಬೀತಾಗಿದೆ. ಜಗತ್ತಿನಲ್ಲೇ ತಂತ್ರಜ್ಞಾನ ಹೂಡಿಕೆಗೆ ಕರ್ನಾಟಕ ಮೊದಲ ಆಯ್ಕೆಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು, ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಚಿವ ಕೆ.ಜೆ.ಜಾರ್ಜ್, ಬೆಳೆಯುತ್ತಿರುವ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನದ ಮಹತ್ವವನ್ನು ಅರಿತಿರುವ ಮೊದಲ ರಾಜ್ಯ ಕರ್ನಾಟಕವಾಗಿದೆ, ಈ ವಲಯಗಳಲ್ಲಿನ ಅಗತ್ಯಗಳಿಗೆ ಅನುಗುಣವಾಗಿ ನೀತಿಗಳನ್ನು ನಿರೂಪಿಸುತ್ತಿದೆ, ಐಟಿ-ಬಿಟಿ, ವಿದ್ಯುನ್ಮಾನ ಹಾಗೂ ಅನಿಮೇಷನ್ ಮತ್ತು ಗೇಮಿಂಗ್ ಕ್ಷೇತ್ರಗಳಲ್ಲಿ ತಲೆದೋರುತ್ತಿರುವ ಅಪಾಯಕಾರಿ ತಂತ್ರಜ್ಞಾನಗಳ ಬಗ್ಗೆ ಗಮನ ಹರಿಸಲಾಗುತ್ತಿದೆ ಎಂದು ಹೇಳಿದರು.
ಈ ವಿಚಿದ್ರಕಾರಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಪರಿಣತಿ ಕೇಂದ್ರಗಳ ಸ್ಥಾಪನೆಗೆ ರಾಜ್ಯ ಸರ್ಕಾರ ಪ್ರಯತ್ನ ನಡೆಸಿದೆ ಎಂದು ಹೇಳಿದ ಸಚಿವ ಜಾರ್ಜ್, ವಿನೂತನ ಕರ್ನಾಟಕ ಎಂಬುದು ಸರ್ಕಾರದ ಈ ವರ್ಷದ ಹೊಸ ಬ್ರ್ಯಾಂಡ್ಆಗಿದೆ, ಆ ಮೂಲಕ ನಾವಿನ್ಯತೆ ಮತ್ತು ಉದ್ಯಮಶೀಲತೆಯಲ್ಲಿ ಕರ್ನಾಟಕವನ್ನು ಜಾಗತಿಕ ನಾಯಕತ್ವ ಸ್ಥಾನಕ್ಕೆ ಕೊಂಡೊಯ್ಯಲಾಗುವುದು ಎಂದು ಹೇಳಿದರು. (ಧ್ವನಿ 22ಸೆಕೆಂಡ್ಸ್) ರಾಜ್ಯದ ಐಟಿ-ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ ಮಾತನಾಡಿ, ಕರ್ನಾಟಕ ದಶಕಗಳ ಕಾಲದಿಂದ ಜ್ಞಾನಮೂಲದ ಉದ್ಯಮಗಳಲ್ಲಿ ಮುಂಚೂಣಿಯಲ್ಲಿದೆ ಎಂದು ಹೇಳಿದರು.
ತಂತ್ರಜ್ಞಾನ ಜನತೆಯ ಸೇರ್ಪಡೆಯನ್ನು ಹೊಂದಿರಬೇಕು ಎಂದ ಅವರು, ಈ ವರ್ಷದ ಈ ಸಮಾವೇಶದಲ್ಲಿ ನಾವಿನ್ಯತೆ ಹಾಗೂ ಪರಿಣಾಮಕ್ಕೆ ಹೆಚ್ಚು ಗಮನ ಹರಿಸಲಾಗಿದೆ ಎಂದು ಹೇಳಿದರು. ರಾಜ್ಯ ಸರ್ಕಾರದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ, ಭಾರತೀಯ ಸಾಫ್ಟವೇರ್ ತಂತ್ರಜ್ಞಾನ ಪಾರ್ಕ್ ಹಾಗೂ ನ್ಯಾಸ್ಕಾಂ, ಐಇಎಸ್ಎ, ಟಿಐಇ, ಎಬಿಎಐ, ಮುಂತಾದವುಗಳ ಸಹಯೋಗದಲ್ಲಿ ಏರ್ಪಾಡಾಗಿರುವ ಸಮಾವೇಶಕ್ಕೆ 11 ದೇಶಗಳ 10ಸಾವಿರಕ್ಕೂ ಹೆಚ್ಚು ಮಂದಿ ಭೇಟಿ ನೀಡುವ ನಿರೀಕ್ಷೆ ಇದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2018/11/KUMARASWAMYsd.gif)