ತುಮಕೂರು
ರಾಜ್ಯದಲ್ಲಿ ಈ ಬಾರಿ ಭೀಕರ ಬರಗಾಲವಿದೆ. ರಾಜ್ಯ ಸರ್ಕಾರ 107 ತಾಲ್ಲೂಕುಗಳನ್ನು ಬರಪಿಡಿತ ತಾಲ್ಲೂಕುಗಳೆಂದು ಘೋಷಿಸಿದೆ. ಬರದಿಂದ ಆಗಿರುವ ನಷ್ವನ್ನು 16.5 ಸಾವಿರ ಕೋಟಿ ಎಂದು ಅಂದಾಜು ಮಾಡಲಾಗಿದೆ. ಬರ ಪರಿಹಾರ ಕಾಮಗಾರಿ ಕೈಗೊಳ್ಳಲು ಕೇಂದ್ರ ಸಕಾರಕ್ಕೆ 2430 ಕೋಟಿ ರೂ ನೀಡಲು ಮನವಿ ಮಾಡಿದ್ದರೂ ಕೊಟ್ಟಿದ್ದು ಮಾತ್ರ 949 ಕೋಟಿ ರೂ., ಪಕ್ಕದ ಮಹಾರಾಷ್ಟ್ರ ರಾಜ್ಯಕ್ಕೆ ಕೇಂದ್ರ ಸರ್ಕಾರ ನಾಲ್ಕು ಸಾವಿರಕ್ಕೂ ಹೆಚ್ಚಿನ ಕೋಟಿ ರೂ ನೀಡಿದೆ ಎಂದು ಉಪ ಮುಖ್ಯ ಮಂತ್ರಿ ಡಾ. ಪರಮೇಶ್ವರ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಗಾ ಯೋಜನೆಯ ಹಣವನ್ನೂ ಕೇಂದ್ರ ಸರ್ಕಾರ ಬಿಡುಗಡೆ ಮಾಡದೆ ಬಾಕಿ ಉಳಿಸಿಕೊಂಡಿದೆ ಎಂದ ಅವರು, ರಾಜ್ಯದ ಬರ ಪರಿಸ್ಥಿತಿ ಬಗ್ಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ ವರದಿ ನೀಡಿದೆ, ಕೇಂದ್ರ ಬರ ಅಧ್ಯಯನ ತಂಡ ಬಂದು ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ನೀಡಿದೆ, ಆದರೂ ಅಗತ್ಯ ಹಣ ಬಿಡುಗಡೆ ಮಾಡಿಲ್ಲ ಎಂದು ಹೇಳಿದರು.
ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಗೆ 50 ಲಕ್ಷ ಮಾನವ ದಿಗಳ ಗುರಿ ನೀಡಲಾಗಿತ್ತು. ಇದರಲ್ಲಿ ಶೇಕಡ 102ರಷ್ಟು ಗುರಿ ಸಾಧನೆಯಾಗಿದೆ. ಇದರಲ್ಲಿ 206 ಕೋಟಿ ರೂ.ಗಳ ಕಾಮಗಾರಿ ಮಾಡಲಾಗಿದೆ. ಕಳೆದ ವರ್ಷದ 80 ಕೋಟಿ ರೂ. ಕೂಲಿ ಹಣ ಬಾಕಿ ಇದೆ, ಅದರಲ್ಲಿ 30 ಕೋಟಿ ರೂಗಳನ್ನು ಇವತ್ತು ನಾಳೆಯೊಳಗೆ ರಾಜ್ಯ ಸರ್ಕಾರ ಬಿಡುಗಡೆ ಮಾಡುತ್ತದೆ. ಆದರೆ ಕೇಂದ್ರ ಸರ್ಕಾರದ 3 ಸಾವಿರ ಕೋಟಿ ರೂ. ನರೇಗಾ ಹಣ ಬಾಕಿ ಇದೆ ಎಂದು ಹೇಳಿದರು.
ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಕಾರಣ ಇಲ್ಲಿಯವರೆಗೂ ಚುನಾವಣಾ ಆಯೋಗ ಸರ್ಕಾರಿ ಕೆಲಸ ಮಾಡಲು ಅನುಮತಿ ನೀಡಿರಲಿಲ್ಲ. ಬರ ನಿರ್ವಹಣೆ ಹಾಗೂ ತುರ್ತು ಕಾರ್ಯ ನಿರ್ವಹಣೆಗೆ ಅವಕಾಶ ನೀಡುವಂತೆ ನಮ್ಮ ರಾಜ್ಯದ ಚುನಾವಣೆ ಮುಗಿದ 18 ಹಾಗೂ 23ರ ನಂತರ ಪರಿಶೀಲಿಸಿ ಎಂದು ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿತ್ತು.
