ಶಾಸಕರುಗಳ ರಾಜಿನಾಮೆಯಿಂದ ಬಿರುಸುಗೊಂಡ ರಾಜಕೀಯ ಚಟುವಟಿಕೆ..!!

ತುಮಕೂರು:

     ಶಾಸಕ ಆನಂದ ಸಿಂಗ್ ರಾಜಿನಾಮೆ ನೀಡುತ್ತಿದ್ದಂತೆಯೇ ರಾಜ್ಯ ರಾಜಕಾರಣದಲ್ಲಿ ಬಿರುಸಿನ ಚಟುವಟಿಕೆಗಳು ಮಂಗಳವಾರ ದಿನವಿಡಿ ಜರುಗಿದವು. ಮೂರೂ ಪಕ್ಷಗಳಲ್ಲಿ ಮುಖಂಡರುಗಳ ಸಭೆ, ಮಾತುಕತೆಗಳು, ಸಮಾಲೋಚನಾ ಪ್ರಕ್ರಿಯೆಗಳು ನಡೆದಿವೆ.

     ಲೋಕಸಭಾ ಚುನಾವಣಾ ಫಲಿತಾಂಶದ ದಿನದಂದೇ ಸಮ್ಮಿಶ್ರ ಸರ್ಕಾರ ಬಿದ್ದು ಹೋಗುತ್ತದೆ ಎಂದು ಹೇಳಿಕೆ ನೀಡುತ್ತಿದ್ದ ಬಿಜೆಪಿ ನಾಯಕರು ಕೆಲವು ದಿನಗಳ ಕಾಲ ತಣ್ಣಗಾಗಿದ್ದರು. ಆದರೂ ಒಳಂದೊಳಗೆ ಆಪರೇಷನ್ ಕಮಲ ಪ್ರಕ್ರಿಯೆ ನಡೆಯುತ್ತಲೇ ಇತ್ತು. ಇದೀಗ ಆನಂದ ಸಿಂಗ್ ರಾಜೀನಾಮೆಯೊಂದಿಗೆ ಮತ್ತೊಂದು ಪ್ರಯತ್ನ ಮುಂದುವರೆದಿದೆ. ರಮೇಶ್ ಜಾರಕಿ ಹೊಳಿ ರಾಜೀನಾಮೆ ಪತ್ರ ವಿವಾದ ಮೂಡಿಸಿದೆ.

      ಕೈನಲ್ಲಿ ಬರೆದಿರುವ ರಾಜಿನಾಮೆ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಎಲ್ಲಿಗೆ ಈ ಪತ್ರ ಸೇರಬೇಕಿತ್ತು ಅಲ್ಲಿಗೆ ತಲುಪಿಲ್ಲ ಎನ್ನುವ ಅಂಶ ಗಂಭೀರತೆ ಪಡೆದುಕೊಂಡಿದೆ. ಇದರ ಹಿಂದೆ ಏನೇನು ನಾಟಕಗಳು ನಡೆಯುತ್ತಿವೆ, ಸೂತ್ರಧಾರರು ಯಾರು ಎಂಬೆಲ್ಲಾ ಚರ್ಚೆಗಳು ಆರಂಭವಾಗಿವೆ.

       ಅತ್ತ ರಾಜಿನಾಮೆ ಪ್ರಕ್ರಿಯೆ ನಡೆದು ಇನ್ನೂ ಕೆಲವರು ರಾಜಿನಾಮೆ ಕೊಡಲಿದ್ದಾರೆಂಬ ಸುದ್ದಿ ಹರಿದಾಡುತ್ತಿದ್ದ ಸಮಯದಲ್ಲಿ ಇತ್ತ ಬೆಂಗಳೂರಿನತ್ತ ಹಲವು ಶಾಸಕರು ಮತ್ತು ಸಚಿವರು ದೌಡಾಯಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿವಾಸಕ್ಕೆ ತುಮಕೂರು ಜಿಲ್ಲೆಯ ಅನೇಕ ಬಿಜೆಪಿ ಶಾಸಕರು ಬೆಳ್ಳಂಬೆಳಿಗ್ಗೆ ದೌಡಾಯಿಸಿದರು. ಅಲ್ಲಿ ಮುಂದಿನ ರಾಜಕೀಯ ವಿದ್ಯಮಾನಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಮಂತ್ರಿಗಿರಿಗೆ ಆಸೆಪಟ್ಟವರು, ಮಧ್ಯಂತರ ಚುನಾವಣೆಗೆ ಮನಸ್ಸು ಒಪ್ಪದವರು ಸೇರಿದಂತೆ ವಿವಿಧ ಶಾಸಕರುಗಳು ಬಿ.ಎಸ್.ಯಡಿಯೂರಪ್ಪ ನಿವಾಸಕ್ಕೆ ದೌಡಾಯಿಸಿ ತೀವ್ರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

