ನಮ್ಮ ವಿರುದ್ಧ ನಾಲಗೆ ಹರಿಬಿಟ್ಟರೆ ತಕ್ಕ ಪಾಠ ಕಲಿಸುತ್ತೇವೆ..!

ಸೊಗಡು ಶಿವಣ್ಣರಿಗೆ ಕುರುಬ ಮುಖಂಡರ ಎಚ್ಚರಿಕೆ

ತುಮಕೂರು

     ಹೈಕಮಾಂಡ್ ಓಲೈಕೆಗಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಾಗೂ ಜಿಲ್ಲೆಯ ಕುರುಬ ಮುಖಂಡರ ವಿರುದ್ಧ ನಾಲಿಗೆ ಹರಿಬಿಡುತ್ತಿರುವ ಮಾಜಿ ಸಚಿವ ಸೊಗಡು ಶಿವಣ್ಣ ತಮ್ಮ ಹೇಳಿಕೆಗಳಿಗೆ ಕಡಿವಾಣ ಹಾಕದಿದ್ದರೆ ತಕ್ಕ ಪಾಠ ಕಲಿಸುತ್ತೇವೆ ಎಂದು ಕುರುಬ ಸಂಘಟನೆಗಳ ಒಕ್ಕೂಟ ಹಾಗೂ ಸಿದ್ದರಾಮಯ್ಯ ಅಭಿಮಾನಿಗಳ ಬಳಗದ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

      ಕಾಳಿದಾಸ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಚಿಕ್ಕವೆಂಕಟಯ್ಯ, ಜಿಲ್ಲಾ ಪಂಚಾಯ್ತಿ ಸದಸ್ಯ ಕೊಂಡವಾಡಿ ತಿಮ್ಮಯ್ಯ, ಚಿಕ್ಕನಾಯಕನಹಳ್ಳಿ ಪುರಸಭೆ ಮಾಜಿ ಅಧ್ಯಕ್ಷ ಸಿ. ಡಿ. ಚಂದ್ರಶೇಖರ್ ಮತ್ತಿತರ ಮುಖಂಡರು ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ಮಾತನಾಡಿ, ಸೊಗಡು ಶಿವಣ್ಣರ ವರ್ತನೆ ಖಂಡಿಸಿದರು. ರಾಜಕೀಯದಲ್ಲಿ ಮೂಲೆಗುಂಪಾಗಿರುವ ಸೊಗಡು ಶಿವಣ್ಣ ತಮ್ಮ 20 ವರ್ಷಗಳ ಅಧಿಕಾರವಧಿಯಲ್ಲಿ ಏನು ಮಾಡಿದ್ದಾರೆ, ಹೇಗೆ ನಡೆದುಕೊಂಡಿದ್ದಾರೆ ಎಂಬುದು ಜಿಲ್ಲೆಯ ಜನತೆಗೆ ತಿಳಿದಿದೆ. ಸಜ್ಕನರಾಗಿದ್ದರೆ ಬಿಜೆಪಿ ಹೈಕಮಾಂಡ್ ಇವರನ್ನು ಏಕೆ ಮೂಲೆಗಂಪು ಮಾಡುತ್ತಿತ್ತು.

      ರಾಜಕೀಯವಾಗಿ ನೇಪಥ್ಯಕ್ಕೆ ಸರಿಯುತ್ತಿರುವ ಇವರು ಪ್ರತಿಪಕ್ಷಗಳ ಮುಖಂಡರ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ಕೊಟ್ಟರೆ ಹೈಕಮಾಂಡ್ ಗುರುತಿಸಿ ಸ್ಥಾನ ಮಾನ ನೀಡುತ್ತದೆ ಎಂಬ ಭ್ರಮೆಯಲ್ಲಿದ್ದಾರೆ. ಈ ಭ್ರಮೆಯಲ್ಲಿ ಅಹಿಂದ ವರ್ಗಗಳ ಸರ್ವೋಚ್ಚ ನಾಯಕ, ಕಳಂಕರಹಿತ ರಾಜಕಾರಣಿಯಾಗಿರುವ ಸಿದ್ದರಾಮಯ್ಯರ ಬಗ್ಗೆ ಲಘುವಾಗಿ ಮಾತನಾಡಿದರೆ ನಾವು ಸುಮ್ಮನೆ ಕೂರಲು ಸಾಧ್ಯವಿಲ್ಲ ಎಂದು ಹೇಳಿದರು.

