ಶಿವಮೊಗ್ಗ
ಆಗಾಗ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಲ್ಲಿರುವ ಮಾಜಿ ಶಾಸಕ ಶ್ರೀ ಬೇಳೂರು ಗೋಪಾಲ ಕೃಷ್ಣ ಅವರು ಚಕ್ರವರ್ತಿ ಸೂಲಿಬೆಲೆ, ಸಂಸದ ತೇಜಸ್ವಿ ಸೂರ್ಯ ಹಾಗೂ ಬಿಜೆಪಿ ಕುರಿತು ಹೇಳಿಕೆ ನೀಡಿ ಮತ್ತೆ ವಿವಾದಕ್ಕೆ ಸಿಲುಕಿದ್ದಾರೆ.
“ಚಕ್ರವರ್ತಿ ಸೂಲಿಬೆಲೆ ಹಾಗೂ ತೇಜಸ್ವಿ ಇಬ್ಬರೂ ಕೇಂದ್ರ ಸರ್ಕಾರದ ಬಗ್ಗೆ ಹೊಗಳಿ ಮಾತನಾಡುತ್ತಾರೆ. ಮೋದಿ ಪ್ರಧಾನಿಯಾದ ಬಳಿಕ ಸೈನಿಕರು ಸತ್ತಿಲ್ಲವೇ? ಪುಲ್ವಾಮಾ ದಾಳಿಯಲ್ಲೇ 40ಕ್ಕೂ ಹೆಚ್ಚು ಸೈನಿಕರು ಮೃತಪಟ್ಟಿದ್ದಾರೆ. ಇವರಿಬ್ಬರೂ ಈರುಳ್ಳಿ ಬೆಲೆ 200 ರೂಪಾಯಿ ತಲುಪಿದಾಗ ಎಲ್ಲಿಗೆ ಹೋಗಿದ್ದರು? ಏಕೆ ಏನನ್ನೂ ಮಾತನಾಡಲಿಲ್ಲ” ಎಂದು ಕಿಡಿಕಾರಿದ್ದಾರೆ.
“ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಗಗನಕ್ಕೇರಿದರೂ ಇವರು ತುಟಿ ಬಿಚ್ಚುತ್ತಿಲ್ಲ. ಇದೇನಾ ಅಚ್ಛೇ ದಿನ್? ಎಸ್.ಎಲ್. ಭೈರಪ್ಪ ಬಿಜೆಪಿ ಏಜೆಂಟ್. ಹಾಗಾಗಿಯೇ ಅವರ ಹೆಸರಿನಲ್ಲಿ ಬಜೆಟ್ ನಲ್ಲಿ ಐದುಕೋಟಿ ಮೀಸಲಿಟ್ಟಿದ್ದಾರೆ. ಯಾವುದೇ ವ್ಯಕ್ತಿ ಸತ್ತ ಮೇಲೆ ಅವರ ಅಂತ್ಯಸಂಸ್ಕಾರಕ್ಕೆ ಹಣ ನೀಡುವುದನ್ನು ನೋಡಿದ್ದೇನೆ. ಆದರೆ ಭೈರಪ್ಪ ಅವರ ಗ್ರಾಮಕ್ಕೆ ಯಾವ ಉದ್ದೇಶಕ್ಕೆ ಹಣ ನೀಡಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಉತ್ತರ ಕರ್ನಾಟಕದಲ್ಲಿ ಶಾಲೆಗಳೇ ಇಲ್ಲ. ಭೈರಪ್ಪ ಅವರ ಊರಿಗೆ ನೀಡಿದ ಅನುದಾನವನ್ನು ಉತ್ತರ ಕರ್ನಾಟಕದ ಶಾಲೆಗಳಿಗೆ ನೀಡಬಹುದಿತ್ತು” ಎಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