“ನಲಿಯೋಣ ಬಾರಾ” ಮಕ್ಕಳ ಬೇಸಿಗೆ ರಂಗ ತರಬೇತಿ ಶಿಬಿರ

ಹೊನ್ನಾಳಿ:

       ಮಕ್ಕಳ ಕ್ರಿಯಾತ್ಮಕ ಚಟುವಟಿಕೆಗಳು, ಸೃಜನಶೀಲತೆಗೆ ಬೇಸಿಗೆ ಶಿಬಿರಗಳು ಸಹಕಾರಿ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಎಚ್.ಎಸ್. ಉಮಾಶಂಕರ್ ಹೇಳಿದರು.

       ಪಟ್ಟಣದ ದುರ್ಗಿಗುಡಿ ಬಡಾವಣೆಯ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಬುಧವಾರ ನೀನಾಸಂ ರಂಗ ತಜ್ಞರು, ಮೈಸೂರಿನ ನಾಟ್ಯಲೇಖ ರಂಗತಂಡಗಳ ಸಹಯೋಗದಲ್ಲಿ ಹೊನ್ನಾಳಿಯ ಮಾಸ್ಟರ್ ಮೈಂಡ್ಸ್ ಅಬಾಕಸ್ ಅಕಾಡೆಮಿಯ ವತಿಯಿಂದ ಹಮ್ಮಿಕೊಂಡ “ನಲಿಯೋಣ ಬಾರಾ” ಮಕ್ಕಳ ಬೇಸಿಗೆ ರಂಗ ತರಬೇತಿ ಶಿಬಿರವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

      ಪಠ್ಯದ ಹೊರತಾಗಿ ಬೇರೆ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಬೇಸಿಗೆ ಶಿಬಿರಗಳು ಸಹಕಾರಿ. ವರ್ಷದ ಹತ್ತು ತಿಂಗಳುಗಳಲ್ಲಿಯೂ ಮಕ್ಕಳು ಶಾಲೆಗಳಲ್ಲಿ ಓದು, ಬರಹಗಳನ್ನೊಳಗೊಂಡ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿರುತ್ತಾರೆ. ಆದರೆ, ಇಂಥ ಶಿಬಿರಗಳಲ್ಲಿ ಮಕ್ಕಳಿಗೆ ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಕಲಿಯುವ ವಾತಾವರಣ ಲಭಿಸುತ್ತದೆ. ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಇದು ಸಹಕಾರಿ ಎಂದು ತಿಳಿಸಿದರು.

         ಇತ್ತೀಚಿನ ಮಕ್ಕಳು ಹೆಚ್ಚು ಸೃಜನಶೀಲರಾಗಿದ್ದಾರೆ. ಬಹಳ ಚಟುವಟಿಕೆಗಳಿಂದ ಮನೆಗಳಲ್ಲಿ ಎಲ್ಲರ ಗಮನ ಸೆಳೆಯುತ್ತಾರೆ. ಮಕ್ಕಳನ್ನು ಸಹಿಸಿಕೊಳ್ಳುವುದು ಪೋಷಕರಿಗೆ ಸವಾಲಿನ ಕೆಲಸವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಈ ವೇಗಕ್ಕೆ ಸರಿಯಾದ ಮಾರ್ಗದರ್ಶನ ಮಕ್ಕಳ ಬೇಸಿಗೆ ಶಿಬಿರಗಳಲ್ಲಿ ಲಭಿಸುತ್ತದೆ. ಬೇಸಿಗೆ ಶಿಬಿರಗಳು ಮಕ್ಕಳನ್ನು ಸಮಾಜಮುಖಿಯಾಗಿಸಲು ಸಹಕಾರಿಯಾಗುತ್ತವೆ .