       ಪತ್ರಿಕಾಗೋಷ್ಠಿಗೆ ನಾಗಣ್ಣನವರು ಬಂದಿಲ್ಲ ಏಕೆ ಎಂದು ಪತ್ರಕರ್ತರು ಪ್ರಶ್ನೆ ಮಾಡಿದಾಗ, ನಾಗಣ್ಣನವರು ನಮ್ಮ ಮುಖಂಡರು ಸಂದರ್ಭ ಬಂದಾಗ ಅವರು ಬಂದೇಬರುತ್ತಾರೆ ಎಂದು ಹೇಳಿದರು.

       ಹಿಂದೂಗಳಿಗೆ ಅನ್ಯಾಯವಾದರೆ ತಮ್ಮ ರಕ್ತ ಕುದಿಯುತ್ತದೆ ಎಂದು ಮಾಧ್ಯಮಗಳ ಮುಂದೆ ಬೀಗುತ್ತೀರಲ್ಲ, ದೇಶದಲ್ಲಿ ಸಾವಿರಾರು ದಲಿತ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಆಗಿದೆ, ಹಿಂದುತ್ವ ಪ್ರತಿಪಾದನೆ ಮಾಡಿಕೊಂಡು ಕಾನೂನಿನ ಕುಣಿಕೆಯಲ್ಲಿ ಸಿಲುಕಿರುವ ಹಿಂದುತ್ವವಾದಿಗಳನ್ನು ನೀವೇಕೆ ಬಚ್ಚಿಟ್ಟುಕೊಂಡಿದ್ದೀರಿ. ನಿಮಗೆ ಆಗ ಹಿಂದೂ ಧರ್ಮದ ರಕ್ತ ತಣ್ಣಗಾಗಿತ್ತೆ? ಸಾರ್ವಜನಿಕ ಜೀವನದಲ್ಲಿ ಯಾವುದೇ ಒಬ್ಬ ವ್ಯಕ್ತಿ ನಡೆ, ನುಡಿ ಚೆನ್ನಾಗಿರಬೇಕು. ಆದರೆ ಯಾರನ್ನೋ ಓಲೈಸಿಕೊಳ್ಳುವ ಭರದಲ್ಲಿ ನಾಲಿಗೆ ಹರಿಬಿಟ್ಟರೆ ನೀವು ರಾಜಕೀಯವಾಗಿ ಮತ್ತಷ್ಟು ನೆಲ ಕಚ್ಚುತ್ತೀರಿ ಎಂದು ಹೇಳಿದರು.

      ಸೊಗಡು ಶಿವಣ್ಣ ವಿರುದ್ಧ ಕುರುಬರ ಸಂಘಟನೆಗಳ ಒಕ್ಕೂಟ ನಡೆಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಕುರುಬ ಮುಖಂಡರ ಬಂಡಾರ ಬಿಚ್ಚಿಡುತ್ತೇನೆ ಎಂದು ಹೇಳಿದ್ದಾರೆ. ಬಂಡಾರ ನಮ್ಮ ಸಮುದಾಯದ ತಿಲಕವಿದ್ದಂತೆ, ಮೈಲಾರನ ಆರಾಧಕರಾದ ಕುರುಬರು ಬಂಡಾರವನ್ನು ತಮ್ಮ ಹಣೆಗೆ ಇಟ್ಟುಕೊಳ್ಳುತ್ತಾರೆ. ಕುರುಬರ ಸಾಂಸ್ಕೃತಿಕ ತಿಲಕ ಬಂಡಾರ. ಇದೇ ಕುರುಬ ಸಮುದಾಯದಲ್ಲಿ ಜನಿಸಿರುವ ಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣ ಬ್ರಿಗೆಡ್ ಹೆಸರಿನಲ್ಲಿ ಇದೇ ಬಂಡಾರವನ್ನಿಟ್ಟುಕೊಂಡು ರಾಜಕೀಯ ಬೇಳೆ ಬೇಯಿಸಿಕೊಂಡಿರುವುದನ್ನು ರಾಜ್ಯದ ಜನತೆ ಇನ್ನೂ ಮರೆತಿಲ್ಲ ಎಂಬುದು ನಿಮಗೆ ತಿಳಿದಿರಲಿ. ನಮ್ಮ ಸಂಘಟನೆಗಳು ನಡೆಸಿದ್ದ ಪ್ರತಿಭಟನೆಗೆ ಹಣ ನೀಡಿ ಕುರುಬರನ್ನು ಸೇರಿಸಲಾಗಿದೆ. ಪ್ರತಿಭಟನೆಯಲ್ಲಿ ಪಾಲ್ಗೊಂಡವರು ಸಜ್ಜನರಲ್ಲ ಎಂದು ಟೀಕಿಸಿದ್ದೀರಿ, ನೀವು ಎಂತಹ ಸಜ್ಜನ ಎಂದು ಜಿಲ್ಲೆಯ ಜನರಿಗೆ ಗೊತ್ತಿದೆ ಎಂದು ಮುಖಂಡರು ತಿರುಗೇಟು ನೀಡಿದರು.

       ಜಾತಿಯನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎನ್ನತ್ತೀರಲ್ಲ, ಯಾವ ಅಧಿಕಾರಿ ಮತ್ತು ರಾಜಕಾರಣಿಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿ. ನೀವು ದಲಿತ ಕಾಲೋನಿಗಳಲ್ಲಿ ನಮ್ಮ ನೆಂಟರಿದ್ದಾರೆ, ಅವರ ಮನೆಗಳಲ್ಲಿ ತಿಂದುಂಡುಕೊಂಡಿದ್ದೇನೆ, ನನಗೆ ಯಾವುದೇ ಜಾತಿ ಇಲ್ಲ ಎಂದು ಪುಂಕಾನುಪುಂಕವಾಗಿ ಹೇಳುವ ನೀವು, ತಮ್ಮ ಬಾಯಿ ಚಪಲಕ್ಕೆ ಬಾಡೂಟ ತಿನ್ನಲು ದಲಿತರ ಮತ್ತು ಹಿಂದುಳಿದವರ ಮನೆಗಳಿಗೆ ಹೋಗಿದ್ದೀರೆ ಹೊರತು ಆ ಸಮುದಾಯಗಳ ಮುಖಂಡರನ್ನು ರಾಜಕೀಯವಾಗಿ ಬೆಳೆಸಿದ್ದೀರಾ, ಕನಿಷ್ಟಪಕ್ಷ ದಲಿತರ ಅಭಿವೃದ್ಧಿಗೆ ವಿಧಾನಸಭೆಯಲ್ಲಿ ಎಷ್ಟು ಬಾರಿ ಚರ್ಚೆ ಮಾಡಿದ್ದೀರಿ, ಎಷ್ಟು ಅನುದಾನ ತಂದಿದ್ದೀರಿ ಎಂಬುದನ್ನು ಬಹಿರಂಗಗೊಳಿಸಿ ಎಂದು ಒತ್ತಾಯಿಸಿದರು.

     ಸೊಗಡು ಶಿವಣ್ಣ ದಲಿತ ಸಮುದಾಯದ ಮನೆಯಲ್ಲಿ ಸಹಪಂಕ್ತಿ ಭೋಜನ ಮಾಡಿದ್ದಾರೆಯೆ? ದಲಿತರಲ್ಲೇ ಕಡುಬಡವರನ್ನು ಕರೆಸಿ, ತಮ್ಮ ಮನೆಯಲ್ಲಿ ಸಹಪಂಕ್ತಿ ಬಾಡೂಟ ಭೋಜನ ಏರ್ಪಡಿಸಿ ಎಂದು ಸವಾಲು ಹಾಕಿದ ಮುಖಂಡರು, ದಲಿತ ಸಮುದಾಯಕ್ಕೆ ಹತ್ತಿರವಾದವರು ನಾವೇ ಹೊರತು ನೀವಲ್ಲ, ನಾವು ಸದಾ ಹಿಂದುಳಿದವರು, ದಲಿತರು, ಅಲ್ಪ ಸಂಖ್ಯಾತರು, ಮೇಲ್ವರ್ಗದ ಕಡು ಬಡವರ ಅಭ್ಯುದಯಕ್ಕೆ ಶ್ರಮಿಸುತ್ತಿದ್ದೇವೆ ಎಂದರು. ಮುಂದಿನ ದಿನಗಳಲ್ಲಿ ಅಹಿಂದ ಸಮುದಾಯಕ್ಕೆ ಸಹಪಂಕ್ತಿ ಭೋಜನ ಏರ್ಪಡಿಸುತ್ತೇವೆ. ತಾವೂ ಆಗಮಿಸಿ, ನಾಗಣ್ಣರ ಸರ್ವರಿಗೂ ಸಮಪಾಲು, ಸಮ ಬಾಳು ಎಂಬ ನೀತಿಯನ್ನು ಕಣ್ಣಾರೆ ನೋಡಿ ಕಲಿಯಿರಿ ಎಂದು ಹೇಳಿದರು.ಮುಖಂಡರಾದ ಬರಗೂರು ನಟರಾಜು, ಸುನಿತಾ ನಟರಾಜ್, ನಾಗಭೂಷಣ್, ಪುಟ್ಟಲಿಂಗಯ್ಯ, ಕೆಂಪರಾಜು, ಶಂಕರ್, ಗುರುಪ್ರಕಾಶ್, ಗಂಗಹನುಮಯ್ಯ, ಅಂಜನ್, ಭರತ್‍ಕುಮಾರ್, ರಾಜೇಶ್ ಮೊದಲಾದವರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link