ಬೆಂಗಳೂರು
ಷರತ್ತು ರಹಿತ ಸಾಲ ಮನ್ನಾಮಾಡಿ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ಸೌಲಭ್ಯ ಕಲ್ಪಿಸುವುದು ಸೇರಿದಂತೆ ವಿವಿಧ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಬುಧವಾರ ರೈತರು, ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ ಸಾವಿರಾರು ರೈತರು ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಸೇರಿ ಅಲ್ಲಿಂದ ಫ್ರೀಡಂ ಪಾರ್ಕಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಸಮಾವೇಶಗೊಂಡು ರೈತರ ಸಾಲಮನ್ನಾ ಮಾಡುವಲ್ಲಿ ವಿಫಲವಾಗಿರುವ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರೈತ ಚೇತನ ಪ್ರೋ ಎಂ.ಡಿ.ನಂಜುಂಡಸ್ವಾಮಿ 83ನೇ ಜಯತೋತ್ಸವದ ಪ್ರಯುಕ್ತ ಕರ್ನಾಟಕದ ರಾಜ್ಯ ರೈತ ಸಂಘ,ನಂಜುಡಸ್ವಾಮಿ ರೈತ ಬಣ, ಮಹಾದಾಯಿ ಕಳಸಾ ಬಂಡೂರಿ ರೈತ, ಅಸಂಘಟಿತ ಕಾರ್ಮಿಕರ ಮಹಿಳೆಯರು ರೈತ ಹೋರಾಟ ಒಕ್ಕೂಟ ಕೇಂದ್ರ ಸಮಿತಿ ಸೇರಿದಂತೆ ಹತ್ತಕ್ಕೂ ಅಧಿಕ ರೈತ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ರೈತರ ಸಂಕಷ್ಟ ನಿವಾರಣೆಗೆ ಸ್ಪಂದಿಸದ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ರೈತರ ಸಾಲಮನ್ನಾ ಯೋಜನೆಯಲ್ಲಿನ ನ್ಯೂನತೆ ಸರಿಪಡಿಸಬೇಕು. ಇಲ್ಲದೆ ಇದ್ದರೆ ಸಾಲಮನ್ನಾ ಬಡ ರೈತರಿಗೆ ಸಿಗದಂತಾಗುವುದಿಲ್ಲ.ಭೂ ಅಭಿವೃದ್ಧಿ ಬ್ಯಾಂಕ್ಗಳಿಂದ ಪಡೆದ ಎತ್ತು, ಚಕ್ಕಡಿ, ಟ್ರ್ಯಾಕ್ಟರ್ ಹೈನುಗಾರಿಕೆ,ಕುರಿ ಸಾಗಣಿಕೆ ಸಾಲ, ಖಾಸಗಿ,ಪೈನಾನ್ಸ್ ಕಂಪನಿಗಳಲ್ಲಿ ತೆಗೆದುಕೊಂಡ ಸಾಲ,ಮಹಿಳಾ ಸ್ವಸಹಾಯ ಗುಂಪುಗಳಲ್ಲಿ ತೆಗೆದುಕೊಂಡ ಸಾಲಮನ್ನಾ ಮಾಡ ಬೇಕು. ಬೆಳೆ ವಿಮೆಯ ಅನ್ಯಾಯ ಸರಿಪಡಿಸ ಬೇಕು ಎಂದು ಒತ್ತಾಯಿಸಿದರು.
ಪ್ರೊ. ಎಂ.ಡಿ.ನಂಜುಡಸ್ವಾಮಿ ಅವರ ಅಭಿಪ್ರಾಯ ಆಶೋತ್ತರಗಳನ್ನ ಸರ್ಕಾರ ಈಡೇರಿಸಿಲ್ಲ ಇದನ್ನು ಖಂಡಿಸಿ ಜಯಂತಿ ದಿನದಂದು ರೈತರು ಅಹೋರಾತ್ರಿ ಧರಣಿ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.ಸರ್ಕಾರ 2009ಕ್ಕಿಂತ ಮೊದಲಿನ ಸಾಲಮನ್ನಾಮಾಡ ಬೇಕು ಹಾಗೂ ರೈತರು ಬೆಳೆದ ಬೆಳೆಗೆ ಬೆಲೆ ಸಿಗುತ್ತಿಲ್ಲ ಸರಕಾರ ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ನೀಡಬೇಕು ಎಂದು ಆಗ್ರಹಿಸಿದರು.