          ಸಾಮಾಜಿಕ, ಶೈಕ್ಷಣಿಕ ಮತ್ತಿತರ ಆಯಾಮಗಳಲ್ಲಿ ಮಗುವಿನ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ವಿವರಿಸಿದರು.ಶಿಬಿರಗಳಲ್ಲಿ ಮಕ್ಕಳಿಗೆ ವಿವಿಧ ತರಬೇತಿ ನೀಡಲಾಗುತ್ತದೆ. ಕಲಿಕೆಯಲ್ಲಿ ಮಗುವಿಗೆ ಪುಷ್ಟೀಕರಣ, ಪುನರ್ಬಲನ ಅಗತ್ಯವಾಗುತ್ತದೆ. ಮಕ್ಕಳ ಕಲಿಕೆಗೆ ವಿಶಿಷ್ಟ ಆಸ್ಥೆ ವಹಿಸುವ ಕಾರ್ಯ ಮಾಡಲಾಗುತ್ತದೆ. ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಪ್ರೇರಣೆ, ಪ್ರಚೋದನೆ, ಸ್ಫೂರ್ತಿ ತುಂಬುವ ಕೆಲಸ ಆಗಬೇಕು. ಆಗ ಮಗು ತನಗರಿವಿಲ್ಲದಂತೆಯೇ ಕಲಿಕೆಯಲ್ಲಿ ಆಸಕ್ತಿ ಹೊಂದುತ್ತದೆ. ಅದು ಇಲ್ಲಿ ಸಾಧ್ಯ. ಹಾಗಾಗಿ, ಎಲ್ಲರೂ ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

         ಶಿವಮೊಗ್ಗ ಜಿಲ್ಲೆ ಹೊಸನಗರದ ಹಿರಿಯ ರಂಗಕರ್ಮಿ ವಿ. ಶಾಂತಾರಾಮ್ ಕಾರ್ಗಡಿ ಮಾತನಾಡಿ, ಮಗುವಿನ ಮಾನಸಿಕ ಬೆಳವಣಿಗೆಗೆ ಮಾತ್ರ ಪಠ್ಯ ಸಹಕಾರಿಯಾಗಿದೆ. ಆದರೆ, ಸಮಾಜದಲ್ಲಿ ಬದುಕಲು ದೈಹಿಕ ಕ್ಷಮತೆ ಅತಿ ಮುಖ್ಯವಾಗುತ್ತದೆ. ಇದರಂಥ ಇನ್ನೂ ಅನೇಕ ಕೌಶಲಗಳನ್ನು ಇಲ್ಲಿ ಕಲಿಸಲಾಗುತ್ತದೆ. ಇದನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

       ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ಅಧ್ಯಕ್ಷ ಎಚ್.ಸಿ. ಮೃತ್ಯುಂಜಯ ಪಾಟೀಲ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳನ್ನು ಬೆಳೆಸುವುದು ಪೋಷಕರಿಗೆ ಸವಾಲಿನ ಕೆಲಸವಾಗಿದೆ. ಶಾಲಾ ರಜಾ ದಿನಗಳಲ್ಲಂತೂ ಅದು ಇನ್ನೂ ಕಷ್ಟದ ಕೆಲಸ. ಮಕ್ಕಳಿಗೆ ಅನವಶ್ಯಕವಾಗಿ ಮೊಬೈಲ್ ಫೋನ್‍ಗಳನ್ನು ನೀಡಬಾರದು. ವ್ಯಕ್ತಿತ್ವ ವಿಕಸನದಂಥ ಕೆಲಸಗಳಲ್ಲಿ ಅವರನ್ನು ತೊಡಗಿಸಬೇಕು ಎಂದು ತಿಳಿಸಿದರು.

       ನೀನಾಸಂ ಕಲಾವಿದ, ಗದಗ ನಗರದ ಸಂತೋಷ್‍ಕುಮಾರ್ ಮೆಳ್ಳಿ, ಐಟಿಐ ಕಾಲೇಜು ಉಪನ್ಯಾಸಕ ರಾಮಚಂದ್ರ ಕಡೇಮನಿ ಮತ್ತಿತರರು ಮಾತನಾಡಿದರು.ಮಾಸ್ಟರ್ ಮೈಂಡ್ಸ್ ಅಬಾಕಸ್ ಅಕಾಡೆಮಿಯ ಅಧ್ಯಕ್ಷೆ ಸಿ. ಅನಿತಾ, ಕಾರ್ಯದರ್ಶಿ ಕುಳಗಟ್ಟೆ ಕೋರಿ ಯೋಗೀಶ್, ಸ್ವಾಮಿ ವಿವೇಕಾನಂದ ಶಾಲೆಯ ವಿಜ್ಞಾನ ಶಿಕ್ಷಕ ನಾಗರಾಜ್, ಶಿಕ್ಷಕಿ ಪದ್ಮ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link