ಬೆಂಗಳೂರು
ಮುಂದೆ ಹೋಗುವ ವೇಳೆ ವ್ಯಕ್ತಿಯೊಬ್ಬರು ಅಡ್ಡಬಂದಿದ್ದರಿಂದ ಏಕಾಏಕಿ ನಿಲ್ಲಿಸಿದ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟಿರುವ ದುರ್ಘಟನೆ ದೇವನಹಳ್ಳಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತಪಟ್ಟವರನ್ನು ದೇವನಹಳ್ಳಿಯ ಮಂಜುನಾಥ್ (25)ಎಂದು ಗುರುತಿಸಲಾಗಿದೆ. ನೀರಿನ ಕ್ಯಾನ್ಗಳ ವ್ಯಾಪಾರ ಮಾಡುತ್ತಿದ್ದ ಮಂಜುನಾಥ್ ಅವರು ರಾತ್ರಿ 1ರ ವೇಳೆ ರಾಣಿ ಕ್ರಾಸ್ ಬಳಿ ಬೈಕ್ನಲ್ಲಿ ಹೋಗುತ್ತಿದ್ದಾಗ ಮುಂದೆ ಹೋಗುತ್ತಿದ್ದ ಲಾರಿ ಯುಪಿ ಡಾಬಾ ಬಳಿ ಏಕಾಏಕಿ ನಿಂತಿದೆ.
ಆಯತಪ್ಪಿ ಹಿಂದಿನಿಂದ ಡಿಕ್ಕಿ ಹೊಡೆದು ಕೆಳಗೆ ಬಿದ್ದ ಮಂಜುನಾಥ್ ಅವರನ್ನು ಕೂಡಲೇ ದೇವನಹಳ್ಳಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು, ಹೆಚ್ಚಿನ ಚಿಕಿತ್ಸೆಗಾಗಿ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಅಪಘಾತ ಎಸಗಿದ ಲಾರಿ ಚಾಲಕ ಚಂದನ್ನನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ಆತ ವ್ಯಕ್ತಿಯೊಬ್ಬರು ಏಕಾಏಕಿ ರಸ್ತೆಗೆ ಅಡ್ಡಬಂದಿದ್ದರಿಂದ ಲಾರಿಯನ್ನು ನಿಲ್ಲಿಸಬೇಕಾಯಿತು ಎಂದು ತಿಳಿಸಿದ್ದು, ದೇವನಹಳ್ಳಿ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








