ಸ್ವಯಂ ಪ್ರೇರಣೆಯಿಂದ ಜೀವ ರಕ್ಷಣೆಗೆ ಮುಂದಾಗಿ : ಟಿ.ರಘುಮೂರ್ತಿ

ಚಳ್ಳಕೆರೆ

    ಕಳೆದ ಹತ್ತು ದಿನಗಳ ನಿರಂತರ ಹೋರಾಟದ ಪರಿಣಾಮವಾಗಿ ತಾಲ್ಲೂಕಿನಾದ್ಯಂತ ಎಲ್ಲಿಯೂ ಕೊರೋನಾ ವೈರಾಣು ಹರಡದಂತೆ ಜಾಗ್ರತೆಯನ್ನು ಕೈಗೊಳ್ಳಲಾಗಿದೆ. ಸರ್ಕಾರದ ಸೂಚನೆ ಮೇರೆಗೆ ನಿರಾಶಿತರಿಗೆ ಮತ್ತು ಹೊರ ಜಿಲ್ಲೆಯಿಂದ ಬಂದವರಿಗೆ ಪ್ರತ್ಯೇಕವಾಗಿ ಆಶ್ರಯದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ತಿಳಿಸಿದ್ದಾರೆ.

    ಅವರು, ಸೋಮವಾರ ಪತ್ರಿಕೆಯೊಂದಿಗೆ ಮಾತನಾಡಿ, ಕೊರೋನಾ ವೈರಾಣು ನಿಯಂತ್ರಣ ಹಿನ್ನೆಲೆಯಲ್ಲಿ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಭೆ ನಡೆಸಿ ಎಲ್ಲರಿಗೂ ಕೊರೋನಾ ನಿಯಂತ್ರಣದ ಬಗ್ಗೆ ಮಾಹಿತಿ ನೀಡಿ ಈ ತಾಲ್ಲೂಕಿನಲ್ಲಿ ಎಲ್ಲೂ ಸಹ ಈ ರೋಗ ವ್ಯಾಪಿಸದಂತೆ ಬಿಗಿ ಕ್ರಮ ಕೈಗೊಳ್ಳಲಾಗಿದೆ. ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದು, ಹೊರ ದೇಶದಿಂದ ಬಂದ 14 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. 205 ಹೊರ ರಾಜ್ಯಗಳಿಂದ ಬಂದವರನ್ನು ಪ್ರತ್ಯೇಕವಾಗಿ ಇರಿಸಿ ಅವರಿಗೆ ಸೂಕ್ತ ವ್ಯಕ್ತ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.

      ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ, ಡಿವೈಎಸ್ಪಿ ಎಸ್.ರೋಷನ್ ಜಮೀರ್, ಆರೋಗ್ಯಾಧಿಕಾರಿ ಡಾ.ಎನ್.ಪ್ರೇಮಸುಧಾ, ಕಾರ್ಯನಿರ್ವಹಣಾಧಿಕಾರಿ ಶ್ರೀಧರ್ ಐ.ಬಾರಿಕೇರ್, ಪೌರಾಯುಕ್ತ ಪಿ.ಪಾಲಯ್ಯ ಸೇರಿದಂತೆ ಹಲವಾರು ಅಧಿಕಾರಿಗಳು ನಿರಂತರ ಸಂಪರ್ಕವಿಟ್ಟುಕೊಂಡು ಸಾರ್ವಜನಿಕರಲ್ಲಿ ಕಾಲ ಕಾಲಕ್ಕೆ ಎಚ್ಚರಿಕೆ ನೀಡಿ ಕೊರೋನಾ ವೈರಾಣು ನಿಯಂತ್ರಣಕ್ಕೆ ಸಾಕಷ್ಟು ಶ್ರಮಿಸಿದ್ಧಾರೆ. ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಇಲಾಖೆಯ ಕೆಲಸ ಕಾರ್ಯಗಳನ್ನು ಬದಗಿಟ್ಟು ಇದರ ನಿಯಂತ್ರಣಕ್ಕೆ ಪ್ರಥಮ ಆದ್ಯತೆ ನೀಡುತ್ತಿದ್ದಾರೆ. ಪೊಲೀಸ್ ಇಲಾಖೆಯೂ ಸಹ ಸಾರ್ವಜನಿಕರು ಮತ್ತು ವಾಹನಗಳು ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸದಂತೆ ತಡೆಯೊಡ್ಡುವಲ್ಲಿ ಯಶಸ್ವಿಯಾಗಿದ್ಧಾರೆ. ನಿತ್ಯದ ಅವಶ್ಯಕತೆಗಳಾದ ಹಾಲು, ಪತ್ರಿಕೆ, ಕಿರಾಣಿ ಹಾಗೂ ತರಕಾರಿ ಸಾಮಾನು ಯಾವುದೇ ನಿರ್ಬಂಧವಿಲ್ಲದೆ ಜನರಿಗೆ ದೊರೆಯುತ್ತಿದೆ ಎಂದರು.

    ಕೊರೋನಾ ವೈರಾಣು ನಿಯಂತ್ರಣಕ್ಕೆ ಜನರ ಸಹಕಾರ ಅತಿಮುಖ್ಯವಾಗಿದ್ದು, ಯಾರೂ ಸಹ ಮನೆಯಿಂದ ಹೊರಗೆ ಬಾರದಂತೆ ಮನೆಯೊಳಗೆ ಇದ್ದುಕೊಂಡೆ ಕೊರೋನಾ ವೈರಾಣು ನಮ್ಮ ದೇಹ ಪ್ರವೇಶಿಸಲು ಅವಕಾಶ ಮಾಡಿಕೊಡಬಾರದು ಎಂದು ಎಲ್ಲರನ್ನು ಕೈಮುಗಿದು ವಿನಂತಿಸುವುದಾಗಿ ಅವರು ತಿಳಿಸಿದ್ಧಾರೆ. ಮುಂದಿನ ಭವಿಷ್ಯದ ಹಿತದೃಷ್ಠಿಯಿಂದ ಸರ್ವರೂ ನಿಯಮವನ್ನು ಪಾಲಿಸಬೇಕೆಂದು ಮನವಿ ಮಾಡಿದ್ಧಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link