ಕಬ್ಬು ಬೆಳೆಗಾರರಿಗೆ ಕಟಾವು ಕೂಲಿ ಹೆಚ್ಚಳ, ಕಟಾವು ವಿಳಂಬ, ಇಳುವರಿಯಲ್ಲಿ ಮೋಸ ಆಗುತ್ತಿರುವ ಬಗ್ಗೆ ಗಮನ ಸೆಳೆಯುತ್ತಿದ್ದರು ಸರಕಾರ ಮಧ್ಯ ಪ್ರವೇಶಿಸಿ ನ್ಯಾಯ ಒದಗಿಸುತ್ತಿಲ್ಲ. ಪ್ರಸಕ್ತ ಸಾಲಿಗೆ ಎಫ್ಆರ್ಪಿಗಿಂತ ಹೆಚ್ಚಿನ ಬೆಲೆ ನಿಗದಿ ಮಾಡಬೇಕು, ದ್ವಿಪಕ್ಷೀಯ ಪತ್ರ ವ್ಯವಸ್ಥೆ ಜಾರಿಯಾಗಬೇಕು ಎಂದು ಒತ್ತಾಯಿಸಿದರು.
ಎಲ್ಲ ಹೋಬಳಿಗಳಲ್ಲೂ ಭತ್ತ ಖರೀದಿ ಕೇಂದ್ರ ತೆರೆಯುವುದಲ್ಲದೇ, ವಿಳಂಬ ಮಾಡದೇ ರೈತರಿಗೆ ಹಣ ಪಾವತಿಯಾಗುವಂತೆ ಕ್ರಮ ವಹಿಸಬೇಕು.ಅದೇ ರೀತಿ, ಕೃಷಿ ಪಂಪ್ಸೆಟ್ಗಳಿಗೆ 12 ಗಂಟೆ 3 ಫೇಸ್ ವಿದ್ಯುತ್ ನೀಡಬೇಕು, ಗ್ರಾಮೀಣ ಭಾಗದ ಮನೆ ವಿದ್ಯುತ್ ಬಾಕಿದಾರರ ಬಿಲ್ ಅನ್ನು ಮನ್ನಾ ಮಾಡಬೇಕು.
ಕೃಷಿ ಆಯೋಗ ರಚನೆ ಮಾಡಿ ರೈತರಿಗೆ ಮಾಸಿಕ ವೇತನ ನಿಗದಿ ಮಾಡಬೇಕು, ನದಿ ಮೂಲದಿಂದ ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸುವ ಯೋಜನೆ ಜಾರಿಗೊಳಿಸಬೇಕು, ಕೆರೆಗಳು ಇಲ್ಲದ ಗ್ರಾಮಗಳಲ್ಲಿ ಕೆರೆ ನಿರ್ಮಿಸಿ, ನೀರು ತುಂಬಿಸಬೇಕು, ಕಾಡಂಚಿನ ಗ್ರಾಮಗಳಿಗೆ ಮೂಲ ಸೌಕರ್ಯ ಕಲ್ಪಿಸಬೇಕು ಸೇರಿದಂತೆ ಮೂವತ್ತು ಬೇಡಿಕೆಗಳ ಹಕ್ಕೊತ್ತಾಯ ಮಂಡಿಸಿದರು.
ರೈತ ಮುಖಂಡರಾದ ಪಚ್ಚೆ ನಂಜುಂಡ ಸ್ವಾಮಿ, ನಾರಾಯಣ್ ರೆಡ್ಡಿ, ಉತ್ತರ ಕರ್ನಾಟಕದ ಶಂಕರ್ ಅಂಬ್ರಿ, ಲೋಕನಾಥ್ ಎಬ್ಬಸೂರತ್ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು.
ಬಿಗಿ ಭದ್ರತೆ
ಷರತ್ತು ಇಲ್ಲದ ಸಂಪೂರ್ಣ ಸಾಲ ಮನ್ನ,ಕರ್ನಾಟಕದಲ್ಲಿ ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ರೈತರು ಬೆಳೆದ ಬೆಳೆಗೆ ಮಾರ್ಕೆಟಿಂಗ್ ಆಗಬೇಕು
ಆಮದು ರಫ್ತು ನಡೆಯುತ್ತಿರುವ ರೀತಿಯನ್ನ ಬದಲಿಸಬೇಕು. ಸೇರಿದಂತೆ ಮೂವತ್ತು ಬೇಡಿಕೆಗಳಿಗೆ ಆಗ್ರಹಿಸಿ ರೈತರು ನಡೆಸಿದ ಪ್ರತಿಭಟನೆಗೆ ಪೊಲೀಸ್ ಬಿಗಿ ಬಂದೋಬಸ್ಥ್ ಕೈಗೊಳ್ಳಲಾಗಿತ್ತು ರೈತರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾಗುವ ಸಾಧ್ಯತೆಯಿದ್ದು ಯಾವುದೇ ಕಾರಣಕ್ಕೂ ವಿಧಾನಸೌಧದತ್ತ ನುಗ್ಗದಂತೆ ಪೊಲೀಸರು ಎಚ್ಚರಿಕೆ ವಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