      ಇತ್ತ ಕಾಂಗ್ರೆಸ್‍ನಲ್ಲಿಯೂ ಚಟುವಟಿಕೆಗಳು ಬಿರುಸುಗೊಂಡವು. ಅತೃಪ್ತ ಶಾಸಕರು ಕ್ರಿಯಾಶೀಲರಾಗಿದ್ದಂತೆ ಕಂಡುಬಂದರೆ, ಮಾಜಿ ಶಾಸಕರು ಸಹ ಅಷ್ಟೇ ಹುರುಪಿನಿಂದ ಬೆಂಗಳೂರಿನತ್ತ ದೌಡಾಯಿಸಿದ್ದಾರೆ. ತುಮಕೂರು ಜಿಲ್ಲೆಯ ಎಂ.ಡಿ.ಲಕ್ಷ್ಮೀನಾರಾಯಣ, ಕೆ.ಎನ್.ರಾಜಣ್ಣ, ಸೇರಿದಂತೆ ವಿವಿಧ ಭಾಗಗಳ ಎಚ್.ಸಿ.ಮಹದೇವಪ್ಪ, ತರೀಕೆರೆ ಶ್ರೀನಿವಾಸ್, ಶಿವರಾಜ್ ತಂಗಡಗಿ, ಮೈಸೂರು ಸೋಮಶೇಖರ್ ಮೊದಲಾದವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮುಂದಿನ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ್ದಾರೆ. ಇವರಲ್ಲಿ ಹಲವರಿಗೆ ಮಧ್ಯಂತರ ಚುನಾವಣೆಯ ಮೇಲೆ ಹೆಚ್ಚು ಆಸಕ್ತಿ ಇದ್ದಂತೆ ಕಾಣುತ್ತಿದೆ.

      ಅಮೇರಿಕಾದಲ್ಲಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅತೃಪ್ತ ಶಾಸಕರಿಗೆ ಕರೆ ಮಾಡಿ ಮಾತನಾಡಿದ್ದಾರೆನ್ನಲಾಗಿದೆ. ಸಮ್ಮಿಶ್ರ ಸರ್ಕಾರದಲ್ಲಿ ಕೆಲವರು ಸರ್ಕಾರ ಇದ್ದರೆ ಇರಲಿ, ಹೋದರೆ ಹೋಗಲಿ ಎನ್ನುವವರಿದ್ದು, ಮಾಜಿಯಾಗಿರುವವರು ತುಂಬಾ ಕ್ರಿಯಾಶೀಲರಾಗಿದ್ದಾರೆ.

       ಇದರ ಜೊತೆಯಲ್ಲೇ ಸರ್ಕಾರವನ್ನು ಬ್ಲಾಕ್‍ಮೇಲ್ ಮಾಡಲು ಯತ್ನಿಸುತ್ತಿರುವ ಶಾಸಕರಿಗೆ ತಿರುಗೇಟು ನೀಡಲು ಕಾಂಗ್ರೆಸ್ ಸಹ ತಂತ್ರ ಎಣೆಯುತ್ತಿದೆ. ಆನಂದ್ ಸಿಂಗ್ ರಾಜಿನಾಮೆ ಹಿಂದೆ ಯಾರಿದ್ದಾರೆ? ರಮೇಶ್ ಜಾರಕಿ ಹೂಳಿ ರಾಜೀನಾಮೆ ಪತ್ರ ಸಾಮಾಜಿಕ ಮಾಧ್ಯಮಗಳಿಗೆ ಹರಿದಾಡಿದ್ದೇಕೆ? ಅವರು ರಾಜಧಾನಿ ದೆಹಲಿಗೆ ತೆರಳಿದ ಕಾರಣವೇನು? ಎಂಬಿತ್ಯಾದಿ ಮೂಲಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇಲ್ಲಿನ ವಿದ್ಯಮಾನಗಳು ದೆಹಲಿಗೆ ರವಾನೆಯಾಗಿದ್ದು, ಕಾಂಗ್ರೆಸ್‍ನ ಕೆ.ಸಿ.ವೇಣುಗೋಪಾಲ್ ಮಂಗಳವಾರ ಬೆಳಗ್ಗೆಯೇ ಹಲವರೊಂದಿಗೆ ಚರ್ಚೆ ನಡೆಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link