ಚಳ್ಳಕೆರೆ
12ನೇ ಶತಮಾನದಲ್ಲಿಯೇ ಮಾನವ ಸಮಾಜಕ್ಕೆ ಧಾರ್ಮಿಕ ವಿಚಾರಗಳತ್ತ ಬೆಳಕು ಚೆಲ್ಲುವ ಮೂಲಕ ಧರ್ಮ ಜ್ಯೋತಿಯನ್ನು ಬೆಳಗಿನ ಮಹಾನ್ ಯೋಗಿ, ವಚನಕಾರ, ಧಾರ್ಮಿಕ ಜಾಗೃತಿಯ ಹರಿಕಾರ ಜಗಜ್ಯೋತಿ ಬಸವೇಶ್ವರರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಪ್ರತಿವರ್ಷದಂತೆ ಈ ವರ್ಷವೂ ಸಹ ಮೇ 7 ರಿಂದ 9ರ ತನಕ ಅದ್ದೂರಿಯಾಗಿ ನಡೆಸಲಾಗುವುದು ಎಂದು ತಾಲ್ಲೂಕು ವೀರಶೈವ ಸಮಾಜ ಸೇವಾ ಸಂಘದ ಅಧ್ಯಕ್ಷ ಎಚ್.ಗಂಗಣ್ಣ ತಿಳಿಸಿದರು.
ಅವರು, ಸೋಮವಾರ ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಪ್ರಸ್ತುತ ವರ್ಷದ ಬಸವ ಜಯಂತಿ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ನೀಡುವ ಸಲುವಾಗಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು. ಮೇ 7 ಮಂಗಳವಾರ ಅಕ್ಷಯ ತೃತೀಯ ದಿನವಾಗಿದ್ದು, ಅಂದು ಬೆಳಗ್ಗೆ 7.30ಕ್ಕೆ ಸಮಾಜದ ಹಿರಿಯ ಮುಖಂಡರಾದ ಡಾ.ಕೆ.ಟಿ.ಸ್ವಾಮಿ ಇವರಿಂದ ಧ್ವಜಾರೋಹಣ ಕಾರ್ಯಕ್ರಮದೊಂದಿಗೆ ಚಾಲನೆ ನೀಡಲಾಗುವುದು, ನಂತರ ಬಸವೇಶ್ವರ ವೃತ್ತಕ್ಕೆ ತೆರಳಿ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಗರದ ಪ್ರಮುಖ ರಸ್ತೆಗಳಲ್ಲಿ ಮೋಟಾರ್ ಬೈಕ್ ರ್ಯಾಲಿ ನಡೆಸಲಾಗುವುದು. ಈ ಕಾರ್ಯಕ್ರಮದಲ್ಲಿ ಸಮಾಜದ ಸರ್ವರೂ ಭಾಗವಹಿಸುವಂತೆ ಮನವಿ ಮಾಡಿದರು.
ಉಪಾಧ್ಯಕ್ಷ ಕೆ.ಎಂ.ಜಗದೀಶ್ ಮಾತನಾಡಿ, ಮೂರು ದಿನಗಳ ಈ ಕಾರ್ಯಕ್ರಮ ನಿಗದಿಪಡಿಸಿದಂತೆ ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆಯಲಿದ್ದು, ಅಧ್ಯಕ್ಷ ಎಚ್.ಗಂಗಣ್ಣ ಮಾರ್ಗದರ್ಶನದಲ್ಲಿ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಕೂಡ್ಲಗಿ ಮಠದ ಶಿವಚಾರ್ಯ ಸ್ವಾಮಿಗಳು ಮೊದಲ ದಿನದ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸುವರು. ವೀರಶೈವ ಸೌಹಾರ್ಥ ಪತ್ತಿನ ಅಧ್ಯಕ್ಷ ಎಸ್.ಜಯಪ್ರಕಾಶ್, ವಿಶ್ವಗುರು ಬಸವ ಸಂಘದ ಕೆನಡಾ ಅಧ್ಯಕ್ಷೆ ಜ್ಯೋತಿಪ್ರಭಾ ಆರ್.ಇಟಗಿ, ಇಸ್ರೋಸಂಶೋಧನಾ ಸಂಸ್ಥೆ ಅಧ್ಯಕ್ಷೆ ವಿಧ್ಯಾಸಾಗರ್, ಡಾ.ಕೆ.ಎಂ.ಜಯಕುಮಾರ್, ಕೆ.ಎಂ.ಅರವಿಂದ್, ಶಂಕರಲಿಂಗಪ್ಪ, ನೌಕರ ಸಂಘದ ಅಧ್ಯಕ್ಷ ಕೆ.ಎಂ.ಜಗದೀಶ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಮಾಜದ ವಿವಿಧ ಮುಖಂಡರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ ಎಂದರು.
ಕಾರ್ಯದರ್ಶಿ ಕೆ.ಈಶ್ವರಪ್ಪ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವೂ ಸಹ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಪ್ರತಿಭಾಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವೀರಶೈವ ಸಮಾಜದ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ವಿಜೇತರಾದವರಿಗೆ ಬಹುಮಾನ ವಿತರಿಸಲಾಗುವುದು, ಜಗಜ್ಯೋತಿ ಬಸವೇಶ್ವರರ ಕಾರ್ಯಸಾಧನೆಗಳ ಬಗ್ಗೆ ಉಪಪ್ರಚಾರ್ಯ ಡಾ.ಜಿ.ವಿ.ರಾಜಣ್ಣನವರಿಂದ ಪ್ರವಚನ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಅಂತಿಮ ದಿನದಂದು ನಗರದ ಪ್ರಮುಖ ರಸ್ತೆಗಳಲ್ಲಿ ಮಂಗಳವಾದ್ಯಗಳೊಂದಿಗೆ ಬೃಹತ್ ಮೆರವಣಿಗೆಯನ್ನು ಸಹ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಬಿ.ಕೆ.ರಾಜಶೇಖರಪ್ಪ, ಸಹ ಕಾರ್ಯದರ್ಶಿ ಎಚ್.ವಿ.ಪ್ರಸನ್ನಕುಮಾರ್, ನಗರಸಭಾ ಸದಸ್ಯ ಕೆ.ಸಿ.ನಾಗರಾಜು, ಖಜಾಂಚಿ ಕೆ.ಬಸವರಾಜು, ನಿರ್ದೇಶಕರಾದ ಬಿ.ಎಸ್.ಶಿವಪುತ್ರಪ್ಪ, ಟಿ.ಪಿ.ರವಿಕುಮಾರ್, ಎಚ್.ಟಿ.ಶಿವಕುಮಾರ್, ಎಸ್.ರೇವಣ್ಣ, ಡಿ.ಎಂ.ತಿಪ್ಪೇಸ್ವಾಮಿ, ಬಿ.ಜಿ.ವೃಷಬೇಂದ್ರಪ್ಪ, ಎನ್.ವಿ.ತಿಪ್ಪೇಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷೆ ಆರ್.ಪದ್ಮನಾಗರಾಜು, ಕಾರ್ಯದರ್ಶಿ ಮಂಜುಳಾನಾಗರಾಜು, ಹೊಸಮನೆಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