ಬರ ನಿರ್ವಹಣೆಗೆ ಮಾತ್ರ ಅಧಿಕಾರಿಗಳ ಸಭೆ ಕರೆದು ಪರಿಶೀಲನೆ ನಡೆಸಲು ಆಯೋಗ ಅನುಮತಿ ನೀಡಿದ ಮೇರೆಗೆ ತಾವು ಈ ಸಭೆ ಕರೆದುದಾಗಿ ಡಾ. ಪರಮೇಶ್ವರ್ ಹೇಳಿದರು.ಜಿಲ್ಲೆಯ 74 ಗ್ರಾಮ ಪಂಚಾಯ್ತಿಗಳ 122 ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತೀವ್ರ ಬರ ಇದೆ. ಈ ಭಾಗದಲ್ಲಿ ಕೊರೆದ ಕೊಳವೆ ಬಾವಿಗಳಲ್ಲಿ ನೀರು ಲಭ್ಯವಾಗಿಲ್ಲ.
ಇಂತಹ ಹಳ್ಳಿಗಳಲ್ಲಿ ಖಾಸಗಿ ಬೋರ್ವೆಲ್ಗಳಿಂದ ನೀರು ಖರೀದಿಸಿ ವಿತರಿಸಲಾಗುತ್ತಿದೆ. ಈ ಪೈಕಿ ಪಾವಗಡ ತಾಲ್ಲೂಕಿನಲ್ಲಿ ಹೆಚ್ಚು ಸಮಸ್ಯೆ ಇದೆ. ಈ ತಾಲ್ಲೂಕಿನ 21 ಹಳ್ಳಿಗಳಿಗೆ ಟ್ಯಾಂಕರ್ಗಳ ಮೂಲಕ ನೀರು ವಿತರಣೆ ಮಾಡಲಾಗುತ್ತಿದೆ. ತುಮಕೂರು ತಾ. 9, ಗುಬ್ಬಿ ತಾ.ನ 19, ಚಿ ನಾ ಹಳ್ಳಿ ತಾ 4, ಮಧುಗಿರಿ 15, ಕುಣಿಗಲ್ 14, ಕೊರಟಗೆರೆ 10, ತುರುವೇಕೆರೆ 12, ಶಿರಾ 11 ಹಾಗೂ ತಿಪಟೂರು ತಾಲ್ಲೂಕಿನ 7 ಗ್ರಾಮಗಳಿಗೆ ಟ್ಯಾಂಕರ್ಗಳಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಹೇಳಿದರು.
ರಾಜ್ಯದ ಮೈತ್ರಿ ಸರ್ಕಾರ ಸುಭದ್ರವಾಗಿದೆ. ಯಾವುದೇ ಗೊಂದಲವಿಲ್ಲ, ಕೆಲ ಶಾಸಕರು ತಮ್ಮ ಕೆಲಸ ಕಾರ್ಯ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರಬಹುದಷ್ಟೆ. ಮುಖ್ಯಮಂತಿ ಸ್ಥಾನದ ಚರ್ಚೆಸದ್ಯಕ್ಕಿಲ್ಲ. ಅಂತಹ ಯಾವ ಚರ್ಚೆಗಳೂ ಅಧಿಕೃತವಲ್ಲ, ಅದು ಈಗ ಅಪ್ರಸ್ತುತ.
ಡಾ. ಪರಮೇಶ್ವರ್, ಉಪ ಮುಖ್ಯಮಂತ್ರಿ
ಪರಿಶಿಷ್ಟ ಜಾತಿ, ವರ್ಗದ ಅಧಿಕಾರಿಗಳ ಬಡ್ತಿ ಮೀಸಲಾತಿ ಪ್ರಕರಣದ ಬಗ್ಗೆ ಸುಪ್ರೀಂ ನೀಡಿರುವ ಆದೇಶವನ್ನು ಉಪ ಮುಖ್ಯ ಮಂತ್ರಿ ಡಾ. ಪರಮೇಶ್ವರ್ ಸ್ವಾಗತಿಸಿದರು. ಈ ಬಗ್ಗೆ ರಾಜ್ಯ ಸರ್ಕಾರ ಕಾನೂನು ಮಾಡಿರುವುದನ್ನು ನ್ಯಾಯಾಲಯ ಎತ್ತಿ ಹಿಡಿದಿದೆ. ಇಲಾಖೆ ಅಧಿಕಾರಿಗಳೋಂದಿಗೆ ಚರ್ಚಿಸಿ ಮುಂದೆ ಸರ್ಕಾರದಿಂದ ತೆಗೆದುಕೊಳ್ಳಬಹುದಾದ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.
![](https://prajapragathi.com/wp-content/uploads/2019/05/DSC_0006.gif)